ಮುನಿಪ ಜಪಿಸುತ ನಡೆದನಗ್ನಿಯ
ವಿನುತಸೂಕ್ತವನೆತ್ತುಗೈದು ವಿ
ನನಿಲಜನು ದುಗುಡದಲಿ ಫಲುಗುಣ ಯಮಳರೊಂದಾಗಿ
ವನಿತೆಯನು ನಡುವಿಟ್ಟು ಹೊರವಂ
ಟನು ಯುಧಿಷ್ಠಿರನೃಪತಿ ನಿಯತದಿ
ನೆನೆವುತಿದ್ದನು ವೀರನಾರಾಯಣನ ಪದಯುಗವ (ಸಭಾ ಪರ್ವ, ೧೭ ಸಂಧಿ, ೭೮ ಪದ್ಯ)
ತಾತ್ಪರ್ಯ:
ವಿದುರನು ಧೃತರಾಷ್ಟ್ರನಿಗೆ ವಿವರಿಸುತ್ತಾ, ಧೌಮ್ಯರು ಅಗ್ನಿಸೂಕ್ತವನ್ನು ಹೇಳುತ್ತಾ ಹೋದರು. ಭೀಮನು ಗದೆಯನ್ನೆತ್ತಿ ಹಿಡಿದು ಅರ್ಜುನ, ನಕುಲ ಸಹದೇವರೊಡನೆ, ದ್ರೌಪದಿಯನು ತಮ್ಮ ನಡುವೆ ಇರಿಸಿಕೊಂಡು ದುಃಖದಿಂದ ಹೋದನು. ಧರ್ಮರಾಯನು ಶ್ರೀಕೃಷ್ಣನ ಪಾದಕಮಲಗಳನ್ನು ಸ್ಮರಿಸುತ್ತಾ ಅರಣ್ಯಕ್ಕೆ ತೆರಳಿದನು.
ಅರ್ಥ:
ಮುನಿ: ಋಷಿ; ಜಪಿಸು: ಪಠಿಸು; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ನಡೆ: ಚಲಿಸು; ಅಗ್ನಿ: ಬೆಂಕಿ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಸೂಕ್ತ: ಹಿತವಚನ ಅನಿಲಜ: ಭೀಮ; ದುಗುಡ: ದುಃಖ; ಯಮಳರು: ನಕುಲ ಸಹದೇವ; ವನಿತೆ: ಹೆಣ್ಣು; ನಡುವು: ಮಧ್ಯದೊಳಗೆ; ಹೊರವಂಟು: ಹೊರನಡೆದರು; ನೃಪತಿ: ರಾಜ; ನಿಯತ: ಅಚಲವಾದ, ನಿಶ್ಚಿತವಾದ; ಪದಯುಗ: ಚರಣಕಮಲ;
ಪದವಿಂಗಡಣೆ:
ಮುನಿಪ +ಜಪಿಸುತ +ನಡೆದನ್+ಅಗ್ನಿಯ
ವಿನುತ+ಸೂಕ್ತವನ್+ಎತ್ತುಗೈದುವಿನ್
ಅನಿಲಜನು +ದುಗುಡದಲಿ +ಫಲುಗುಣ +ಯಮಳರೊಂದಾಗಿ
ವನಿತೆಯನು +ನಡುವಿಟ್ಟು +ಹೊರವಂ
ಟನು +ಯುಧಿಷ್ಠಿರ+ನೃಪತಿ +ನಿಯತದಿ
ನೆನೆವುತಿದ್ದನು +ವೀರನಾರಾಯಣನ +ಪದಯುಗವ
ಅಚ್ಚರಿ:
(೧) ಧೌಮ್ಯರನ್ನು ಮುನಿಪ, ಭೀಮನನ್ನು ಅನಿಲಜ, ನಕುಲ ಸಹದೇವರನ್ನು ಯಮಳರು, ದ್ರೌಪದಿಯನ್ನು ವನಿತೆ ಎಂದು ಕರೆದಿರುವುದು