ಪದ್ಯ ೭೬: ದುರ್ಯೋಧನನ ಪರಾಕ್ರಮದ ಯುದ್ಧವು ಹೇಗೆ ನಡೆಯಿತು?

ಮರಳಿ ಪಂಚದ್ರೌಪದೇಯರ
ಪರಿಭವಿಸಿದನು ಧರ್ಮಪುತ್ರನ
ತೆರಳಿಚಿದ ಸಹದೇವ ನಕುಲರ ಮತ್ತೆ ಸೋಲಿಸಿದ
ವರ ಯುಧಾಮನ್ಯೂತ್ತಮೌಜರ
ಹೊರಳಿಸಿದನವನಿಯಲಿ ಭೀಮಾ
ದ್ಯರಿಗೆ ಭೀತಿಯ ಬೀರಿದನು ಬೇಸರದೆ ಕುರುರಾಯ (ಶಲ್ಯ ಪರ್ವ, ೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ಉಪಪಾಂಡವರನ್ನು, ಧರ್ಮಜ, ಸಹದೇವ, ನಕುಲರನ್ನು ಮತ್ತೆ ಸೋಲಿಸಿದನು. ಯುಧಾಮನ್ಯು, ಉತ್ತಮೌಜಸರನ್ನು ಹೊಡೆದು ನೆಲದಲ್ಲಿ ಬೀಳಿಸಿದನು. ಭೀಮನೇ ಮೊದಲಾದವರು ದುರ್ಯೋಧನನ ಪರಾಕ್ರಮದ ಯುದ್ಧಕ್ಕೆ ಭೀತಿಗೊಳ್ಳುವಂತೆ ಮಾಡಿದನು.

ಅರ್ಥ:
ಮರಳು: ಹಿಂದಿರುಗು, ಮತ್ತೆ; ಪಂಚ: ಐದು; ದ್ರೌಪದೇಯರು: ಉಪಪಾಂಡವರು; ಪರಿಭವ: ತಿರಸ್ಕಾರ, ಕಷ್ಟ; ತೆರಳು: ಹೋಗು, ನಡೆ; ಸೋಲಿಸು: ಪರಾಭವ; ವರ: ಶ್ರೇಷ್ಠ; ಹೊರಳು: ತಿರುವು, ಬಾಗು; ಅವನಿ: ಭೂಮಿ; ಆದಿ: ಮುಂತಾದ; ಭೀತಿ: ಭಯ; ಬೀರು: ತೋರು; ಬೇಸರ: ಬೇಜಾರು; ರಾಯ: ರಾಜ;

ಪದವಿಂಗಡಣೆ:
ಮರಳಿ+ ಪಂಚ+ದ್ರೌಪದೇಯರ
ಪರಿಭವಿಸಿದನು +ಧರ್ಮಪುತ್ರನ
ತೆರಳಿಚಿದ +ಸಹದೇವ +ನಕುಲರ +ಮತ್ತೆ +ಸೋಲಿಸಿದ
ವರ +ಯುಧಾಮನ್ಯು+ಉತ್ತಮೌಜರ
ಹೊರಳಿಸಿದನ್+ಅವನಿಯಲಿ +ಭೀಮಾ
ದ್ಯರಿಗೆ +ಭೀತಿಯ +ಬೀರಿದನು+ ಬೇಸರದೆ +ಕುರುರಾಯ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಭೀಮಾದ್ಯರಿಗೆ ಭೀತಿಯ ಬೀರಿದನು ಬೇಸರದೆ
(೨) ಕೆಳಗೆ ಬೀಳಿಸು ಎಂದು ಹೇಳಲು – ಹೊರಳಿಸಿದನವನಿಯಲಿ