ಗುಣನಿಧಿಯನೇಕಾದಶಾಕ್ಷೋ
ಹಿಣಿಯ ಪತಿಯನಶೇಷ ಪಾರ್ಥಿವ
ಮಣಿಮಕುಟ ಕಿರಣೋಪಲಾಲಿತ ಪಾದಪಲ್ಲವನ
ರಣದೊಳನ್ಯಾಯದಲಿ ತೊಡೆಗಳ
ಹಣಿದುದಲ್ಲದೆ ಪಾದದಲಿ ನೀ
ಕೆಣಕುವರೆ ಕುರುರಾಜಮೌಳಿಯನೆಂದನಾ ಭೂಪ (ಗದಾ ಪರ್ವ, ೮ ಸಂಧಿ, ೧೭ ಪದ್ಯ)
ತಾತ್ಪರ್ಯ:
ಧರ್ಮಜನು ಮಾತನಾಡುತ್ತಾ, ಗುಣನಿಧಿಯೂ, ಹನ್ನೊಂದು ಅಕ್ಷೋಹಿಣಿಯ ಒಡೆಯನೂ, ಸಮಸ್ತ ಕ್ಷತ್ರಿಯರ ಕಿರೀಟದಿಮ್ದ ಶೋಭಿತವಾದ ಪಾದಗಳನ್ನುಳ್ಳವನ್ನೂ ಆದವನ ತೊಡೆಯನ್ನು ಗದಾಯುದ್ಧದಲ್ಲಿ ಅನ್ಯಾಯದಿಂದ ಮುರಿದುದಲ್ಲದೆ, ಅವನ ತಲೆಯನ್ನು ಪಾದಗಳಿಂದೊದೆಯಬಹುದೇ? ಎಂದನು.
ಅರ್ಥ:
ಗುಣ: ನಡತೆ, ಸ್ವಭಾವ, ಸತ್ತ್ವ, ರಜಸ್ಸು, ತಮಸ್ಸು ಎಂಬ ಮೂರು ಮೂಲ ಸ್ವಭಾವಗಳು; ನಿಧಿ: ಸಂಪತ್ತು, ಐಶ್ವರ್ಯ; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಶೇಷ: ಉಳಿದ; ಪತಿ: ಒಡೆಯ; ಪಾರ್ಥಿವ: ಭೌತಿಕವಾದುದು; ಮಣಿಮಕುಟ: ರತ್ನಖಚಿತವಾದ ಕಿರೀಟ; ಕಿರಣ: ರಶ್ಮಿ, ಬೆಳಕಿನ ಕದಿರು; ಲಾಲಿತ: ಪ್ರೀತಿಯ, ಮಮತೆಯ; ಪಾದ: ಚರಣ; ಪಲ್ಲವ: ಚಿಗುರು, ತಳಿರು; ರಣ: ಯುದ್ಧ; ಅನ್ಯಾಯ: ಸರಿಯಲ್ಲದ ರೀತಿ; ತೊಡೆ: ಜಂಘೆ; ಹಣಿ: ಬಾಗು, ಮಣಿ; ಕೆಣಕು: ರೇಗಿಸು; ಮೌಳಿ: ಶಿರ; ಭೂಪ: ರಾಜ;
ಪದವಿಂಗಣೆ:
ಗುಣನಿಧಿಯನ್+ಏಕಾದಶ+ಅಕ್ಷೋ
ಹಿಣಿಯ +ಪತಿಯನ್+ಅಶೇಷ +ಪಾರ್ಥಿವ
ಮಣಿಮಕುಟ+ ಕಿರಣೋಪ+ಲಾಲಿತ +ಪಾದ+ಪಲ್ಲವನ
ರಣದೊಳ್+ಅನ್ಯಾಯದಲಿ +ತೊಡೆಗಳ
ಹಣಿದುದಲ್ಲದೆ+ ಪಾದದಲಿ +ನೀ
ಕೆಣಕುವರೆ +ಕುರುರಾಜಮೌಳಿಯನ್+ಎಂದನಾ ಭೂಪ
ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ: ಗುಣನಿಧಿ, ಕುರುರಾಜಮೌಳಿ, ಏಕಾದಶಾಕ್ಷೋಹಿಣಿಯ ಪತಿಯನ್