ಪದ್ಯ ೨೪: ಶಿವನು ಅಶ್ವತ್ಥಾಮನನ್ನು ಹೇಗೆ ಹರಸಿದನು?

ಸಾರಥಿಗಳೊಳಗೆನಿಸಿದನು ಭೂ
ಭಾರಭಂಜಕನಸುರಹರನೀ
ಭಾರ ಬಿದ್ದುದು ನಮಗೆ ಪಾಂಚಾಲಪ್ರಬದ್ಧಕರ
ತೀರಿತಿದು ನಿಮ್ಮಲ್ಲಿ ನಮ್ಮ ವಿ
ಹಾರವೊಡಬೆಚ್ಚಿತು ರಿಪುವ್ರಜ
ಮಾರಣಾಧ್ವರಕೃತಿಯ ನೀ ಕೈಕೊಳಿಸು ಹೋಗೆಂದ (ಗದಾ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೂಭಾರ ಹರನವನ್ನು ಮಾಡಲು ಶ್ರೀಕೃಷ್ಣನು ಅರ್ಜುನನ ಸಾರಥಿಯಾಗಿದ್ದನು. ಪಾಂಚಾಲ ಪ್ರಬುದ್ಧಕರ ಭಾರ ನನ್ನ ಮೇಲೆ ಬಿದ್ದಿತು. ನಿನ್ನಿಂದ ಈ ಕೆಲಸವಾಗುತ್ತದೆ. ನನ್ನ ಭಾರವಿಳಿಯಿತು. ಶತ್ರುಗಳ ಮಾರಣಹೋಮ ಮಾಡು ಹೋಗು ಎಂದು ಶಿವನು ಅನುಗ್ರಹಿಸಿದನು.

ಅರ್ಥ:
ಸಾರಥಿ: ಸೂತ; ಭೂ: ಭೂಮಿ; ಭಾರ: ಹೊರೆ; ಭಂಜಕ: ಮುರಿಯುವವನು, ನಾಶಮಾಡುವವನು; ಅಸುರ: ರಾಕ್ಷಸ; ಬಿದ್ದು: ಬೀಳು; ಪ್ರಬುದ್ಧ: ಜ್ಞಾನಿ, ವಿದ್ವಾಂಸ; ತೀರು: ಅಂತ್ಯ, ಮುಕ್ತಾಯ; ವಿಹಾರ: ಕಾಲ ಕಳೆಯುವುದು, ಅಲೆದಾಟ; ಬೆಚ್ಚು: ಹೆದರು; ರಿಪು: ವೈರಿ; ವ್ರಜ: ಗುಂಪು; ಮಾರಣ: ಕೊಲೆ, ವಧೆ; ಅಧ್ವರ: ಯಜ್ಞ, ಹೋಮ; ಕೃತಿ: ರಚನೆ; ಕೈಕೊಳ್ಳು: ನಡೆಸು; ಹೋಗು: ತೆರಳು;

ಪದವಿಂಗಡಣೆ:
ಸಾರಥಿಗಳೊಳಗ್+ಎನಿಸಿದನು+ ಭೂ
ಭಾರ+ಭಂಜಕನ್+ಅಸುರ+ಹರನ್+ಈ
ಭಾರ +ಬಿದ್ದುದು +ನಮಗೆ +ಪಾಂಚಾಲ+ಪ್ರಬದ್ಧಕರ
ತೀರಿತಿದು +ನಿಮ್ಮಲ್ಲಿ+ ನಮ್ಮ+ ವಿ
ಹಾರವೊಡ+ಬೆಚ್ಚಿತು +ರಿಪು+ವ್ರಜ
ಮಾರಣಾಧ್ವರ+ ಕೃತಿಯ +ನೀ +ಕೈಕೊಳಿಸು +ಹೋಗೆಂದ

ಅಚ್ಚರಿ:
(೧) ಕೃಷ್ಣನನ್ನು ಭೂಭಾರಭಂಜಕ ಎಂದು ಕರೆದಿರುವುದು
(೨) ನಾಶಮಾಡು ಎಂದು ಹೇಳುವ ಪರಿ – ರಿಪುವ್ರಜ ಮಾರಣಾಧ್ವರಕೃತಿಯ ನೀ ಕೈಕೊಳಿಸು

ಪದ್ಯ ೬೦: ಶಲ್ಯನು ಭೀಮನನ್ನು ಹೇಗೆ ಹೊಗಳಿದನು?

