ಎಲ್ಲಿ ಷಡುರಸಮಯದ ಭೋಜನ
ವೆಲ್ಲಿ ಮಧುರ ಫಲೌಘದುಬ್ಬರ
ವೆಲ್ಲಿ ನಾನಾಭಕ್ಷ್ಯಗಿರಿಗಳು ಘೃತದ ಕಡಲುಗಳು
ಅಲ್ಲಿ ನಿನ್ನುರವಣೆಗಳೊಪ್ಪುವ
ದಲ್ಲದೀ ಸಂಗ್ರಾಮ ಮುಖದಲಿ
ಬಿಲ್ಲಹಬ್ಬದ ತುಷ್ಟಿ ನಿನಗೇಕೆಂದನಾ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೬೩ ಪದ್ಯ)
ತಾತ್ಪರ್ಯ:
ಎಲವೋ ಭೀಮ, ಎಲ್ಲಿ ಷಡ್ರಸ ಭರಿತವಾದ ಊಟವಿದೆಯೋ, ಎಲ್ಲಿ ಸಿಹಿ ಹಣ್ಣುಗಳು ಹೇರಳವಾಗಿವೆಯೋ, ಎಲ್ಲಿ ಭಕ್ಷ್ಯದ ಬೆಟ್ಟಗಳು, ತುಪ್ಪದ ಸಾಗರಗಳಿವೆಯೋ, ಅಲ್ಲಿ ನಿನ್ನ ಪರಾಕ್ರಮವು ಸಾರ್ಥಕವೆನ್ನಿಸುವುದೇ ಹೊರತು, ಯುದ್ಧರಂಗದಲ್ಲಿ ಬಿಲ್ಲಹಬ್ಬದಿಂದ ನಿನಗೆ ತೃಪ್ತಿಯಾಗಲು ಸಾಧ್ಯವೇ ಎಂದು ಕರ್ಣನು ಭೀಮನನ್ನು ಮೂದಲಿಸಿದನು.
ಅರ್ಥ:
ಷಡುರಸ: ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ಭೋಜನ: ಊಟ; ಮಧುರ: ಸಿಹಿ; ಫಲ: ಹಣ್ಣು; ಔಘ: ಗುಂಪು, ಸಮೂಹ; ಉಬ್ಬರ: ಅತಿಶಯ; ನಾನಾ: ಹಲವಾರು; ಭಕ್ಷ್ಯ: ಊಟ; ಗಿರಿ: ಬೆಟ್ಟ; ಘೃತ: ತುಪ್ಪ; ಕಡಲು: ಸಾಗರ; ಉರವಣೆ: ಆತುರ, ಅವಸರ, ಅಬ್ಬರ; ಸಂಗ್ರಾಮ: ಯುದ್ಧ; ಮುಖ: ಆನನ; ಬಿಲ್ಲ: ಚಾಪ; ಹಬ್ಬ: ಸಡಗರ; ತುಷ್ಟಿ: ತೃಪ್ತಿ, ಆನಂದ;
ಪದವಿಂಗಡಣೆ:
ಎಲ್ಲಿ +ಷಡುರಸಮಯದ +ಭೋಜನವ್
ಎಲ್ಲಿ +ಮಧುರ +ಫಲೌಘದ್+ಉಬ್ಬರವ್
ಎಲ್ಲಿ +ನಾನಾ+ಭಕ್ಷ್ಯ+ಗಿರಿಗಳು +ಘೃತದ +ಕಡಲುಗಳು
ಅಲ್ಲಿ+ ನಿನ್ನ್+ಉರವಣೆಗಳ್+ಒಪ್ಪುವದ್
ಅಲ್ಲದ್+ಈ+ ಸಂಗ್ರಾಮ +ಮುಖದಲಿ
ಬಿಲ್ಲ+ಹಬ್ಬದ+ ತುಷ್ಟಿ+ ನಿನಗೇಕೆಂದನಾ +ಕರ್ಣ
ಅಚ್ಚರಿ:
(೧) ರೂಪಕಗಳನ್ನು ಬಳಸುವ ಪರಿ – ನಾನಾಭಕ್ಷ್ಯಗಿರಿಗಳು ಘೃತದ ಕಡಲುಗಳು