ಕೆದರುತದೆ ನಮ್ಮವರ ದಳ ದೊರೆ
ಯದಟು ಸುಕ್ಕಿತು ರಾಯನೊಬ್ಬನೆ
ಕದನದಲಿ ಕೈದೋರಿ ಭಂಗಿಸಿದನು ಮಹಾರಥರ
ಹೊದರು ತಳಿತುದು ಲಗ್ಗೆವರೆ ಮೋ
ನದಲಿ ಮಗುಳ್ದುವು ಪಾರ್ಥ ದಿವ್ಯಾ
ಸ್ತ್ರದಲಿ ಕೈಮಾಡೆಂದು ನುಡಿದನು ವೀರನಾರಯಣ (ಶಲ್ಯ ಪರ್ವ, ೩ ಸಂಧಿ, ೭೭ ಪದ್ಯ)
ತಾತ್ಪರ್ಯ:
ದುರ್ಯೋಧನನ ಪರಾಕ್ರಮವನ್ನು ಕಂಡು ಶ್ರೀಕೃಷ್ಣನು ಪಾರ್ಥನಲ್ಲಿ ನುಡಿದನು, ಅರ್ಜುನಾ ಈಗ ನಮ್ಮ ಸೈನ್ಯ ಚದುರುತ್ತಿದೆ. ಧರ್ಮಜನ ಪರಾಕ್ರಮ ಕುಗ್ಗಿದೆ ದುರ್ಯೋಧನನೊಬ್ಬನೇ ನಮ್ಮ ಮಹಾರಥರನ್ನು ಸೋಲಿಸಿದನು. ಸೈನ್ಯದ ಗುಂಪು ಚೆಲ್ಲಿಹೋಯಿತು. ರಣವಾದ್ಯಗಳು ಮೌನವಾಗಿವೆ, ಈಗ ದಿವ್ಯಾಸ್ತ್ರಗಳನ್ನು ಪ್ರಯೋಗಿಸು ಎಂದು ಕೃಷ್ಣನು ಅಪ್ಪಣೆ ಮಾಡಿದನು.
ಅರ್ಥ:
ಕೆದರು: ಹರಡು; ದಳ: ಸೈನ್ಯ; ಅದಟು: ಪರಾಕ್ರಮ, ಶೌರ್ಯ; ಸುಕ್ಕು: ನಿರುತ್ಸಾಹ, ಮಂಕಾಗು; ರಾಯ: ರಾಜ; ಕದನ: ಯುದ್ಧ; ಕೈದೋರು: ಪ್ರದರ್ಶಿಸು; ಭಂಗಿಸು: ಅಪಮಾನ ಮಾಡು; ಮಹಾರಥ: ಪರಾಕ್ರಮಿ; ಹೊದರು: ಗುಂಪು, ಸಮೂಹ, ತೊಡಕು, ತೊಂದರೆ; ತಳಿತ: ಚಿಗುರು; ಲಗ್ಗೆ: ವಾದ್ಯಗಳಮೇಳ; ಮೋನ: ಮೌನ; ಮಗುಳು: ಹಿಂತಿರುಗು, ಪುನಃ; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧ; ಕೈಮಾಡು: ತೊಡು, ಪ್ರಯೋಗಿಸು; ನುಡಿ: ಮಾತಾಡು;
ಪದವಿಂಗಡಣೆ:
ಕೆದರುತದೆ +ನಮ್ಮವರ +ದಳ +ದೊರೆ
ಅದಟು +ಸುಕ್ಕಿತು +ರಾಯನೊಬ್ಬನೆ
ಕದನದಲಿ +ಕೈದೋರಿ +ಭಂಗಿಸಿದನು+ ಮಹಾರಥರ
ಹೊದರು +ತಳಿತುದು +ಲಗ್ಗೆವರೆ+ ಮೋ
ನದಲಿ +ಮಗುಳ್ದುವು +ಪಾರ್ಥ +ದಿವ್ಯಾ
ಸ್ತ್ರದಲಿ +ಕೈಮಾಡೆಂದು +ನುಡಿದನು +ವೀರನಾರಯಣ
ಅಚ್ಚರಿ:
(೧) ದೊರೆ, ರಾಯ – ಸಮಾನಾರ್ಥಕ ಪದ
(೨) ಶಕ್ತಿ ಕಡಿಮೆಯಾಯಿತು ಎಂದು ಹೇಳಲು – ದೊರೆಯದಟು ಸುಕ್ಕಿತು
(೩) ವಾದ್ಯಗಳು ಸುಮ್ಮನಾದವು ಎಂದು ಹೇಳುವ ಪರಿ – ಲಗ್ಗೆವರೆ ಮೋನದಲಿ ಮಗುಳ್ದುವು