ಲೇಸ ಮಾಡಿದೆ ಭೀಮ ಕಟ್ಟಾ
ಳೈಸಲೇ ನೀನವರೊಳಗೆ ನಿ
ನ್ನಾಸೆಯಲ್ಲಾ ಧರ್ಮಪುತ್ರನ ಸತ್ವಸಂಪದಕೆ
ಐಸೆ ಬಳಿಕೇನೆನುತ ಶಲ್ಯ ಮ
ಹೀಶ ಮುರಿಯಲು ಹೊಸ ರಥವ ಮೇ
ಳೈಸಿ ಸಾರಥಿ ಸಂಧಿಸಿದನವಧಾನ ಜೀಯೆನುತ (ಶಲ್ಯ ಪರ್ವ, ೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ಶಲ್ಯನು ಮಾತನಾಡುತ್ತಾ, ನೀನು ಪಾಂಡವರಲ್ಲಿ ಮಹಾಯೋಧ, ಧರ್ಮಜನ ಸತ್ವವು ನಿನ್ನ ಬಲವನ್ನೇ ಅವಲಂಬಿಸಿದೆ ಎನ್ನುತ್ತಾ ಶಲ್ಯನು ಪಕ್ಕಕ್ಕೆ ತಿರುಗಲು, ಅವನ ಸಾರಥಿಯು ಹೊಸ ರಥವನ್ನು ತಂದು ನಿಲ್ಲಿಸಿ, ಒಡೆಯಾ ಚಿತ್ತೈಸಿ ಎಂದು ಹೇಳಿದನು.

ಅರ್ಥ:
ಲೇಸು: ಒಳಿತು; ಕಟ್ಟಾಳು: ಶೂರ; ಐಸಲೇ: ಅಲ್ಲವೇ; ಆಸೆ: ಇಚ್ಛೆ; ಸತ್ವ: ಸಾರ; ಸಂಪದ: ಐಶ್ವರ್ಯ, ಸಂಪತ್ತು; ಐಸು: ಅಷ್ಟು; ಬಳಿಕ: ನಂತರ; ಮಹೀಶ: ರಾಜ; ಮುರಿ: ಸೀಳು; ಹೊಸ: ನವ; ರಥ: ಬಂದಿ; ಮೇಳೈಸು: ಕೂಡಿಸು; ಸಾರಥಿ: ಸೂತ; ಸಂಧಿಸು: ಕೂಡು, ಸೇರು; ಅವಧಾನ: ಎಚ್ಚರಿಕೆ ಹೇಳುವುದು; ಜೀಯ: ಒಡೆಯ;

ಪದವಿಂಗಡಣೆ:
ಲೇಸ+ ಮಾಡಿದೆ +ಭೀಮ +ಕಟ್ಟಾಳ್
ಐಸಲೇ +ನೀನ್+ಅವರೊಳಗೆ +ನಿ
ನ್ನಾಸೆಯಲ್ಲಾ +ಧರ್ಮಪುತ್ರನ+ ಸತ್ವ+ಸಂಪದಕೆ
ಐಸೆ+ ಬಳಿಕೇನ್+ಎನುತ +ಶಲ್ಯ+ ಮ
ಹೀಶ +ಮುರಿಯಲು+ ಹೊಸ +ರಥವ +ಮೇ
ಳೈಸಿ +ಸಾರಥಿ +ಸಂಧಿಸಿದನ್+ಅವಧಾನ +ಜೀಯೆನುತ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಭೀಮ ಕಟ್ಟಾಳೈಸಲೇ

ಪದ್ಯ ೫೫: ಶಲ್ಯನು ಕೋಪಗೊಳ್ಳಲು ಕಾರಣವೇನು?

ಅರಸ ಕೇಳೈ ಬಳಿಕ ಮಾದ್ರೇ
ಶ್ವರನ ರಥ ಸಾರಥಿ ವಿಸಂಚಿಸ
ಲುರಿದನಧಿಕಕ್ರೋಧಶಿಖಿ ಪಲ್ಕೈಸಿತಕ್ಷಿಯಲಿ
ಕುರುಬಲದ ತಲ್ಲಣವನುರೆ ಸಂ
ಹರಿಸಿ ಹರಿಗೆಯಡಾಯುಧದಲರಿ
ಧರಣಿಪನಮೇಲ್ವಾಯ್ದು ಹೊಯ್ದನು ರಥ ಹಯಾವಳಿಯ (ಶಲ್ಯ ಪರ್ವ, ೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಧರ್ಮಜನ ದಾಳಿಯಿಂದ ರಥ ಸಾರಥಿಗಳು ಇಲ್ಲದಂತಾಗಲು, ಶಲ್ಯನು ಕೋಪದಿಂದುರಿದನು. ಕೋಪಾಗ್ನಿಯು ಕಣ್ಣನ್ನಾವರಿಸಿತು. ತಲ್ಲಣಿಸುತ್ತಿದ್ದ ಕುರುಸೇನೆಯನ್ನು ಸಮಾಧಾನ ಪಡಿಸಿ ಕತ್ತಿ ಗುರಾಣಿಗಳನ್ನು ಹಿಡಿದು ಧರ್ಮಜನ ರಥದ ಮೇಲೆರಗಿ ರಥವನ್ನು ಕುದುರೆಗಳನ್ನು ಹೊಡೆದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ರಥ: ಬಂಡಿ; ಸಾರಥಿ: ಸೂತ; ವಿಸಂಚ: ಪಿತೂರಿ, ಕಪಟ; ಉರಿ: ಜ್ವಾಲೆ, ಸಂಕಟ; ಅಧಿಕ: ಹೆಚ್ಚು; ಕ್ರೋಧ: ಕೋಪ; ಶಿಖಿ: ಬೆಂಕಿ; ಪಲ್ಕೈಸು: ಆವರಿಸು; ಅಕ್ಷಿ: ಕಣ್ಣು; ಬಲ: ಸೈನ್ಯ; ತಲ್ಲಣ: ಗೊಂದಲ; ಉರೆ: ಹೆಚ್ಚು; ಸಂಹರಿಸು: ನಾಶಮಾಡು; ಹರಿ: ಕಡಿ, ಕತ್ತರಿಸು; ಆಯುಧ: ಶಸ್ತ್ರ; ಅರಿ: ವೈರಿ: ಧರಣಿಪ: ರಾಜ; ಹೊಯ್ದು: ಹೊಡೆ; ರಥ: ಬಂಡಿ; ಹಯಾವಳಿ: ಕುದುರೆಗಳ ಸಾಲು;

