ಖೇಡನಾಗದಿರದ್ಭುತ ಧ್ವನಿ
ಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತೆ ಸಂತೈಸಿ
ಮೂಡಿಗೆಯೊಳಂಬುಗಿದು ತಿರುವಿಗೆ
ಹೂಡಿದನು ಫಲುಗುಣನ ಕದನವ
ನೋಡಲಮರಶ್ರೇಣಿ ಮೇಳೈಸಿತ್ತು ಗಗನದಲಿ (ವಿರಾಟ ಪರ್ವ, ೭ ಸಂಧಿ, ೬೮ ಪದ್ಯ)
ತಾತ್ಪರ್ಯ:
ಉತ್ತರನ ಭಯವನ್ನು ಕಂಡ ಅರ್ಜುನನು, ಎಲೈ ಉತ್ತರ ಹೆದರಬೇಡ, ನಾನು ಮಹಾ ಧ್ವನಿಯನ್ನು ಮಾಡುವುದಿಲ್ಲ, ಧೈರ್ಯ ತಂದುಕೊಂಡು ಈ ರಥವನ್ನು ನಡೆಸೆಂದು ಹೇಳಿ, ಅರ್ಜುನನು ಬತ್ತಳಿಕೆಯಿಂದ ಬಾಣವನ್ನು ತೆಗೆದು ಬಿಲ್ಲಿಗೆ ಹೂಡಿದನು. ಈ ಯುದ್ಧವನ್ನು ನೋಡಲು ದೇವತೆಗಳು ಆಕಾಶದಲ್ಲಿ ಸೇರಿದರು.
ಅರ್ಥ:
ಖೇಡ: ಭಯಗ್ರಸ್ತ; ಅದ್ಭುತ: ಅತ್ಯಾಶ್ಚರ್ಯಕರವಾದ ವಸ್ತು; ಧ್ವನಿ: ಶಬ್ದ; ಮಾಡೆ: ಮಾಡುವುದಿಲ್ಲ; ಅಂಜು: ಹೆದರು; ಧೃತಿ: ಧೈರ್ಯ, ಧೀರತನ; ರಥ: ಬಂಡಿ; ಜೋಡಿಸು: ಕೂಡಿಸು; ಸಂತೈಸು: ಸಾಂತ್ವನಗೊಳಿಸು; ಮೂಡಿಗೆ:ಬತ್ತಳಿಕೆ; ಅಂಬು: ಬಾಣ; ತಿರುವು: ತಿರುಗು, ಬಾಗು; ಹೂಡು: ನೊಗಹೇರು; ಕದನ: ಯುದ್ಧ; ನೋಡು: ವೀಕ್ಷಿಸು; ಅಮರ: ದೇವತೆ; ಶ್ರೇಣಿ: ಗುಂಪು; ಮೇಳೈಸು: ಸೇರು, ಜೊತೆಯಾಗು; ಗಗನ: ಆಗಸ;
ಪದವಿಂಗಡಣೆ:
ಖೇಡನಾಗದಿರ್+ಅದ್ಭುತ +ಧ್ವನಿ
ಮಾಡೆನ್+ಅಂಜದಿರ್+ಅಂಜದಿರು+ ಧೃತಿ
ಮಾಡಿಕೊಂಡ್+ಈ+ ರಥವ+ ಜೋಡಿಸ್+ಎನುತ್ತೆ+ ಸಂತೈಸಿ
ಮೂಡಿಗೆಯೊಳ್+ಅಂಬುಗಿದು+ ತಿರುವಿಗೆ
ಹೂಡಿದನು +ಫಲುಗುಣನ+ ಕದನವ
ನೋಡಲ್+ಅಮರಶ್ರೇಣಿ +ಮೇಳೈಸಿತ್ತು +ಗಗನದಲಿ
ಅಚ್ಚರಿ:
(೧) ಅಭಯವನ್ನು ನೀಡುವ ಪರಿ – ಖೇಡನಾಗದಿರದ್ಭುತ ಧ್ವನಿಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತೆ ಸಂತೈಸಿ