ಸರಿಯಲೌ ಸುತಶೋಕ ನಮ್ಮಿ
ಬ್ಬರಿಗೆ ನಮ್ಮೊಳುವೆರೆಸಿ ವೈರೋ
ತ್ಕರವಿಸಂಸ್ಥುಳರಣವಿಧಾನವ ನಮ್ಮೊಳಗೆ ರಚಿಸಿ
ಎರಡು ಬಲದಲಿ ಸಕಲ ಭೂಮೀ
ಶ್ವರರ ಚಾತುರ್ಬಲವನುಪಸಂ
ಹರಿಸಿದಾತನು ತಾನೆ ಗದುಗಿನ ವೀರನಾರಯಣ (ಗದಾ ಪರ್ವ, ೧೧ ಸಂಧಿ, ೭೩ ಪದ್ಯ)
ತಾತ್ಪರ್ಯ:
ದ್ರೌಪದಿಯು ನುಡಿಯುತ್ತಾ, ನಮ್ಮಿಬ್ಬರಿಗೂ ಪುತ್ರಶೋಕವು ಒಂದೇ ರೀತಿಯಾಗಿದೆ. ಗದುಗಿನ ವೀರನಾರಾಯಣನು ನಮ್ಮಲ್ಲಿ ಸೇರಿ ವೈರತ್ವವನ್ನು ಬೆಳಸಿ, ಭಾರತಯುದ್ಧದಲ್ಲಿ ಎರಡೂ ಪಕ್ಷದ ಚತುರ್ಬಲವನ್ನು ಸಂಹರಿಸಿದನಲ್ಲವೇ ಎಂದು ನುಡಿದಳು.
ಅರ್ಥ:
ಸರಿ: ಸಮ; ಸುತ: ಪುತ್ರ; ಶೋಕ: ದುಃಖ; ವೈರ: ಶತ್ರು; ಉತ್ಕರ: ರಾಶಿ, ಸಮೂಹ; ರಣ: ಯುದ್ಧ; ವಿಧಾನ: ರೀತಿ; ರಚಿಸು: ನಿರ್ಮಿಸು; ಬಲ: ಸೈನ್ಯ; ಸಕಲ: ಎಲ್ಲಾ; ಭೂಮೀಶ್ವರ: ರಾಜ; ಚಾತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಉಪಸಂಹರಿಸು: ನಾಶಮಾಡು;
ಪದವಿಂಗಡಣೆ:
ಸರಿಯಲೌ +ಸುತ+ಶೋಕ +ನಮ್ಮಿ
ಬ್ಬರಿಗೆ+ ನಮ್ಮೊಳುವ್+ಎರೆಸಿ +ವೈರೋ
ತ್ಕರವಿ+ಸಂಸ್ಥುಳ+ರಣ+ವಿಧಾನವ +ನಮ್ಮೊಳಗೆ +ರಚಿಸಿ
ಎರಡು +ಬಲದಲಿ +ಸಕಲ+ ಭೂಮೀ
ಶ್ವರರ+ ಚಾತುರ್ಬಲವನ್+ಉಪಸಂ
ಹರಿಸಿದಾತನು +ತಾನೆ +ಗದುಗಿನ +ವೀರನಾರಯಣ
ಅಚ್ಚರಿ:
(೧) ನಮ್ಮೊಳುವೆರೆಸಿ, ನಮ್ಮೊಳಗೆ ರಚಿಸಿ – ಪದದ ರಚನೆ