ಪದವಿಂಗಡಣೆ:
ಅರಸ +ಕೇಳೈ +ಬಳಿಕ+ ಮಾದ್ರೇ
ಶ್ವರನ +ರಥ +ಸಾರಥಿ +ವಿಸಂಚಿಸಲ್
ಉರಿದನ್+ಅಧಿಕ+ಕ್ರೋಧ+ಶಿಖಿ +ಪಲ್ಕೈಸಿತ್+ಅಕ್ಷಿಯಲಿ
ಕುರು+ಬಲದ +ತಲ್ಲಣವನ್+ಉರೆ +ಸಂ
ಹರಿಸಿ +ಹರಿಗೆ+ಅಡಾಯುಧದಲ್+ಅರಿ
ಧರಣಿಪನ+ಮೇಲ್ವಾಯ್ದು +ಹೊಯ್ದನು +ರಥ +ಹಯಾವಳಿಯ

ಅಚ್ಚರಿ:
(೧) ಧರ್ಮಜ ಎಂದು ಹೇಳಲು – ಅರಿಧರಣಿಪ ಪದದ ಬಳಕೆ
(೨) ಶಲ್ಯನ ಮನಸ್ಥಿತಿ – ಉರಿದನಧಿಕಕ್ರೋಧಶಿಖಿ ಪಲ್ಕೈಸಿತಕ್ಷಿಯಲಿ
(೩) ಹರಿ, ಅರಿ – ೫ನೇ ಸಾಲಿನ ಮೊದಲ ಹಾಗು ಕೊನೆ ಪದ

ಪದ್ಯ ೫೩: ಧರ್ಮಜನು ಎಷ್ಟು ಬಾಣಗಳಿಂದ ಶಲ್ಯನ ರಥವನ್ನು ಕಡೆದನು?

ಕಾದುಕೊಳು ಮಾದ್ರೇಶ ಕುರುಬಲ
ವೈದಿಬರಲಿಂದಿನಲಿ ನಿನ್ನಯ
ಮೈದುನನ ಕಾಣಿಕೆಯಲೇ ಸಂಘಟನೆಗೀ ಸರಳು
ಕೈದುಕಾತಿಯರುಂಟೆ ಕರೆ ನೀ
ನೈದಲಾರೆಯೆನುತ್ತ ಮೂನೂ
ರೈದು ಶರದಲಿ ಕಡಿದನಾ ಸಾರಥಿಯ ರಥ ಹಯವ (ಶಲ್ಯ ಪರ್ವ, ೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಲೈ ಶಲ್ಯ, ಕೌರವ ಬಲವು ನಿನ್ನ ಸಹಾಯಕ್ಕೆ ಒಗ್ಗಟ್ಟಾಗಿ ಬರಲಿ, ನನ್ನ ಬಾಣಗಳ ದಾಳಿಯಿಂದ ನಿನ್ನನ್ನು ಕಾಪಾಡಿಕೋ. ಈಗ ನಾನು ಬಿಡುವ ಈ ಬಾಣಗಳು ನಿನ್ನ ಮೈದುನನ ಕಾಣಿಕೆಯೆಂದು ಭಾವಿಸು. ಈ ಬಾಣವನ್ನು ನೀನು ತಡೆದುಕೊಳ್ಳಲಾರೆ, ಆದ್ದರಿಂದ ನಿನ್ನ ಸೇನೆಯಲ್ಲಿ ಕೈದುಕಾತಿಯರಿದ್ದರೆ ನಿನ್ನ ಸಹಾಯಕ್ಕೆ ಕರೆದುಕೋ ಎಂದು ಮೂದಲಿಸಿ ಧರ್ಮಜನು ಮುನ್ನೂರೈದು ಬಾಣಗಳಿಂದ ಶಲ್ಯ್ನ ಸಾರಥಿ, ರಥ, ಕುದುರೆಗಳನ್ನು ಕಡೆದನು.

