ಎರಡು ಶರದಲಿ ಚಾಪವನು ಕ
ತ್ತರಿಸಿ ಭೀಷ್ಮನ ನಿಲಿಸಿ ಕೌರವ
ಧರಣಿಪಾಲನ ಮಕುಟವನು ಮೂರಂಬಿನಲಿ ಕಡಿದು
ತಿರುಗಿದನು ಕಲಿಪಾರ್ಥ ನಗುತು
ತ್ತರ ಸಹಿತ ಬನ್ನಿಯಲಿ ಕೈದುವ
ನಿರಿಸಿ ಮುನ್ನಿನ ಹುಲುರಥದಿ ನಿಜನಗರಿಗೈತಂದ (ವಿರಾಟ ಪರ್ವ, ೯ ಸಂಧಿ, ೯೩ ಪದ್ಯ)
ತಾತ್ಪರ್ಯ:
ಭೀಷ್ಮನ ಬಿಲ್ಲನ್ನು ಅರ್ಜುನನು ಎರಡು ಬಾಣಗಳಿಂದ ಕತ್ತರಿಸಿದನು. ದುರ್ಯೋಧನನ ಕಿರೀಟವನ್ನು ಮೂರು ಬಾಣಗಳಿಂದ ಕಡಿದು ಅರ್ಜುನನು ಹಿಂದಿರುಗಿದನು. ತನ್ನ ಆಯುಧಾದಿಗಳನ್ನು ಬನ್ನಿಯ ಮರದಲ್ಲಿರಿಸಿ ಮೊದಲು ತಂದಿದ್ದ ಅಲ್ಪವಾದ ರಥವನ್ನೇರಿ ಬೃಹನ್ನಳೆಯ ವೇಷವನ್ನು ಧರಿಸಿ ಉತ್ತರನೊಡನೆ ಮತ್ಸ್ಯನಗರಿಗೆ ಹಿಂದಿರುಗಿದನು.
ಅರ್ಥ:
ಶರ: ಬಾಣ; ಚಾಪ: ಬಿಲ್ಲು; ಕತ್ತರಿಸು: ಕಡಿ, ಸೀಳು; ನಿಲಿಸು: ತಡೆ; ಧರಣಿಪಾಲ: ರಾಜ; ಧರಣಿ: ಭೂಮಿ; ಪಾಲ: ಒಡೆಯ, ರಕ್ಷಿಸುವ; ಮಕುಟ: ಕಿರೀಟ; ಅಂಬು: ಬಾಣ; ಕಡಿ: ಸೀಳು; ತಿರುಗು: ಚಲಿಸು, ಸುತ್ತು; ಕಲಿ: ಶೂರ; ನಗು: ಹರ್ಷಿಸು; ಸಹಿತ: ಜೊತೆ; ಬನ್ನಿ: ಶಮಿ ವೃಕ್ಷ; ಕೈದು: ಆಯುಧ; ಇರಿಸು: ಇಡು; ಮುನ್ನ: ಮೊದಲು; ಹುಲು: ಅಲ್ಪ; ರಥ: ಬಂಡಿ; ನಗರ: ಊರು; ಐತಂದು: ಬಂದು ಸೇರು;
ಪದವಿಂಗಡಣೆ:
ಎರಡು +ಶರದಲಿ+ ಚಾಪವನು +ಕ
ತ್ತರಿಸಿ +ಭೀಷ್ಮನ+ ನಿಲಿಸಿ +ಕೌರವ
ಧರಣಿಪಾಲನ +ಮಕುಟವನು +ಮೂರಂಬಿನಲಿ +ಕಡಿದು
ತಿರುಗಿದನು +ಕಲಿ+ಪಾರ್ಥ +ನಗುತ್
ಉತ್ತರ+ ಸಹಿತ +ಬನ್ನಿಯಲಿ +ಕೈದುವ
ನಿರಿಸಿ +ಮುನ್ನಿನ +ಹುಲು+ರಥದಿ +ನಿಜನಗರಿಗ್+ಐತಂದ
ಅಚ್ಚರಿ:
(೧) ಶರ, ಅಂಬು – ಸಮನಾರ್ಥಕ ಪದ