ಮುರಿಯಿಸುತ ಗಂಧರ್ವ ಬಲ ಮು
ಕ್ಕುರಿಕಿ ಕೌರವ ಬಲವ ತತ್ತರ
ದರಿದು ತರಹರವಿಲ್ಲೆನಿಸಿ ಹೊಗಿಸಿದರು ಪಾಳೆಯವ
ಹೊರಗುಡಿಯ ಹೊರಪಾಳೆಯದ ಭಟ
ರರುಹಿದರು ಕುರುಪತಿಗೆ ಖತಿಯಲಿ
ಜರಿದು ಜೋಡಿಸಿ ಬಿಟ್ಟನಕ್ಷೋಹಿಣಿಯ ನಾಯಕರ (ಅರಣ್ಯ ಪರ್ವ, ೧೯ ಸಂಧಿ, ೩೫ ಪದ್ಯ)
ತಾತ್ಪರ್ಯ:
ಗಂಧರ್ವರು ಕೌರವ ಬಲವನ್ನು ಮುರಿದರು. ತಮ್ಮ ಬಾಣಗಳಿಂದ ಕತ್ತರಿಸಿ ಅವರೆಲ್ಲರೂ ತಮ್ಮ ಪಾಳೆಯಕ್ಕೆ ಹೋಗುವಂತೆ ಹೊಡೆದೋಡಿಸಿದರು. ಪಾಳೆಯದ ಹೊರಗಿದ್ದವರು ಕೌರವನಿಗೆ ಸೋಲಿನ ಸುದ್ದಿಯನ್ನು ತಿಳಿಸಲು, ಕೌರವನು ಅವರನ್ನು ಜರೆದು ಅಕ್ಷೋಹಿಣಿಯ ಅಧಿಪತಿಗಳನ್ನು ಕಾಳಗಕ್ಕೆ ಕಳುಹಿಸಿದನು.
ಅರ್ಥ:
ಮುರಿ: ಸೀಳು; ಬಲ: ಸೈನ್ಯ; ಮುಕ್ಕುರಿಸು: ಆತುರಪಡು, ಶ್ರಮಿಸು; ತತ್ತರ: ನಡುಕ, ಕಂಪನ; ಅರಿ: ಕತ್ತರಿಸು; ತರಹರ: ತಂಗುವಿಕೆ, ನಿಲ್ಲುವಿಕೆ; ಹೊಗಿಸು: ಒಳಹೋಗಿಸು; ಪಾಳೆ: ಸೀಮೆ; ಹೊರಗುಡಿ: ಹೊರಗಿನ ಧ್ವಜ; ಹೊರ: ಆಚೆ; ಪಾಳೆಯ: ಬೀಡು, ಶಿಬಿರ; ಭಟ: ಸೈನಿಕ; ಅರುಹು: ತಿಳಿಸು; ಖತಿ: ಕೋಪ; ಜರಿ: ಬಯ್ದು; ಜೋಡಿಸು: ಕೂಡಿಸು; ಬಿಡು: ಹೊರತರು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನಾಯಕ: ಒಡೆಯ;
ಪದವಿಂಗಡಣೆ:
ಮುರಿಯಿಸುತ +ಗಂಧರ್ವ +ಬಲ +ಮು
ಕ್ಕುರಿಕಿ +ಕೌರವ +ಬಲವ +ತತ್ತರದ್
ಅರಿದು+ ತರಹರವಿಲ್ಲೆನಿಸಿ +ಹೊಗಿಸಿದರು +ಪಾಳೆಯವ
ಹೊರಗುಡಿಯ +ಹೊರಪಾಳೆಯದ +ಭಟರ್
ಅರುಹಿದರು +ಕುರುಪತಿಗೆ +ಖತಿಯಲಿ
ಜರಿದು +ಜೋಡಿಸಿ +ಬಿಟ್ಟನ್+ಅಕ್ಷೋಹಿಣಿಯ +ನಾಯಕರ
ಅಚ್ಚರಿ:
(೧) ಮು – ೧ ಸಾಲಿನ ಮೊದಲ ಹಾಗು ಕೊನೆ ಪದ
(೨) ಹೊರ ಪದದ ಬಳಕೆ – ಹೊರಗುಡಿಯ ಹೊರಪಾಳೆಯದ