ಅರ್ಥ:
ಕಾದು: ಹೋರಾಟ, ಯುದ್ಧ, ಸೈರಿಸು; ಐದು: ಬಂದು ಸೇರು; ಮೈದುನ: ತಂಗಿಯ ಗಂಡ; ಕಾಣಿಕೆ: ಕೊಡುಗೆ; ಸಂಘಟನೆ: ಜೋಡಣೆ; ಸರಳು: ಬಾಣ; ಕೈದು: ಆಯುಧ; ಕೈದುಕಾರ: ಪರಾಕ್ರಮಿ; ಕರೆ: ಬರೆಮಾದು; ಶರ: ಬಾಣ; ಕಡಿ: ಸೀಳು; ಸಾರಥಿ: ಸೂತ; ರಥ: ಬಂಡಿ; ಹಯ: ಕುದುರೆ;

ಪದವಿಂಗಡಣೆ:
ಕಾದುಕೊಳು+ ಮಾದ್ರೇಶ +ಕುರುಬಲವ್
ಐದಿಬರಲ್+ಇಂದಿನಲಿ +ನಿನ್ನಯ
ಮೈದುನನ +ಕಾಣಿಕೆಯಲೇ +ಸಂಘಟನೆಗೀ+ ಸರಳು
ಕೈದುಕಾತಿಯರುಂಟೆ +ಕರೆ +ನೀನ್
ಐದಲಾರೆ+ಎನುತ್ತ +ಮೂನೂ
ರೈದು +ಶರದಲಿ +ಕಡಿದನಾ +ಸಾರಥಿಯ +ರಥ+ ಹಯವ

ಅಚ್ಚರಿ:
(೧) ಪರಾಕ್ರಮಿ ಎಂದು ಹೇಳಲು – ಕೈದುಕಾತಿ ಪದದ ಬಳಕೆ

ಪದ್ಯ ೧೦: ಅಶ್ವತ್ಥಾಮನು ಯಾವ ಭಾವದಿಂದ ಮೇಲೆದ್ದನು?

ಕೆದರಿ ಹೊರಳುವ ಸಾರಥಿಯನೆ
ತ್ತಿದನು ರಣವೃತ್ತಾಂತವನು ಕೇ
ಳಿದನು ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ
ಒದೆದನಳಲನು ರೋಮ ಹರುಷವ
ಹೊದೆದು ಹೊರೆ ಹೆಚ್ಚಿದನು ಕಾಹೇ
ರಿದನು ಕಲಿ ಮನವಳುಕಿ ತಗ್ಗಿತು ರೋಷಭಾವದಲಿ (ದ್ರೋಣ ಪರ್ವ, ೧೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕೆಳಕ್ಕೆ ಬಿದ್ದು ತಲೆಗೆದರಿ, ಮನಕರಗಿ ಹೊರಳುವ ಸಾರಥಿಯಿಂದ ಯುದ್ಧದ ವೃತ್ತಾಂತವನ್ನು ಅಶ್ವತ್ಥಾಮನು ತಿಳಿದುಕೊಂಡನು. ಶಮೆ, ತಾಳ್ಮೆ, ವಿವೇಕ, ನೋವುಗಳನ್ನು ಹೊರನೂಕಿ, ತನ್ನ ರೋಮ ರೋಮದಲ್ಲೂ ರೋಮಾಂಚನಗೊಂಡು ವೀರನಾದ ಅವನ ಮನಸ್ಸು ರೋಷಭಾವದಿಂದ ತುಂಬಿತು.

ಅರ್ಥ:
ಕೆದರು: ಹರಡು; ಹೊರಳು: ತಿರುವು, ಬಾಗು; ಸಾರಥಿ: ಸೂತ; ಎತ್ತು: ಮೇಲೇಳಿಸು; ರಣ: ಯುದ್ಧ; ವೃತ್ತಾಂತ: ವಿಚಾರ; ಕೇಳು: ಆಲಿಸು; ಶಮೆ: ಮನೋನಿಗ್ರಹ; ಸೈರಣೆ: ತಾಳ್ಮೆ; ವಿವೇಕ: ಯುಕ್ತಾಯುಕ್ತ ವಿಚಾರ; ನೂಕು: ತಳ್ಳು; ಸೆರೆ: ಬಂಧನ; ಒದೆ: ನೂಕು; ಅಳಲು: ಗೋಳಾಟ, ನೋವು; ರೋಮ: ಕೂದಲು; ಹರುಷ: ಸಂತಸ; ಹೊದೆ:ಧರಿಸಿಕೊಳ್ಳು; ಹೊರೆ: ಭಾರ; ಹೆಚ್ಚು: ಅಧಿಕ; ಕಾವು: ತಾಪ; ಕಲಿ: ಶೂರ; ಮನ: ಮನಸ್ಸು; ಅಳುಕು: ಹೆದರು; ತಗ್ಗು: ಕಡಿಮೆಯಾಗು; ರೋಷ: ಕೋಪ; ಭಾವ: ಭಾವನೆ;

