ಧರಣಿಪತಿ ಕೇಳ್ ಜಾತಿ ವರ್ಗದ
ಪರಮಧರ್ಮದ ಸಾರವಿದನಾ
ಚರಿಸಿ ಸಿದ್ಧಿಯನೈದಿದನು ಪಿತೃಮಾತೃ ಭಕ್ತಿಯಲಿ
ಒರೆಗೆ ಬಣ್ಣಕೆ ಬೆರೆಸಿ ವೇದೋ
ಚ್ಚರಿತ ಧರ್ಮವನರುಹಿದನು ಭೂ
ಸುರಗೆ ಧರ್ಮವ್ಯಾಧನೆಂಬನ ಕಥೆಯ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೪೮ ಪದ್ಯ)
ತಾತ್ಪರ್ಯ:
ಜಾತಿ ಧರ್ಮದ ಸಾರವನ್ನು ಆಚರಿಸುತ್ತಾ, ತಂದೆ ತಾಯಿಗಳ ಭಕ್ತಿಯನ್ನು ಅದಕ್ಕೆ ಸೇರಿಸಿದ ಧರ್ಮವ್ಯಾದನೆಂಬುವನು ವೇದ ಧರ್ಮದ ಸಾರವನ್ನು ಬ್ರಾಹ್ಮಣನಿಗೆ ಹೇಳಿದ ಕಥೆಯನ್ನು ಕೇಳು ಎಂದು ಮಾರ್ಕಂಡೇಯನು ಧರ್ಮಜನಿಗೆ ಹೇಳಿದನು.
ಅರ್ಥ:
ಧರಣಿಪತಿ: ರಾಜ; ಜಾತಿ: ಹುಟ್ಟಿದ ಕುಲ, ವಂಶ; ವರ್ಗ: ಗುಂಪು; ಪರಮ: ಶ್ರೇಷ್ಠ; ಧರ್ಮ: ಧಾರಣೆ ಮಾಡಿದುದು; ಸಾರ: ರಸ; ಆಚರಿಸು: ನಡೆಸು; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಐದು: ಬಂದು ಸೇರು; ಪಿತೃ: ತಂದೆ; ಮಾತೃ: ತಾಯಿ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಒರೆಗೆ: ಪರೀಕ್ಷಿಸು; ಅರುಹು: ಹೇಳು; ಭೂಸುರ: ಬ್ರಾಹ್ಮಣ; ಕಥೆ: ಚರಿತೆ; ಕೇಳು: ಆಲಿಸು;
ಪದವಿಂಗಡಣೆ:
ಧರಣಿಪತಿ +ಕೇಳ್ +ಜಾತಿ +ವರ್ಗದ
ಪರಮಧರ್ಮದ +ಸಾರವಿದನ್
ಆಚರಿಸಿ +ಸಿದ್ಧಿಯನ್+ಐದಿದನು +ಪಿತೃ+ಮಾತೃ +ಭಕ್ತಿಯಲಿ
ಒರೆಗೆ+ ಬಣ್ಣಕೆ +ಬೆರೆಸಿ +ವೇದೋ
ಚ್ಚರಿತ +ಧರ್ಮವನ್+ಅರುಹಿದನು+ ಭೂ
ಸುರಗೆ +ಧರ್ಮವ್ಯಾಧನೆಂಬನ +ಕಥೆಯ +ಕೇಳೆಂದ
ಅಚ್ಚರಿ:
(೧) ಧರ್ಮವನ್ನು ತಿಳಿಸಿದ ಪರಿ – ಒರೆಗೆ ಬಣ್ಣಕೆ ಬೆರೆಸಿ ವೇದೋಚ್ಚರಿತ ಧರ್ಮವನರುಹಿದನು