ಕೇಳಿದರು ಪಾಂಡವರು ಕುರು ಭೂ
ಪಾಲಕನ ಸಂಕಲ್ಪವನು ಪಾ
ತಾಳದಲಿ ಸುರವೈರಿ ವರ್ಗದ ಸತ್ಯ ಸಂಗತಿಯ
ಮೇಲಣಧ್ವರ ಕರ್ಮವನು ನಗು
ತಾಲಿಸಿದರಡಿಗಡಿಗೆ ಲಕ್ಷ್ಮೀ
ಲೋಲನಂಘ್ರಿಯ ನೆನೆವುತಿದ್ದರು ವೀರ ನರಯಣನ (ಅರಣ್ಯ ಪರ್ವ, ೨೨ ಸಂಧಿ, ೭೧ ಪದ್ಯ)
ತಾತ್ಪರ್ಯ:
ಕೌರವನು ಪಾತಾಳದಲ್ಲಿ ದೈತ್ಯರ ಸ್ನೇಹ ಮಾಡಿದುದನ್ನೂ, ಅವನು ರಾಜ್ಯವನ್ನು ಕೊಡದಿರುವ ಸಂಕಲ್ಪವನ್ನೂ ಕೇಳಿದರು. ಅವನು ಯಜ್ಣಮಾಡಿದ ಸುದ್ದಿಯನ್ನೂ ನಗುತ್ತಾ ಕೇಳಿದರು. ಲಕ್ಷ್ಮೀರಮಣನಾದ ವೀರನಾರಾಯಣನ ಪಾದಕಮಲಗಳನ್ನು ನೆನೆಯುತ್ತಿದ್ದರು.
ಅರ್ಥ:
ಕೇಳು: ಆಲಿಸು; ಭೂಪಾಲ: ರಾಜ; ಸಂಕಲ್ಪ: ನಿರ್ಧಾರ; ಪಾತಾಳ: ಅಧೋಲೋಕ; ಸುರವೈರಿ: ರಾಕ್ಷಸ; ವರ್ಗ: ಗುಂಪು; ಸತ್ಯ: ನಿಜ; ಸಂಗತಿ: ವಿಚಾರ; ಮೇಲಣ: ಆನಂತರ; ಅಧ್ವರ: ಯಾಗ; ಕರ್ಮ: ಕಾರ್ಯ; ನಗುತ: ಸಂತಸ; ಆಲಿಸು: ಕೇಳು; ಅಡಿಗಡಿಗೆ: ಮತ್ತೆ ಮತ್ತೆ; ನೆನೆ: ಜ್ಞಾಪಿಸು;
ಪದವಿಂಗಡಣೆ:
ಕೇಳಿದರು +ಪಾಂಡವರು +ಕುರು +ಭೂ
ಪಾಲಕನ +ಸಂಕಲ್ಪವನು +ಪಾ
ತಾಳದಲಿ +ಸುರವೈರಿ +ವರ್ಗದ +ಸತ್ಯ +ಸಂಗತಿಯ
ಮೇಲಣ್+ಅಧ್ವರ +ಕರ್ಮವನು +ನಗುತ
ಆಲಿಸಿದರ್+ಅಡಿಗಡಿಗೆ +ಲಕ್ಷ್ಮೀ
ಲೋಲನ್+ಅಂಘ್ರಿಯ +ನೆನೆವುತಿದ್ದರು +ವೀರ +ನರಯಣನ
ಅಚ್ಚರಿ:
(೧) ರಾಕ್ಷಸರು ಎಂದು ಹೇಳಲು – ಪಾತಾಳದಲಿ ಸುರವೈರಿ ವರ್ಗ