ಪದವಿಂಗಡಣೆ:
ಕೆದರಿ +ಹೊರಳುವ +ಸಾರಥಿಯನ್
ಎತ್ತಿದನು +ರಣ+ವೃತ್ತಾಂತವನು +ಕೇ
ಳಿದನು +ಶಮೆ +ಸೈರಣೆ+ವಿವೇಕವ+ ನೂಕಿದನು +ಸೆರೆಗೆ
ಒದೆದನ್+ಅಳಲನು +ರೋಮ +ಹರುಷವ
ಹೊದೆದು +ಹೊರೆ +ಹೆಚ್ಚಿದನು +ಕಾಹೇ
ರಿದನು +ಕಲಿ+ ಮನವ್+ಅಳುಕಿ +ತಗ್ಗಿತು +ರೋಷ+ಭಾವದಲಿ

ಅಚ್ಚರಿ:
(೧) ಹ ಕಾರದ ಸಾಲು ಪದ – ಹರುಷವ ಹೊದೆದು ಹೊರೆ ಹೆಚ್ಚಿದನು
(೨) ಕೋಪದ ಸ್ಥಿತಿ – ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ
(೩) ರೋಮಾಂಚನವನ್ನು ವಿವರಿಸುವ ಪರಿ – ರೋಮ ಹರುಷವ ಹೊದೆದು

ಪದ್ಯ ೭: ಸಾರಥಿಯು ಯಾರು ಬಂದಿದ್ದಾರೆಂದು ಹೇಳಿದನು?

ತಂದು ಸಾರಥಿ ರಥವನೀತನ
ಮುಂದೆ ನಿಲಿಸಿದ ಬಿದ್ದನಂಘ್ರಿಯೊ
ಳಂದು ಗೋಳಿಟ್ಟೊರಲಿದುದು ಕಳಶಜನ ಪರಿವಾರ
ತಂದೆಯೈದನೆ ಚಾಪವೇದಮು
ಕುಂದನೈದನೆ ನಿನ್ನ ಕಾಣಲು
ಬಂದನಯ್ಯನನಪ್ಪಿಕೊಳು ಮಾತಾಡಿ ನೋಡೆಂದ (ದ್ರೋಣ ಪರ್ವ, ೧೯ ಸಂಧಿ, ೭ ಪದ್ಯ)

ತಾತ್ಪರ್ಯ:
ಸಾರಥಿಯು ರಥವನ್ನು ತಂದು ಅಶ್ವತ್ಥಾಮನ ಮುಂದೆ ನಿಲ್ಲಿಸಿದನು. ಅವನ ಪಾದದ ಮೇಲೆ ಬಿದ್ದು ದ್ರೋಣನ ಪರಿವಾರದವರು ಗೋಳಿಟ್ಟರು. ತಂದೆ ಬಂದಿದ್ದಾನೆ, ಧನುರ್ವೇದದ ನಾರಾಯಣನು ನಿನ್ನನ್ನು ನೋಡಲು ಬಂದಿದ್ದಾನೆ, ಅವನನ್ನು ನೋಡಿ ಆಲಂಗಿಸಿ ಮಾತಾಡಿಸು ಎಂದು ಸಾರಥಿಯು ಅಳುತ್ತಾ ಹೇಳಿದನು.

ಅರ್ಥ:
ತಂದು: ಬಂದು ಸೇರು; ಸಾರಥಿ: ಸೂತ; ರಥ: ಬಂಡಿ; ಮುಂದೆ: ಎದುರು; ನಿಲಿಸು: ನಿಲ್ಲು, ತಡೆ; ಬಿದ್ದು: ಬೀಳು; ಅಂಘ್ರಿ: ಪಾದ; ಗೋಳಿಡು: ಅಳು, ದುಃಖಿಸು; ಒರಲು: ಅರಚು, ಕೂಗಿಕೊಳ್ಳು; ಕಳಶಜ: ದ್ರೋಣ; ಪರಿವಾರ: ಬಂಧು ಬಳಗ; ತಂದೆ: ಅಯ್ಯ, ಪಿತ; ಐದು: ಬಂದುಸೇರು; ಚಾಪ: ಬಿಲ್ಲು; ಮುಕುಂದ: ಕೃಷ್ಣ; ಕಾಣು: ತೋರು; ಅಯ್ಯ: ತಂದೆ; ಅಪ್ಪು: ಆಲಂಗಿಸು; ಮಾತು: ವಾಣಿ; ನೋಡು: ವೀಕ್ಷಿಸು;

ಪದವಿಂಗಡಣೆ:
ತಂದು +ಸಾರಥಿ +ರಥವನ್+ಈತನ
ಮುಂದೆ +ನಿಲಿಸಿದ+ ಬಿದ್ದನ್+ಅಂಘ್ರಿಯೊಳ್
ಅಂದು +ಗೋಳಿಟ್ಟ್+ಒರಲಿದುದು +ಕಳಶಜನ +ಪರಿವಾರ
ತಂದೆ+ಐದನೆ +ಚಾಪವೇದ+ಮು
ಕುಂದನ್+ಐದನೆ +ನಿನ್ನ +ಕಾಣಲು
ಬಂದನ್+ಅಯ್ಯನನ್+ಅಪ್ಪಿಕೊಳು +ಮಾತಾಡಿ +ನೋಡೆಂದ

ಅಚ್ಚರಿ:
(೧) ದ್ರೋಣರನ್ನು ವಿವರಿಸಿದ ಪರಿ – ತಂದೆಯೈದನೆ ಚಾಪವೇದಮುಕುಂದನೈದನೆ

ಪದ್ಯ ೧೭: ದ್ರೋಣನು ಸಾರಥಿಗೆ ಯಾರ ಬಗ್ಗೆ ಹೇಳಿದನು?

