ಪದ್ಯ ೬೬: ಉತ್ತರನೇಕೆ ಮೂರ್ಛೆ ಹೋದನು?

ಶಿರವ ಸಿಡಿಲೆರಗಿದವೊಲುತ್ತರ
ತಿರುಗಿ ಬಿದ್ದನು ಮೂರ್ಛೆಯಲಿ ಹೊಡೆ
ಮರಳಿದವು ಕಣ್ಣಾಲಿ ಕಾರಿದವರುಣವಾರಿಗಳ
ಹೊರಳುತಿರಲೆಲೆ ಪಾಪಿ ಸೈರಿಸ
ಲರಿಯನಿನ್ನೇನೆನುತ ಫಲುಗುಣ
ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ (ವಿರಾಟ ಪರ್ವ, ೭ ಸಂಧಿ, ೬೬ ಪದ್ಯ)

ತಾತ್ಪರ್ಯ:
ಈ ಸದ್ದಿನಿಂದ ನೆತ್ತಿಗೆ ಸಿಡಿಲು ಬಡಿದವನಂತೆ ಉತ್ತರನು ರಥದಲ್ಲಿ ಬಿದ್ದು ಮೂರ್ಛೆ ಹೋದನು. ಅವನ ಕಣ್ಣುಗುಡ್ಡೆಗಳು ನೆಟ್ಟುಗೊಂಡವು, ಅರ್ಜುನನು ಅದನ್ನು ನೋಡಿ, ಎಲಾ ಪಾಪಿ, ಇಷ್ಟು ಶಬ್ದವನ್ನೂ ಸಹಿಸಲಾರ? ಏನು ಮಾಡಲಿ ಎಂದು ಹೇಳುರತ್ತಾ ತನ್ನ ಉತ್ತರೀಯದ ಸೆರಗಿನಿಂದ ಗಾಳಿ ಬೀಸಿ ರಥದಲ್ಲಿ ಸರಿಯಾಗಿ ಕೂಡಿಸಿದನು.

ಅರ್ಥ:
ಶಿರ: ತಲೆ; ಸಿಡಿಲು: ಅಶನಿ; ಎರಗು: ಬೀಳು; ತಿರುಗು: ಮಗ್ಗುಲಾಗು; ಮೂರ್ಛೆ: ಮೈಮರೆ; ಹೊಡೆ: ಹೊಡೆತ; ಮರಳು: ಹಿಂತಿರುಗು; ಕಣ್ಣು: ನಯನ; ಕಣ್ಣಾಲಿ: ಕಣ್ಣುಗುಡ್ಡೆ; ಅರುಣ: ಕೆಂಪು ಬಣ್ಣ; ವಾರಿ: ಜಲ; ಹೊರಳು: ತಿರುವು, ಬಾಗು: ಪಾಪಿ: ದುಷ್ಟ; ಸೈರಿಸು: ತಾಳು, ಸಹಿಸು; ಅರಿ: ತಿಳಿ; ಸೆರಗು: ಉತ್ತರೀಯ; ಬೀಸು: ತೂಗುವಿಕೆ; ಕುಳ್ಳಿರಿಸು: ಕೂಡು, ಆಸೀನನಾಗು; ರಥ: ಬಂಡಿ;

ಪದವಿಂಗಡಣೆ:
ಶಿರವ +ಸಿಡಿಲ್+ಎರಗಿದವೊಲ್+ಉತ್ತರ
ತಿರುಗಿ +ಬಿದ್ದನು +ಮೂರ್ಛೆಯಲಿ +ಹೊಡೆ
ಮರಳಿದವು +ಕಣ್ಣಾಲಿ+ ಕಾರಿದವ್+ಅರುಣ+ವಾರಿಗಳ
ಹೊರಳುತಿರಲ್+ಎಲೆ +ಪಾಪಿ +ಸೈರಿಸಲ್
ಅರಿಯನ್+ಇನ್ನೇನ್+ಎನುತ +ಫಲುಗುಣ
ಸೆರಗಿನಲಿ+ ಬೀಸಿದನು+ ಕುಳ್ಳಿರಿಸಿದನು +ರಥದೊಳಗೆ

ಚ್ಚರಿ:
(೧) ಉಪಮಾನದ ಪ್ರಯೋಗ – ಶಿರವ ಸಿಡಿಲೆರಗಿದವೊಲ್
(೨) ಉತ್ತರನಿಗೆ ಶಬ್ದದಿಂದಾದ ಸ್ಥಿತಿ – ಬಿದ್ದನು ಮೂರ್ಛೆಯಲಿ ಹೊಡೆಮರಳಿದವು ಕಣ್ಣಾಲಿ ಕಾರಿದವರುಣವಾರಿಗಳ

ನಿಮ್ಮ ಟಿಪ್ಪಣಿ ಬರೆಯಿರಿ