ಸೋಲವರಿಗಳಿಗೆಂದು ಹರುಷವ
ತಾಳದಿರು ಧೃತರಾಷ್ಟ್ರ ಕೃಷ್ಣನ
ಸೋಲವದು ಪಾಂಡವರು ಸೋತವರಲ್ಲ ನಂಬುವುದು
ಸೋಲವಿದು ನಾಳಿನಲಿ ಪ್ರಳಯದ
ಕಾಲ ಕೌರವಕುಲಕೆ ದಿಟವಿದು
ಸೋಲವುಂಟೇ ವೀರನಾರಾಯಣನ ಭಕ್ತರಿಗೆ (ದ್ರೋಣ ಪರ್ವ, ೬ ಸಂಧಿ, ೬೭ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರ, ಶತ್ರುಗಳು ಸೋತರೆಂದು ಸಂತೋಷ ಪಡಬೇಡ, ಪಾಂಡವರು ಸೋತವರಲ್ಲ, ಸೋಲು ಕೃಷ್ಣನದು, ಈ ಸೋಲು ಕೌರವ ಕುಲಕ್ಕೆ ಮುಂದೆ ಪ್ರಳಯಕಾಲವನ್ನು ತರುತ್ತದೆ. ಈ ಮಾತು ನಿಜ, ವೀರನಾರಾಯಣನ ಭಕ್ತರಿಗೆ ಸೋಲುಂಟೇ!
ಅರ್ಥ:
ಸೋಲು: ಪರಾಭವ; ಹರುಷ: ಸಂತಸ; ತಾಳು: ಹೊಂದು, ಧರಿಸು; ನಂಬು: ವಿಶ್ವಾಸವಿಡು; ನಾಳೆ: ಮರುದಿನ; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಕಾಲ: ಸಮಯ; ಕುಲ: ವಂಶ; ದಿಟ: ಸತ್ಯ; ಭಕ್ತ: ಆರಾಧಕ;
ಪದವಿಂಗಡಣೆ:
ಸೋಲ್+ಅವರಿಗಳಿಗೆಂದು +ಹರುಷವ
ತಾಳದಿರು +ಧೃತರಾಷ್ಟ್ರ +ಕೃಷ್ಣನ
ಸೋಲವದು +ಪಾಂಡವರು +ಸೋತವರಲ್ಲ+ ನಂಬುವುದು
ಸೋಲವಿದು +ನಾಳಿನಲಿ +ಪ್ರಳಯದ
ಕಾಲ +ಕೌರವಕುಲಕೆ +ದಿಟವಿದು
ಸೋಲವುಂಟೇ +ವೀರನಾರಾಯಣನ +ಭಕ್ತರಿಗೆ
ಅಚ್ಚರಿ:
(೧) ಸೋಲ – ಮೊದಲನೇ ಪದವಾಗಿ ೪ ಬಾರಿ ಪ್ರಯೋಗ