ಪದ್ಯ ೩೨: ಯುದ್ಧದ ತೀವ್ರತೆ ಹೇಗಿತ್ತು?

ಒಡೆದುದಿಳೆಯೆನೆ ಸಮ ವಿಷಮದುರಿ
ಗಡಲು ಶಿವ ಶಿವಯೆನೆ ನಿಹಾರದ
ದಡಿಗೆ ದಾನವರೈದಿ ಕವಿದುದು ಕೆದರಿ ಸುರಬಲವ
ಫಡ ಫಡಿದಿರಾಗಲಿ ಸುರೇಂದ್ರನ
ತುಡುಕ ಹೇಳಾ ಕಾಲವಿದಲಾ
ತೊಡರೆನುತ ಹೊಯ್ದುರುಬಿತಸುರರು ಸುರರ ಸಂದಣಿಯ (ಅರಣ್ಯ ಪರ್ವ, ೧೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಿವ ಶಿವಾ ಭೂಮಿಯೊಡೆಯಿತು. ವಿಷಮಾಗ್ನಿಯ ಸಮುದ್ರ ಎನ್ನುವಂತೆ ಮಹಾಬಲಶಾಲಿಗಳಾದ ಸ್ಥೂಲಕಾಯರಾದ ರಾಕ್ಷಸರು ದೇವಸೈನ್ಯವನ್ನು ಭೇದಿಸಿ ಮತ್ತಿದರು. ಫಡ ಫಡಾ ದೇವೆಂದ್ರನು ಇದಿರಾಗಲಿ, ನಮ್ಮನ್ನು ಕೆಣಕಲಿ. ಯುದ್ಧಕ್ಕೆ ಇದೇ ಕಾಲ ಎನ್ನುತ್ತಾ ರಾಕ್ಷಸರು ದೇವತೆಗಳ ಮೇಲ್ವಾಯ್ದು ಹೋಯ್ದರು.

ಅರ್ಥ:
ಒಡೆದು: ಸೀಳು; ಇಳೆ: ಭೂಮಿ; ಸಮ: ಮಟ್ಟಸವಾದ, ಚಪ್ಪಟೆಯಾದ; ವಿಷಮ: ಸಮವಾಗಿಲ್ಲದಿರುವುದು; ಉರಿ: ಜ್ವಾಲೆ; ಕಡಲು: ಸಮುದ್ರ; ನಿಹಾರ: ಮಂಜಿನಂತೆ ದಟ್ಟವಾಗಿರುವುದು; ಕವಿದು: ಮುಸುಕು; ಕೆದರು: ಹರಡು; ಸುರಬಲ: ದೇವತೆಗಳ ಸೈನ್ಯ; ಫಡ: ಕೋಪಗಳನ್ನು ಸೂಚಿಸುವ ಒಂದು ಮಾತು; ಸುರೇಂದ್ರ: ಇಂದ್ರ; ತುಡುಕು: ಹೋರಾಡು; ಕಾಲ: ಸಮಯ; ತೊಡರು: ಸಂಬಂಧ, ಸಂಕೋಲೆ, ಸರಪಳಿ; ಹೊಯ್ದು: ಹೊಡೆದು; ಉರುಬು: ಅತಿಶಯವಾದ ವೇಗ; ಅಸುರ: ರಾಕ್ಷಸ; ಸುರ: ದೇವತೆ; ಸಂದಣಿ: ಗುಂಪು, ಸಮೂಹ;

ಪದವಿಂಗಡಣೆ:
ಒಡೆದುದ್+ಇಳೆಯೆನೆ +ಸಮ+ ವಿಷಮದ್+ಉರಿ
ಕಡಲು +ಶಿವ +ಶಿವಯೆನೆ +ನಿಹಾರದ
ದಡಿಗೆ+ ದಾನವರ್+ಐದಿ+ ಕವಿದುದು +ಕೆದರಿ +ಸುರಬಲವ
ಫಡ+ ಫಡಿದಿರಾಗಲಿ +ಸುರೇಂದ್ರನ
ತುಡುಕ +ಹೇಳಾ +ಕಾಲವಿದಲಾ
ತೊಡರೆನುತ +ಹೊಯ್ದ್+ಉರುಬಿತ್+ಅಸುರರು+ ಸುರರ+ ಸಂದಣಿಯ

ಅಚ್ಚರಿ:
(೧) ಯುದ್ಧದ ತೀವ್ರತೆಯನ್ನು ಹೇಳುವ ಪರಿ – ಒಡೆದುದಿಳೆಯೆನೆ ಸಮ ವಿಷಮದುರಿ
ಗಡಲು ಶಿವ ಶಿವಯೆನೆ

ನಿಮ್ಮ ಟಿಪ್ಪಣಿ ಬರೆಯಿರಿ