ಕೇಳಿ ಹರಿತಂದುದು ಮುನಿವ್ರಜ
ವೇಳಿಗೆಯ ಕದುಶೋಕರಸದ ಛ
ಡಾಳವನು ನಿಲಿಸಿದರು ಸಂತೈಸಿಯೆ ಕುಮಾರಕರ
ಆಲಿಸಿದಳಾ ಕುಂತಿ ಮೂರ್ಛಾ
ವ್ಯಾಳವಿಷ ಪರಿಹರಿಸಿ ಧರಣೀ
ಪಾಲಕನ ನೋಡಿದಳು ಬಿಸುಟೈ ತನ್ನನಿಂದೆನುತ (ಆದಿ ಪರ್ವ, ೫ ಸಂಧಿ, ೨೧ ಪದ್ಯ)
ತಾತ್ಪರ್ಯ:
ಈ ಪ್ರಲಾಪವನ್ನು ಕೇಳಿ ಮುನಿಗಳು ಅಲ್ಲಿಗೆ ಹೋದರು. ಪಾಂಡವರನ್ನು ಸಂತೈಸಿ, ಅವರ ದುಃಖಭರವನ್ನು ನಿವಾರಿಸಿದರು. ಕುಂತಿಯು ಮೂರ್ಛೆಯನ್ನು ಕಳೆದುಕೊಂಡು ಪಾಂಡುವನ್ನು ನೋಡಿ ಇಂದು ನನ್ನನ್ನು ಬಿಟ್ಟುಬಿಟ್ಟೆಯಾ ಎಂದಳು.
ಅರ್ಥ:
ಕೇಳು: ಆಲಿಸು; ಹರಿತಂದು: ವೇಗವಾಗಿ ಬಂದು; ಮುನಿ: ಋಷಿ; ವ್ರಜ: ಗುಂಪು; ಏಳಿಗೆ: ಹೆಚ್ಚು; ಕಡುಶೋಕ: ತುಂಬ ದುಃಖ; ರಸ: ಸಾರ; ಛಡಾಳ: ಹೆಚ್ಚಳ, ಆಧಿಕ್ಯ; ನಿಲಿಸು: ತಡೆ; ಸಂತೈಸು: ಸಮಾಧಾನಪಡಿಸು; ಕುಮಾರ: ಮಕ್ಕಳು; ಆಲಿಸು: ಕೇಳು; ಮೂರ್ಛೆ: ಜ್ಞಾನತಪ್ಪಿರುವ ಸ್ಥಿತಿ; ವ್ಯಾಳ: ಸರ್ಪ, ಮೋಸಗಾರ; ವಿಷ: ಗರಳ; ಪರಿಹರಿಸು: ನಿವಾರಿಸು; ಧರಣೀಪಾಲಕ: ರಾಜ; ನೋಡು: ವೀಕ್ಷಿಸು; ಬಿಸುಟು: ಹೊರಹಾಕು;
ಪದವಿಂಗಡಣೆ:
ಕೇಳಿ +ಹರಿತಂದುದು +ಮುನಿವ್ರಜ
ವೇಳಿಗೆಯ +ಕಡು+ಶೋಕರಸದ +ಛ
ಡಾಳವನು +ನಿಲಿಸಿದರು +ಸಂತೈಸಿಯೆ +ಕುಮಾರಕರ
ಆಲಿಸಿದಳಾ +ಕುಂತಿ +ಮೂರ್ಛಾ
ವ್ಯಾಳವಿಷ+ ಪರಿಹರಿಸಿ+ ಧರಣೀ
ಪಾಲಕನ +ನೋಡಿದಳು +ಬಿಸುಟೈ +ತನ್ನನ್+ಇಂದ್ +ಎನುತ
ಅಚ್ಚರಿ:
(೧) ರೂಪಕದ ಪ್ರಯೋಗ – ಮೂರ್ಛಾವ್ಯಾಳವಿಷ ಪರಿಹರಿಸಿ