ಪದ್ಯ ೬೧: ಅಭಿಮನ್ಯುವು ಹೇಗೆ ಮಲಗಿದನು?

ತೋಳ ತಲೆಗಿಂಬಿನಲಿ ಕೈದುಗ
ಳೋಳಿಗಳ ಹಾಸಿನಲಿ ತನ್ನಯ
ಕಾಲ ದೆಸೆಯಲಿ ಕೆಡೆದ ಕೌರವ ಸುತರ ನೂರ್ವರಲಿ
ಬಾಲಕನು ಬಳಲಿದನು ಸಮರದ
ಲೀಲೆಯಲಿ ಕುಣಿಕುಣಿದು ಬಸವಳಿ
ದಾಳುಗಳ ದೇವನು ಮಹಾಹವದೊಳಗೆ ಪವಡಿಸಿದ (ದ್ರೋಣ ಪರ್ವ, ೬ ಸಂಧಿ, ೬೧ ಪದ್ಯ)

ತಾತ್ಪರ್ಯ:
ತೋಳನ್ನೇ ತಲೆದಿಂಬಾಗಿ ಮಾಡಿಕೊಂಡು, ಆಯುಧಗಳ ಹಾಸಿಗೆಯ ಮೇಲೆ ತನ್ನ ಕಾಲ ಕೆಳಗೆ ಕೌರವನ ನೂರು ಮಕ್ಕಳೂ ಬಿದ್ದಿರಲು, ಯುದ್ಧದಾಟದಲ್ಲಿ ಕುಣಿಕುಣಿದು ಬಳಲಿ ವೀರಾಗ್ರಣಿಯಾದ ಅಭಿಮನ್ಯುವು ಮಹಾಯುದ್ಧದಲ್ಲಿ ಮಲಗಿದನು.

ಅರ್ಥ:
ತೋಳು: ಬಾಹು; ತಲೆ: ಶಿರ; ಇಂಬು: ಆಶ್ರಯ; ಕೈದುಗ: ಆಯುಧ; ಊಳಿಗ: ಸೇವೆ, ಕಾರ್ಯ; ಹಾಸಿ: ಹಾಸಿಗೆ; ಕಾಲು: ಪಾದ; ದೆಸೆ: ದಿಕ್ಕು; ಕೆಡೆ: ಬೀಳು, ಕುಸಿ; ಸುತ: ಮಕ್ಕಳು; ನೂರು: ಶತ; ಬಾಲಕ: ಚಿಕ್ಕವ; ಬಳಲು: ಆಯಾಸ; ಸಮರ: ಯುದ್ಧ; ಲೀಲೆ: ಆನಂದ, ಸಂತೋಷ; ಕುಣಿ: ನರ್ತಿಸಿ; ಬಸವಳಿ: ಆಯಾಸಗೊಳ್ಳು; ಆಳು: ಸೇವಕ, ಸೈನಿಕ; ದೇವ: ಒಡೆಯ, ಶ್ರೇಷ್ಠ; ಆಹವ: ಯುದ್ಧ; ಪವಡಿಸು: ಮಲಗು;

ಪದವಿಂಗಡಣೆ:
ತೋಳ +ತಲೆಗಿಂಬಿನಲಿ+ ಕೈದುಗಳ್
ಊಳಿಗಳ+ ಹಾಸಿನಲಿ+ ತನ್ನಯ
ಕಾಲ +ದೆಸೆಯಲಿ +ಕೆಡೆದ+ ಕೌರವ+ ಸುತರ+ ನೂರ್ವರಲಿ
ಬಾಲಕನು +ಬಳಲಿದನು+ ಸಮರದ
ಲೀಲೆಯಲಿ +ಕುಣಿಕುಣಿದು +ಬಸವಳಿದ್
ಆಳುಗಳ +ದೇವನು +ಮಹ+ಆಹವದೊಳಗೆ +ಪವಡಿಸಿದ

ಅಚ್ಚರಿ:
(೧) ಅಭಿಮನ್ಯುವಿನ ಮರಣವನ್ನು ವಿವರಿಸುವ ಪರಿ – ಬಾಲಕನು ಬಳಲಿದನು ಸಮರದ ಲೀಲೆಯಲಿ ಕುಣಿಕುಣಿದು ಬಸವಳಿದಾಳುಗಳ ದೇವನು ಮಹಾಹವದೊಳಗೆ ಪವಡಿಸಿದ
(೨) ಅಭಿಮನ್ಯುವನ್ನು ಹೊಗಳುವ ಪರಿ – ಆಳುಗಳ ದೇವನು