ಈತ ಸೇನಾಪತಿ ಕಣಾ ತಾ
ನೀತನೈವರ ಮೈದುನನು ವಿ
ಖ್ಯಾತನಿವ ಪಾಂಚಾಲಕುಲದಲಿ ದ್ರುಪದತನುಜನಿವ
ಈತ ಸಾತ್ಯಕಿ ಯಾದವರ ಕುಲ
ದಾತನೀತ ಶಿಖಂಡಿ ಮೊದಲಾ
ದೀತಗಳು ನೆರೆ ಖರೆಯರೆಂದನು ನಗುತ ಸಾರಥಿಗೆ (ದ್ರೋಣ ಪರ್ವ, ೧೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೀಗೆಂದು ದ್ರೋಣನು ಸಾರಥಿಗೆ ಕೈಗೆ ಚಪ್ಪಾಳೆಯಿಟ್ಟು, ನಕ್ಕು, ಇವನು ಪಾಂಡವ ಸೇನಾಪತಿ, ಇವನು ಪಾಂಡವರ ಮೈದುನ, ದ್ರುಪದನ ಮಗ, ಪಾಂಚಾಲರಲ್ಲಿ ಪ್ರಖ್ಯಾತ, ಇವನು ಯಾದವರ ಕುಲದ ಸಾತ್ಯಕಿ, ಇವನು ಶಿಖಂಡಿ ಇವರೆಲ್ಲಾ ಮಹಾವೀರರು, ಆಡಿದ ಮಾತನ್ನು ನಡೆಸುವವರ್ ಎಂದು ಸಾರಥಿಗೆ ಹೇಳಿದನು.

ಅರ್ಥ:
ಸೇನಾಪತಿ: ಸೇನೆಯ ಮುಖ್ಯಸ್ಥ; ಮೈದುನ: ಗಂಡ ಅಥವ ಹೆಂಡತಿಯ ತಮ್ಮ; ವಿಖ್ಯಾತ: ಪ್ರಸಿದ್ಧ; ಕುಲ: ವಂಶ; ತನುಜ: ಮಗ; ಖರೆ: ನಿಜ; ನಗು: ಸಂತಸ; ಸಾರಥಿ: ಸೂತ; ನೆರೆ: ಗುಂಪು;

ಪದವಿಂಗಡಣೆ:
ಈತ+ ಸೇನಾಪತಿ +ಕಣಾ +ತಾನ್
ಈತನ್+ಐವರ +ಮೈದುನನು +ವಿ
ಖ್ಯಾತನ್+ಇವ +ಪಾಂಚಾಲ+ಕುಲದಲಿ +ದ್ರುಪದ+ತನುಜನಿವ
ಈತ +ಸಾತ್ಯಕಿ +ಯಾದವರ +ಕುಲ
ದಾತನ್+ಈತ +ಶಿಖಂಡಿ +ಮೊದಲಾ
ದೀತಗಳು +ನೆರೆ +ಖರೆಯರೆಂದನು +ನಗುತ +ಸಾರಥಿಗೆ

ಅಚ್ಚರಿ:
(೧) ಧೃಷ್ಟದ್ಯುಮ್ನನನ್ನು ಕರೆದ ಪರಿ – ಈತನೈವರ ಮೈದುನನು ವಿಖ್ಯಾತನಿವ ಪಾಂಚಾಲಕುಲದಲಿ ದ್ರುಪದತನುಜನಿವ

ಪದ್ಯ ೧೬: ದ್ರೋಣನು ಧೃಷ್ಟದ್ಯುಮ್ನನಿಗೆ ಏನೆಂದು ಹೇಳಿದನು?

ಎನ್ನು ಮತ್ತೊಮ್ಮೆನ್ನು ತನ್ನಾ
ಣೆನ್ನು ಗೆಲವೇ ನಮಗೆ ನಿಂದರೆ
ನಿನ್ನ ಸಮ್ಮುಖದಲಿ ಮಹಾದೇವಹುದು ಬಳಿಕೇನು
ತನ್ನಲುಂಟೇ ಖರೆಯತನ ಬರಿ
ದೆನ್ನನಿವನಿದ ಹಲವು ಬಾರಿಯ
ಮುನ್ನ ಬಲ್ಲೈ ನೀನೆನುತ ಸಾರಥಿಯ ಕೈವೊಯ್ದ (ದ್ರೋಣ ಪರ್ವ, ೧೮ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎಲ್ಲಿ ಇನ್ನೊಮ್ಮೆ ಆ ಮಾತನ್ನಾಡು, ನನ್ನಾಣೆ ಅದೇ ಮಾತನ್ನು ಹೇಳು, ನಿನ್ನೆದುರಿಗೆ ನಾನು ನಿಂತರೆ ಗೆಲ್ಲುವೆಯೋ, ಸಾರಥಿ, ಇವನು ಈ ಮಾತನ್ನು ಸುಮ್ಮನೇ ಆಡುತ್ತಿಲ್ಲ, ಈ ವಿಷಯವನ್ನು ನೀನು ಈ ಮೊದಲು ಹಲವು ಬಾರಿ ನೋಡಿರುವೆ ಎಂದು ದ್ರೋಣನು ನುಡಿದನು.

