ಪದ್ಯ ೮೯: ಅಮರರೇಕೆ ಪುಷ್ಪವೃಷ್ಟಿ ಸುರಿದರು?

ಎಣಿಸುವರೆ ಏಕಾದಶಾಕ್ಷೋ
ಹಿಣಿಯ ಬಲವನು ಪಾರ್ಥನೊಬ್ಬನೆ
ರಣದೊಳಡಗೆಡಹಿದನು ಮೋಹನ ಮಂತ್ರ ಬಾಣದಲಿ
ಕುಣಿದು ಕುಸುಮದ ಸರಿವುಗಳ ಸಂ
ದಣಿಯನಮರರು ಸೂಸಿದರು ಫಲು
ಗುಣನು ರಥವನು ನೂಕಿದನು ನಿಜ ಮಹಿಪರಿದ್ದೆಡೆಗೆ (ವಿರಾಟ ಪರ್ವ, ೯ ಸಂಧಿ, ೮೯ ಪದ್ಯ)

ತಾತ್ಪರ್ಯ:
ಅರ್ಜುನನು ಸಮ್ಮೋಹನಾಸ್ತ್ರವೊಂದರಿಂದ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಅಡ್ಡಬೀಳಿಸಿದನು. ಇದನ್ನು ನೋಡಿದ ದೇವತೆಅಳು ಪುಷ್ಪವೃಷ್ಟಿ ಮಾಡಿ ನರ್ತಿಸಿದರು. ಕೌರವ ಸೈನ್ಯದ ಮುಖ್ಯಸ್ಥರೂ ರಾಜರಿದ್ದ ಕಡೆಗೆ ಅರ್ಜುನನು ರಥವನ್ನೊಯ್ದನು.

ಅರ್ಥ:
ಎಣಿಸು: ಲೆಕ್ಕ ಹಾಕು; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು, ೨೧೮೭೦ ರಥಗಳು, ೬೫೬೧೦ ಕುದುರೆಗಳು, ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಬಲ: ಶಕ್ತಿ; ರಣ: ಯುದ್ಧ; ಕೆಡಹು: ನಾಶಮಾಡು; ಮೋಹನ: ಆಕರ್ಷಣೆ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಬಾಣ: ಶರ; ಕುಣಿ: ನರ್ತಿಸು; ಕುಸುಮ: ಹೂವು; ಸರಿವು:ಧಾರೆ, ಸುರಿತ; ಸಂದಣಿ: ಗುಂಪು; ಅಮರ: ದೇವತೆ; ಸೂಸು: ಹರಡು; ಫಲುಗುಣ: ಅರ್ಜುನ; ರಥ: ಬಂಡಿ; ನೂಕು: ತಳ್ಳು; ನಿಜ: ದಿಟ; ಮಹಿಪ: ರಾಜ;

ಪದವಿಂಗಡಣೆ:
ಎಣಿಸುವರೆ +ಏಕಾದಶ+ಅಕ್ಷೋ
ಹಿಣಿಯ +ಬಲವನು +ಪಾರ್ಥನೊಬ್ಬನೆ
ರಣದೊಳ್+ಅಡಕೆಡಹಿದನು +ಮೋಹನ +ಮಂತ್ರ +ಬಾಣದಲಿ
ಕುಣಿದು +ಕುಸುಮದ+ ಸರಿವುಗಳ +ಸಂ
ದಣಿಯನ್+ಅಮರರು +ಸೂಸಿದರು +ಫಲು
ಗುಣನು+ ರಥವನು +ನೂಕಿದನು +ನಿಜ +ಮಹಿಪರಿದ್ದೆಡೆಗೆ

ಅಚ್ಚರಿ:
(೧) ದೇವತೆಗಳ ಸಂತಸವನ್ನು ಹೇಳುವ ಪರಿ – ಕುಣಿದು ಕುಸುಮದ ಸರಿವುಗಳ ಸಂದಣಿಯನಮರರು ಸೂಸಿದರು