ಬಂದು ಹಸ್ತಿನಪುರಿಗೆ ರಾಧಾ
ನಮ್ದನನು ದುರ್ಯೋಧನನೈ
ತಂದು ಕಂಡನು ಕೌರವೇಶ್ವರನಿವರ ಕಾಣಿಸಿದ
ಅಂದು ಮೊದಲಾಗವರ ಸಖ್ಯಕೆ
ಸಂದ ಕಾಣೆನು ಕರ್ಣ ಕುರುಪತಿ
ಗೊಂದು ಜೀವನವೊಂದೆ ಮನ ಮತವೊಂದೆ ಕೇಳೆಂದ (ಆದಿ ಪರ್ವ, ೬ ಸಂಧಿ, ೪೩ ಪದ್ಯ)
ತಾತ್ಪರ್ಯ:
ಹಸ್ತಿನಾಪುರದಲ್ಲಿ ಕರ್ಣನು ದುರ್ಯೋಧನನನ್ನು ಕಂಡನು. ಆ ದಿನದಿಂದ ಅವರ ಸ್ನೇಹವು ಅಖಂಡವಾಗಿ ಬೆಳೆಯಿತು. ಅವರ ಜೀವನ ವಿಧಾನ, ಮನಸ್ಸು ಅಭಿಪ್ರಾಯಗಳು ಒಂದೆ ಆದವು.
ಅರ್ಥ:
ಬಂದು: ಆಗಮಿಸು; ನಂದನ: ಮಗ; ಐತಂದು: ಬಂದು ಸೇರು; ಕಂಡು: ನೋಡು; ಕಾಣಿಸು: ತೋರು; ಸಖ್ಯ: ಸ್ನೇಹ; ಸಂದ: ಕಳೆದ, ಹಿಂದಿನ; ಮನ: ಮನಸ್ಸು; ಮತ: ವಿಚಾರ; ಕೇಳು: ಆಲಿಸು; ಜೀವನ: ಬಾಳು;
ಪದವಿಂಗಡಣೆ:
ಬಂದು +ಹಸ್ತಿನಪುರಿಗೆ +ರಾಧಾ
ನಂದನನು +ದುರ್ಯೋಧನನೈ
ತಂದು +ಕಂಡನು +ಕೌರವೇಶ್ವರನ್+ಇವರ +ಕಾಣಿಸಿದ
ಅಂದು +ಮೊದಲಾಗ್+ಅವರ +ಸಖ್ಯಕೆ
ಸಂದ +ಕಾಣೆನು +ಕರ್ಣ+ ಕುರುಪತಿಗ್
ಒಂದು +ಜೀವನವೊಂದೆ+ ಮನ +ಮತವೊಂದೆ +ಕೇಳೆಂದ
ಅಚ್ಚರಿ:
(೧) ಬಂದು, ಅಂದು, ತಂದು, ಒಂದು – ಪ್ರಾಸ ಪದಗಳು
(೨) ಜೀವಗೆಳೆತನವನ್ನು ವಿವರಿಸುವ ಪರಿ – ಕರ್ಣ ಕುರುಪತಿಗೊಂದು ಜೀವನವೊಂದೆ ಮನ ಮತವೊಂದೆ