ಹೊನ್ನಿನಲಿ ಮಧುರೋಕ್ತಿಯಲಿ ವಿವಿ
ಧಾನ್ನವುಡುಗೊರೆಗಳಲಿ ದೂತನ
ಮನ್ನಿಸಿದನವನೀಶ ನುಚಿತದಲವನ ಬೀಳ್ಕೊಟ್ಟು
ಪನ್ನಗನ ಸಿರಿಮಂಚದಾತನು
ಬೆನ್ನಲಿರಲೀ ಪಾಂಡು ತನಯರಿ
ಗಿನ್ನು ಮಂಗಳವೆನುತ ಸಂಜಯ ಬಂದನಿಭಪುರಿಗೆ (ಉದ್ಯೋಗ ಪರ್ವ, ೨ ಸಂಧಿ, ೪೮ ಪದ್ಯ)
ತಾತ್ಪರ್ಯ:
ಸಂಜಯನನ್ನು ಧರ್ಮರಾಯನು, ಹೊನ್ನು, ಪ್ರೀತಿಯ ಮಾತು, ನಾನಾ ವಿಧವಾದ ಪಕ್ವಾನ್ನಗಳು, ಉಡುಗೊರೆಗಳಿಂದ ಯುಧಿಷ್ಠಿರನು ಮನ್ನಿಸಿ ಬೀಳ್ಕೊಟ್ಟನು. ಹಿಂದಿರುಗೆ ಹೋಗುತ್ತಾ ಸಂಜಯನು “ಆದಿಶೇಷನೇ ಮಂಚವಾಗಿರುವ ಮಹಾವಿಷ್ಣುವು ಶ್ರೀಕೃಷ್ಣನಾಗಿ ಪಾಂಡವರ ಬೆಂಬಲವಾಗಿರುವುದರಿಂದ ಅವರಿಗೆ ಸಮಸ್ತ ಸನ್ಮಂಗಳಾಗುವುದು ನಿಶ್ಚಿತ ಎಂದುಕೊಂಡು ಹಸ್ತಿನಾಪುರಕ್ಕೆ ಬಂದನು.
ಅರ್ಥ:
ಹೊನ್ನು: ಚಿನ್ನ; ಮಧುರ: ಸಿಹಿಯಾದುದು; ಉಕ್ತಿ: ಮಾತು; ವಿವಿಧ: ಬಹಳ ಬಗೆ; ಅನ್ನ: ತಿನಿಸು; ಉಡುಗೊರೆ; ಕಾಣಿಕೆ, ಬಳುವಳಿ; ದೂತ: ದಾಸ; ಮನ್ನಿಸು: ಗೌರವಿಸು; ಅವನೀಶ: ರಾಜ; ಉಚಿತ: ಸರಿಯಾದ; ಬೀಳ್ಕೊಡು: ಕಳಿಸು; ಪನ್ನಗ: ಹಾವು; ಸಿರಿ: ಶ್ರೇಷ್ಠ, ಐಶ್ವರ್ಯ; ಮಂಚ: ಮಲಗುವ ಸಾಧನ, ಪರ್ಯಂಕ; ಬೆನ್ನು: ಹಿಂಬಾಗ; ತನಯ: ಮಕ್ಕಳು; ಮಂಗಳ: ಒಳ್ಳೆಯ; ಇಭಪುರಿ: ಹಸ್ತಿನಾಪುರಿ; ಇಭ: ಆನೆ, ಹಸ್ತಿ;
ಪದವಿಂಗಡಣೆ:
ಹೊನ್ನಿನಲಿ+ ಮಧುರ+ಉಕ್ತಿಯಲಿ +ವಿವಿ
ಧ+ಅನ್ನ+ ಉಡುಗೊರೆಗಳಲಿ +ದೂತನ
ಮನ್ನಿಸಿದನ್+ಅವನೀಶನ್ +ಉಚಿತದಲ್+ಅವನ +ಬೀಳ್ಕೊಟ್ಟು
ಪನ್ನಗನ +ಸಿರಿ+ಮಂಚದ್+ಆತನು
ಬೆನ್ನಲಿರಲೀ +ಪಾಂಡು+ ತನಯರಿಗ್
ಇನ್ನು +ಮಂಗಳವೆನುತ+ ಸಂಜಯ +ಬಂದನ್+ಇಭಪುರಿಗೆ
ಅಚ್ಚರಿ:
(೧) ಹಸ್ತಿನಾಪುರವನ್ನು ಇಭಪುರಿ ಎಂದು ಕರೆದಿರುವುದು
(೨) ಕೃಷ್ಣನನ್ನು ಪನ್ನಗಸಿರಿಮಂಚದಾತ