ಸಾರಥಿಗಳೊಳಗೆನಿಸಿದನು ಭೂ
ಭಾರಭಂಜಕನಸುರಹರನೀ
ಭಾರ ಬಿದ್ದುದು ನಮಗೆ ಪಾಂಚಾಲಪ್ರಬದ್ಧಕರ
ತೀರಿತಿದು ನಿಮ್ಮಲ್ಲಿ ನಮ್ಮ ವಿ
ಹಾರವೊಡಬೆಚ್ಚಿತು ರಿಪುವ್ರಜ
ಮಾರಣಾಧ್ವರಕೃತಿಯ ನೀ ಕೈಕೊಳಿಸು ಹೋಗೆಂದ (ಗದಾ ಪರ್ವ, ೯ ಸಂಧಿ, ೨೪ ಪದ್ಯ)
ತಾತ್ಪರ್ಯ:
ಭೂಭಾರ ಹರನವನ್ನು ಮಾಡಲು ಶ್ರೀಕೃಷ್ಣನು ಅರ್ಜುನನ ಸಾರಥಿಯಾಗಿದ್ದನು. ಪಾಂಚಾಲ ಪ್ರಬುದ್ಧಕರ ಭಾರ ನನ್ನ ಮೇಲೆ ಬಿದ್ದಿತು. ನಿನ್ನಿಂದ ಈ ಕೆಲಸವಾಗುತ್ತದೆ. ನನ್ನ ಭಾರವಿಳಿಯಿತು. ಶತ್ರುಗಳ ಮಾರಣಹೋಮ ಮಾಡು ಹೋಗು ಎಂದು ಶಿವನು ಅನುಗ್ರಹಿಸಿದನು.
ಅರ್ಥ:
ಸಾರಥಿ: ಸೂತ; ಭೂ: ಭೂಮಿ; ಭಾರ: ಹೊರೆ; ಭಂಜಕ: ಮುರಿಯುವವನು, ನಾಶಮಾಡುವವನು; ಅಸುರ: ರಾಕ್ಷಸ; ಬಿದ್ದು: ಬೀಳು; ಪ್ರಬುದ್ಧ: ಜ್ಞಾನಿ, ವಿದ್ವಾಂಸ; ತೀರು: ಅಂತ್ಯ, ಮುಕ್ತಾಯ; ವಿಹಾರ: ಕಾಲ ಕಳೆಯುವುದು, ಅಲೆದಾಟ; ಬೆಚ್ಚು: ಹೆದರು; ರಿಪು: ವೈರಿ; ವ್ರಜ: ಗುಂಪು; ಮಾರಣ: ಕೊಲೆ, ವಧೆ; ಅಧ್ವರ: ಯಜ್ಞ, ಹೋಮ; ಕೃತಿ: ರಚನೆ; ಕೈಕೊಳ್ಳು: ನಡೆಸು; ಹೋಗು: ತೆರಳು;
ಪದವಿಂಗಡಣೆ:
ಸಾರಥಿಗಳೊಳಗ್+ಎನಿಸಿದನು+ ಭೂ
ಭಾರ+ಭಂಜಕನ್+ಅಸುರ+ಹರನ್+ಈ
ಭಾರ +ಬಿದ್ದುದು +ನಮಗೆ +ಪಾಂಚಾಲ+ಪ್ರಬದ್ಧಕರ
ತೀರಿತಿದು +ನಿಮ್ಮಲ್ಲಿ+ ನಮ್ಮ+ ವಿ
ಹಾರವೊಡ+ಬೆಚ್ಚಿತು +ರಿಪು+ವ್ರಜ
ಮಾರಣಾಧ್ವರ+ ಕೃತಿಯ +ನೀ +ಕೈಕೊಳಿಸು +ಹೋಗೆಂದ
ಅಚ್ಚರಿ:
(೧) ಕೃಷ್ಣನನ್ನು ಭೂಭಾರಭಂಜಕ ಎಂದು ಕರೆದಿರುವುದು
(೨) ನಾಶಮಾಡು ಎಂದು ಹೇಳುವ ಪರಿ – ರಿಪುವ್ರಜ ಮಾರಣಾಧ್ವರಕೃತಿಯ ನೀ ಕೈಕೊಳಿಸು