ಎಂದು ಮಾರ್ಕಂಡೇಯ ಮುನಿ ಯಮ
ನಂದನನನಿತಿಹಾಸ ಕಥೆಗಳ
ಲಂದವಿಟ್ಟನು ಚಿತ್ತವನು ಖಯಖೋಡಿಗಳ ಕಳೆದು
ಕಂದು ಕಸರಿಕೆಯೇಕೆ ನಿಮಗೆ ಮು
ಕುಂದನೊಲವಿದೆ ಬಯಕೆ ಬೇರೇ
ಕೆಂದು ಮಾರ್ಕಂಡೇಯ ನಾರದರಡರಿದರು ನಭವ (ಅರಣ್ಯ ಪರ್ವ, ೧೬ ಸಂಧಿ, ೧೯ ಪದ್ಯ)
ತಾತ್ಪರ್ಯ:
ಹೀಗೆ ಮಾರ್ಕಂಡೇಯ ಮುನಿಯು ಇತಿಹಾಸ ಕಥೆಗಳಿಂದ ಧರ್ಮಜನ ಮನಸ್ಸಿನ ಚಿಂತೆ, ಕಳವಳಗಳನ್ನು ಕಳೆದು ಸಂತೋಷ ಪಡಿಸಿದನು. ನಿಮಗೆ ಶ್ರೀಕೃಷ್ಣನ ಒಲವಿದೆ. ಮನಸ್ಸಿನಲ್ಲಿ ಚಿಂತೆ ದುಗುಡಗಳು ಬೇಡ, ಅವನೊಲವಿದ್ದ ಮೇಲೆ ಏತಕ್ಕೂ ಚಿಂತಿಸಬೇಡಿರಿ ಎಂದು ಹೇಳಿ ಮಾರ್ಕಂಡೇಯ ಮುನಿಗಳು ಮತ್ತು ನಾರದರು ಆಕಾಶಮಾರ್ಗದಲ್ಲಿ ಹೊರಟು ಹೋದರು.
ಅರ್ಥ:
ಮುನಿ: ಋಷಿ; ನಂದನ: ಮಗ; ಇತಿಹಾಸ: ಚರಿತ್ರೆ; ಕಥೆ: ವೃತ್ತಾಮ್ತ; ಅಂದವಿಡು: ಅಲಂಕರಿಸು; ಚಿತ್ತ: ಮನಸ್ಸು; ಖಯಖೋಡಿ: ಅಳುಕು, ಅಂಜಿಕೆ; ಕಳೆದು: ದೂರಮಾಡು; ಕಂದು: ಕಳಾಹೀನ; ಕಸರು: ತೊಂದರೆ; ಒಲವು: ಪ್ರೀತಿ; ಬಯಕೆ: ಇಷ್ಟ; ಅಡರು: ಮೇಲಕ್ಕೆ ಹತ್ತು; ನಭ: ಆಗಸ;
ಪದವಿಂಗಡಣೆ:
ಎಂದು +ಮಾರ್ಕಂಡೇಯ +ಮುನಿ +ಯಮ
ನಂದನನನ್+ಇತಿಹಾಸ +ಕಥೆಗಳಲ್
ಅಂದವಿಟ್ಟನು +ಚಿತ್ತವನು +ಖಯಖೋಡಿಗಳ +ಕಳೆದು
ಕಂದು +ಕಸರಿಕೆ+ಏಕೆ +ನಿಮಗೆ+ ಮು
ಕುಂದನ್+ಒಲವಿದೆ +ಬಯಕೆ+ ಬೇರೇ
ಕೆಂದು+ ಮಾರ್ಕಂಡೇಯ +ನಾರದರ್+ಅಡರಿದರು +ನಭವ
ಅಚ್ಚರಿ:
(೧) ಎಂದು, ಕಂದು; ನಂದನ, ಮುಕುಂದನ – ಪದಗಳ ಬಳಕೆ