ಅರ್ಥ:
ಮತ್ತೊಮ್ಮೆ: ಪುನಃ; ಆಣೆ: ಪ್ರಮಾಣ; ಗೆಲುವು: ಜಯ; ನಿಂದು: ನಿಲ್ಲು; ಸಮ್ಮುಖ: ಎದುರು; ಬಳಿಕ: ನಂತರ; ಖರೆ: ನಿಜ; ಬರಿ: ಕೇವಲ; ಹಲವು: ಬಹಳ; ಬಾರಿ: ಸಲ, ಸರದಿ; ಮುನ್ನ: ಮೊದಲು; ಬಲ್ಲೆ: ತಿಳಿ; ಸಾರಥಿ: ಸೂತ;

ಪದವಿಂಗಡಣೆ:
ಎನ್ನು +ಮತ್ತೊಮ್ಮ್+ಎನ್ನು +ತನ್ನಾಣ್
ಎನ್ನು +ಗೆಲವೇ +ನಮಗೆ +ನಿಂದರೆ
ನಿನ್ನ +ಸಮ್ಮುಖದಲಿ +ಮಹಾದೇವ್+ಅಹುದು +ಬಳಿಕೇನು
ತನ್ನಲ್+ಉಂಟೇ +ಖರೆಯತನ +ಬರಿದ್
ಎನ್ನನ್+ಇವನಿದ+ ಹಲವು+ ಬಾರಿಯ
ಮುನ್ನ +ಬಲ್ಲೈ +ನೀನೆನುತ +ಸಾರಥಿಯ +ಕೈವೊಯ್ದ

ಅಚ್ಚರಿ:
(೧) ಹಂಗಿಸುವ ಪರಿ – ಗೆಲವೇ ನಮಗೆ ನಿಂದರೆ ನಿನ್ನ ಸುಮ್ಮುಖದಲಿ ಮಹಾದೇವಹುದು ಬಳಿಕೇನು

ಪದ್ಯ ೬೦: ಘಟೋತ್ಕಚನು ಕೌರವರ ಸೈನ್ಯದ ಬಗ್ಗೆ ಏನು ಹೇಳಿದನು?

ಕೆಣಕಿದರಲಾ ರಣವ ರಕ್ಕಸ
ಬಣಗುಗಳು ಮಝ ಪೂತು ಸಮರಾಂ
ಗನದೊಳಗೆ ನಾವಾದ ಸದರವೊ ನೊಡಿರೈ ಭಟರು
ಸೆಣಸು ಗಡ ನಮ್ಮೊಡನೆ ಸಲೆ ಟೆಂ
ಠಣಿಸುವರು ಗಡ ಬವರಕೋಸುಗ
ಹೊಣಕೆಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ (ದ್ರೋಣ ಪರ್ವ, ೧೫ ಸಂಧಿ, ೬೦ ಪದ್ಯ)

ತಾತ್ಪರ್ಯ:
ಘಟೋತ್ಕಚನು ಸಾರಥಿಯ ಕೈಯನ್ನು ತಟ್ಟಿ, ಕೆಲಸಕ್ಕೆ ಬಾರದ ದುರ್ಬಲ ರಾಕ್ಷಸರು ನಮ್ಮೊಡನೆ ಯುದ್ಧಕ್ಕೆ ಬಂದರು, ಭಲೇ, ಯುದ್ಧರಂಗದಲ್ಲಿ ನಾವು ಸದರವೆಂದುಕೊಂಡು ಬಿಟ್ಟರು. ನಮ್ಮೊಡನೆ ಕಾಳಗ!! ಯುದ್ಧಮಾಡಲು ಉತ್ಸುಕರಾಗಿ ಬರುತ್ತಿದ್ದಾರೆ, ನನ್ನ ಮೇಲೆ ಜಿದ್ದು, ಅಷ್ಟಲ್ಲದೇ ಏನೆ ಎಂದನು.

