ಕೇಳುತಿದ್ದರು ಪತಿಯ ಮೂದಲೆ
ಗಾಳಿಯಲೆ ದಳ್ಳಿಸುವ ಶೌರ್ಯ
ಜ್ವಾಲೆ ಜಡಿದುದು ಖಾತಿಯಲಿ ಹೊಗರೇರಿದಾನನದ
ಆಳುತನವುಬ್ಬೆದ್ದು ಕಡು ಹೀ
ಹಾಳಿಕಾರರು ಕೈದುಕೊಂಡರು
ಬಾಲಕನ ತರುಬಿದರು ದೊರೆಗಳು ಕೇಳು ಧೃತರಾಷ್ಟ್ರ (ದ್ರೋಣ ಪರ್ವ, ೫ ಸಂಧಿ, ೮೨ ಪದ್ಯ)
ತಾತ್ಪರ್ಯ:
ಒಡೆಯನ ಹಂಗಿಸುವ ಮಾತುಗಳನ್ನು ಕೇಳಿದರು. ಮೂದಲಿಸುವ ಗಾಳಿ ಅವರ ಶೌರ್ಯದ ಜ್ವಾಲೆಯನ್ನು ಧಗ್ಗನೆ ಹೊತ್ತಿಸಿತು. ಅವರ ಪರಾಕ್ರಮವು ಉಬ್ಬಿ ಮುಖಗಳು ಕೋಪದಿಂದ ಕಠೋರವಾದವು. ತೆಗಳಿಕೆಯಿಂದ ನೊಂದು ಕೌರವವೀರರು ಆಯುಧಗಳನ್ನು ಹಿಡಿದು ಅಭಿಮನ್ಯುವನ್ನು ತಡೆದರು.
ಅರ್ಥ:
ಕೇಳು: ಆಲಿಸು; ಪತಿ: ಒಡೆಯ; ಮೂದಲೆ: ಹಂಗಿಸು, ಬಯ್ಗುಳ; ಗಾಳಿ: ವಾಯು, ಪವನ; ದಳ್ಳಿಸು: ಧಗ್ ಎಂದು ಉರಿ; ಶೌರ್ಯ: ಪರಾಕ್ರಮ; ಜ್ವಾಲೆ: ಬೆಂಕಿ; ಜಡಿ: ಬೆದರಿಕೆ; ಖಾತಿ: ಕೋಪ; ಹೊಗರು: ಕಾಂತಿ, ಪ್ರಕಾಶ; ಆನನ: ಮುಖ; ಆಳುತನ: ಪರಾಕ್ರಮ; ಉಬ್ಬೆದ್ದು: ಹೆಚ್ಚಾಗು; ಹೀಹಾಳಿ: ತೆಗಳಿಕೆ, ಅವಹೇಳನ; ಕೈದು: ಆಯುಧ; ಬಾಲಕ: ಚಿಕ್ಕವ; ತರುಬು: ತಡೆ, ನಿಲ್ಲಿಸು; ದೊರೆ: ರಾಜ, ಒಡೆಯ;
ಪದವಿಂಗಡಣೆ:
ಕೇಳುತಿದ್ದರು +ಪತಿಯ +ಮೂದಲೆ
ಗಾಳಿಯಲೆ +ದಳ್ಳಿಸುವ +ಶೌರ್ಯ
ಜ್ವಾಲೆ +ಜಡಿದುದು +ಖಾತಿಯಲಿ +ಹೊಗರ್+ಏರಿದ್+ಆನನದ
ಆಳುತನವ್+ಉಬ್ಬೆದ್ದು +ಕಡು +ಹೀ
ಹಾಳಿಕಾರರು +ಕೈದುಕೊಂಡರು
ಬಾಲಕನ +ತರುಬಿದರು +ದೊರೆಗಳು +ಕೇಳು +ಧೃತರಾಷ್ಟ್ರ
ಅಚ್ಚರಿ:
(೧) ರೂಪಕದ ಪ್ರಯೋಗ – ಪತಿಯ ಮೂದಲೆಗಾಳಿಯಲೆ ದಳ್ಳಿಸುವ ಶೌರ್ಯಜ್ವಾಲೆ ಜಡಿದುದು