ಮುರಿದು ಬರುತಿದೆ ಜೀಯ ನಾಯಕ
ರುರಿವವರ ಬಲುಗಾಯದಲಿ ಕು
ಕ್ಕುರಿಸಿದರು ಗಂಧರ್ವರಿಗೆ ಕಡೆವನದ ಕಾಹಿನಲಿ
ಮರಳಿ ಪಾಳೆಯ ಬಿಡಲಿ ಮೇಣ್ ಹಗೆ
ಯಿರಿತಕಂಗೈಸುವರು ಬಿಡು ಕೈ
ಮರೆಯಬೇಡೆನೆ ಬೆರಳ ಮೂಗಿನಲರಸ ಬೆರಗಾದ (ಅರಣ್ಯ ಪರ್ವ, ೧೯ ಸಂಧಿ, ೪೪ ಪದ್ಯ)
ತಾತ್ಪರ್ಯ:
ದೂತರು, ಜೀಯ ನಮ್ಮವರು ಸೋತು ಹಿಮ್ಮೆಟ್ಟಿ ಬರುತ್ತಿದ್ದಾರೆ. ಗಂಧರ್ವರು ವನದ ಅಂಚಿನಲ್ಲಿ ಸಜ್ಜಾಗಿ ನಿಂತಿದ್ದಾರೆ. ನಮ್ಮವರು ಹೊಡೆತ ತಿಂದು ಕುಕ್ಕುರಿಸಿದ್ದಾರೆ. ಪಾಳೆಯ ಮರಳಲಿ ಅಥವಾ
ಶತ್ರುಗಳ ಹೊಡೆತವನ್ನು ಸೈರಿಸಿ ಗೆಲ್ಲಬಲ್ಲವರನ್ನು ಕಳಿಸು ಎಂದು ಭಟರು ಹೇಳಲು ಆಶ್ಚರ್ಯಚಕಿತನಾದ ದುರ್ಯೋಧನನು ತನ್ನ ಮೂಗಿನ ಮೇಲೆ ಬೆರಳಿಟ್ಟು ಕೊಂಡನು.
ಅರ್ಥ:
ಮುರಿ: ಸೀಳು; ಬರುತಿದೆ: ಆಗಮನ; ಜೀಯ: ಒಡೆಯ, ನಾಯಕ; ಬಲು: ತುಂಬ; ಗಾಯ: ಪೆಟ್ಟು; ಕುಕ್ಕುರಿಸು: ಬೀಳು, ಕೂತುಕೋ; ಕಡೆ: ಕೊನೆ; ವನ: ಕಾಡು; ಕಾಹಿ: ಕಾಯುವವ; ಮರಳಿ: ಪುನಃ; ಪಾಳೆ: ಪಾಳೆಯ, ಸೀಮೆ; ಬಿಡು: ತೊರೆ; ಮೇಣ್: ಅಥವಾ; ಹಗೆ: ವೈರತ್ವ; ತಿವಿ: ಚುಚ್ಚು; ಅಂಗೈಸು: ಸ್ವೀಕರಿಸು; ಬಿಡು: ತೊರೆ; ಕೈಮರೆ: ಕೈ ಅಡ್ಡವಾಗಿಡು; ಬೆರಳು: ಅಂಗುಲಿ; ಮೂಗು: ನಾಸಿಕ; ಅರಸ: ರಾಜ; ಬೆರಗು: ವಿಸ್ಮಯ, ಸೋಜಿಗ;
ಪದವಿಂಗಡಣೆ:
ಮುರಿದು +ಬರುತಿದೆ +ಜೀಯ +ನಾಯಕ
ರುರಿವವರ +ಬಲು+ಗಾಯದಲಿ+ ಕು
ಕ್ಕುರಿಸಿದರು+ ಗಂಧರ್ವರಿಗೆ +ಕಡೆ+ವನದ +ಕಾಹಿನಲಿ
ಮರಳಿ +ಪಾಳೆಯ +ಬಿಡಲಿ+ ಮೇಣ್ +ಹಗೆ
ಯಿರಿತಕ್+ ಅಂಗೈಸುವರು +ಬಿಡು +ಕೈ
ಮರೆಯಬೇಡ್+ಎನೆ +ಬೆರಳ+ ಮೂಗಿನಲ್+ಅರಸ +ಬೆರಗಾದ
ಅಚ್ಚರಿ:
(೧) ಆಶ್ಚರ್ಯವನ್ನು ಚಿತ್ರಿಸುವ ಪರಿ – ಬೆರಳ ಮೂಗಿನಲರಸ ಬೆರಗಾದ