ಮತ್ತೆ ಹೂವಿನ ಮಳೆಗಳಾತನ
ನೆತ್ತಿಯಲಿ ಸುರಿದವು ಮುರಾಂತಕ
ನತ್ತ ತಿರುಗಿದನವನಿಪತಿ ಕರತಳವ ತಳುಕಿಕ್ಕಿ
ಮುತ್ತಿದರು ಮಾಗಧರು ವಂದಿಗ
ಳೆತ್ತಣದು ನಾನರಿಯೆನರಸ ವಿ
ಯತ್ತಲವನಳ್ಳಿರಿದುದಾ ಸ್ತುತಿಪಾಠಕರ ರಭಸ (ಗದಾ ಪರ್ವ, ೮ ಸಂಧಿ, ೪೨ ಪದ್ಯ)
ತಾತ್ಪರ್ಯ:
ದುರ್ಯೋಧನನ ಮೇಲೆ ಮತ್ತೆ ಹೂ ಮಳೆಗಳು ವರ್ಷಿಸಿದವು. ಶ್ರೀ ಕೃಷ್ಣನು ಧರ್ಮಜನ ಕೈಗೆ ಕೈಗೂಡಿಸಿ ಹೊರಟು ಹೋದನು. ವಂದಿಮಾಗಧರು ಕೌರವನನ್ನು ಹೊಗಳಿದ ಸದ್ದು ಆಕಾಶವನ್ನು ವ್ಯಾಪಿಸಿತು.
ಅರ್ಥ:
ಮತ್ತೆ: ಪುನಃ; ಹೂವು: ಮಲರ್; ಮಳೆ: ವರ್ಷ; ನೆತ್ತಿ: ಶಿರ; ಸುರಿ: ವರ್ಷಿಸು; ಮುರಾಂತಕ: ಕೃಷ್ಣ; ತಿರುಗು: ಸುತ್ತು; ಅವನಿಪತಿ: ರಾಜ; ಕರತಳ: ಹಸ್ತ; ತಳುಕು: ಹೆಣಿಕೆ, ಜೋಡಣೆ; ಮುತ್ತು: ಆವರಿಸು; ವಂದಿ: ಹೊಗಳುಭಟ್ಟ; ಅರಿ: ತಿಳಿ; ಅರಸ: ರಾಜ; ಅಳ್ಳಿರಿ: ನಡುಗಿಸು, ಚುಚ್ಚು; ಸ್ತುತಿಪಾಠಕ: ಹೊಗಳುಭಟ್ಟ; ರಭಸ: ವೇಗ;
ಪದವಿಂಗಡಣೆ:
ಮತ್ತೆ +ಹೂವಿನ +ಮಳೆಗಳ್+ಆತನ
ನೆತ್ತಿಯಲಿ +ಸುರಿದವು +ಮುರಾಂತಕನ್
ಅತ್ತ+ ತಿರುಗಿದನ್+ಅವನಿಪತಿ +ಕರತಳವ +ತಳುಕಿಕ್ಕಿ
ಮುತ್ತಿದರು+ ಮಾಗಧರು +ವಂದಿಗಳ್
ಎತ್ತಣದು+ ನಾನರಿಯೆನ್+ಅರಸ +ವಿ
ಯತ್ತಲವನ್+ಅಳ್ಳಿರಿದುದಾ +ಸ್ತುತಿಪಾಠಕರ +ರಭಸ
ಅಚ್ಚರಿ:
(೧) ಮಾಗಧ, ವಂದಿ, ಸ್ತುತಿಪಾಠಕ – ಸಾಮ್ಯಾರ್ಥ ಪದಗಳು