ಅರ್ಥ:
ಕೆಣಕು: ರೇಗಿಸು; ರಣ: ಯುದ್ಧ; ರಕ್ಕಸ: ರಾಕ್ಷಸ; ಬನ: ಗುಂಪು; ಮಝ: ಭಲೇ; ಪೂತು: ಹೊಗಳುವ ಮಾತು; ಸಮರ: ಯುದ್ಧ; ಸದರ: ಸುಲಭ, ಸರಾಗ; ನೋಡು: ವೀಕ್ಷಿಸು; ಭಟ: ಸೈನಿಕ; ಸೆಣಸು: ಹೋರಾಡು; ಗಡ: ಅಲ್ಲವೆ; ಟೆಂಠಣಿಸು: ನಡುಗು; ಬವರ: ಯುದ್ಧ; ಹೊಣಕೆ: ಜೊತೆ, ಜೋಡಿ; ಸಾರಥಿ: ಸೂತ; ಕೈವೊಯ್: ಕೈಹೊಡೆ,ಚಪ್ಪಾಳೆ;

ಪದವಿಂಗಡಣೆ:
ಕೆಣಕಿದರಲಾ ರಣವ ರಕ್ಕಸ
ಬಣಗುಗಳು ಮಝ ಪೂತು ಸಮರಾಂ
ಗಣದೊಳಗೆ ನಾವಾದ ಸದರವೊ ನೊಡಿರೈ ಭಟರು
ಸೆಣಸು ಗಡ ನಮ್ಮೊಡನೆ ಸಲೆ ಟೆಂ
ಠಣಿಸುವರು ಗಡ ಬವರಕೋಸುಗ
ಹೊಣಕೆಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ

ಅಚ್ಚರಿ:
(೧) ರಣ, ಬವರ – ಸಮಾನಾರ್ಥಕ ಪದ

ಪದ್ಯ ೫೫: ಭೀಮನು ಎಷ್ಟು ಬಾಣಗಳನ್ನು ಬಿಟ್ಟು ಗರ್ಜಿಸಿದನು?

ಎರಡು ಶರದಲಿ ಸಾರಥಿಯ ಹೇ
ರುರವನೆಸೆಯಲು ಘಾಯದಲಿ ತರ
ಹರಿಸದವ ಹಾಯ್ದನು ಯುಧಾಮನ್ಯುವಿನ ಹೊರೆಗಾಗಿ
ಮರಳಿ ಹತ್ತಂಬಿನಲಿ ಭೀಮನ
ಕೆರಳಿಚಿದನಾರಂಬಿನಲಿ ಹ
ನ್ನೆರಡರಲಿ ಹದಿನೆಂಟರಲಿ ಮಗುಳೆಚ್ಚು ಬೊಬ್ಬಿರಿದ (ದ್ರೋಣ ಪರ್ವ, ೧೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಬಾಣಗಳಿಂದ ತಬ್ಬಿಬ್ಬಾಗದೆ ಭೀಮನು ಎರಡು ಕವಲಂಬುಗಳಿಂದ ಸಾರಥಿಯನ್ನು ಹೊಡೆದನು. ಆ ನೋವಿನಿಂದ ಸೈರಿಸುವಾಗಲೇ ಯುಧಾಮನ್ಯುವಿನ ರಕ್ಷಣೆಯಲ್ಲಿ ಹೋರಾಟ ಮಾಡಿದನು. ಮತ್ತೆ ಹತ್ತು ಬಾಣಗಳಲ್ಲಿ ಭೀಮನನ್ನು ಕೆರಳಿಸಿ, ಆರು, ಹನ್ನೆರಡು ಮತ್ತು ಹದಿನೆಂಟು ಬಾಣಗಳನ್ನು ಹೊಡೆದು ಗರ್ಜಿಸಿದನು.

ಅರ್ಥ:
ಶರ: ಬಾಣ; ಸಾರಥಿ: ಸೂತ; ಹೇರು: ಹೊರೆ, ಭಾರ; ಎಸೆ: ಹೊರತರು; ಘಾಯ: ಪೆಟ್ಟು; ತರಹರಿಸು: ತಡಮಾಡು, ಸೈರಿಸು; ಹಾಯ್ದು: ಹೊಡೆ; ಮರಳು: ಮತ್ತೆ; ಅಂಬು: ಬಾಣ; ಕೆರಳು: ರೇಗು, ಕೆದರು, ಹರಡು; ಮಗುಳು: ಮತ್ತೆ; ಬೊಬ್ಬಿರಿ: ಗರ್ಜಿಸು; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಎರಡು +ಶರದಲಿ +ಸಾರಥಿಯ +ಹೇ
ರುರವನ್+ಎಸೆಯಲು +ಘಾಯದಲಿ +ತರ
ಹರಿಸದವ+ ಹಾಯ್ದನು +ಯುಧಾಮನ್ಯುವಿನ +ಹೊರೆಗಾಗಿ
ಮರಳಿ +ಹತ್ತಂಬಿನಲಿ +ಭೀಮನ
ಕೆರಳಿಚಿದನ್+ಆರಂಬಿನಲಿ +ಹ
ನ್ನೆರಡರಲಿ +ಹದಿನೆಂಟರಲಿ +ಮಗುಳ್+ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಬಾಣಗಳ ಲೆಕ್ಕ – ಆರಂಬಿನಲಿ ಹನ್ನೆರಡರಲಿ ಹದಿನೆಂಟರಲಿ ಮಗುಳೆಚ್ಚು ಬೊಬ್ಬಿರಿದ