ತಿಳುಹಿ ರಾಯನ ಹೃದಯಸಂಚಿತ
ಕಲುಷವನು ಖಂಡಿಸಿ ಗತಾಕ್ಷನ
ಬಲಿದ ಚಿತ್ತವ್ಯಥೆಯನಾರಿಸಿ ನೃಪವಧೂಜನದ
ಅಳಲನಾರಿಸಿ ಗಜಪುರದ ನೃಪ
ನಿಳಯವನು ಹೊಗಿಸಿದನು ಯದುಕುಲ
ತಿಲಕ ಗದುಗಿನ ವೀರನಾರಾಯಣನು ಪಾಂಡವರ (ಗದಾ ಪರ್ವ, ೧೨ ಸಂಧಿ, ೨೫ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಯುಧಿಷ್ಠಿರನ ಮನಸ್ಸಿನಲ್ಲಿ ಕೂಡಿಟ್ಟಿದ್ದ ವ್ಯಥೆಯನ್ನು ಹೋಗಲಾಡಿಸಿ, ಧೃತರಾಷ್ಟ್ರನ ಮತ್ತು ರಾಜ ಪತ್ನಿಯರ ದುಃಖವನ್ನು ಶಾಂತಮಾಡಿ ಹಸ್ತಿನಾಪುರದ ಅರಮನೆಗೆ ಪಾಂಡವರನ್ನು ಹೊಗಿಸಿದನು.
ಅರ್ಥ:
ತಿಳುಹಿ: ತಿಳಿದು; ರಾಯ: ರಾಜ; ಹೃದಯ: ಎದೆ; ಸಂಚಿತ: ಸಂಗ್ರಹಿತವಾದುದು; ಕಲುಷ: ಕಳಂಕ; ಖಂಡಿಸು: ತುಂಡುಮಾಡು, ಕಡಿ, ಕತ್ತರಿಸು; ಗತಾಕ್ಷ: ಅಂಧ, ಕುರುಡ (ಧೃತರಾಷ್ಟ್ರ); ಬಲಿ: ಗಟ್ಟಿ; ಚಿತ್ತ: ಮನಸ್ಸು; ವ್ಯಥೆ: ನೋವು, ಯಾತನೆ; ನೃಪ: ರಾಜ; ವಧು: ಸ್ತ್ರೀ; ಜನ: ಗುಂಪು; ಅಳಲು: ದುಃಖ; ಆರಿಸು: ಕಡಿಮೆಮಾಡು; ನೃಪ: ರಾಜ; ನಿಳಯ: ಮನೆ; ಹೊಗಿಸು: ಸೇರು; ತಿಲಕ: ಶ್ರೇಷ್ಠ;
ಪದವಿಂಗಡಣೆ:
ತಿಳುಹಿ +ರಾಯನ +ಹೃದಯ+ಸಂಚಿತ
ಕಲುಷವನು +ಖಂಡಿಸಿ +ಗತಾಕ್ಷನ
ಬಲಿದ +ಚಿತ್ತವ್ಯಥೆಯನ್+ಆರಿಸಿ +ನೃಪ+ವಧೂಜನದ
ಅಳಲನ್+ಆರಿಸಿ +ಗಜಪುರದ +ನೃಪ
ನಿಳಯವನು +ಹೊಗಿಸಿದನು +ಯದುಕುಲ
ತಿಲಕ +ಗದುಗಿನ +ವೀರನಾರಾಯಣನು +ಪಾಂಡವರ
ಅಚ್ಚರಿ:
(೧) ಖಂಡಿಸಿ, ಆರಿಸಿ, ಹೊಗಿಸಿ – ಪದಗಳ ಪ್ರಯೋಗ
(೨) ಧೃತರಾಷ್ಟ್ರನನ್ನು ಗತಾಕ್ಷ ಎಂದು ಕರೆದಿರುವುದು