ಪದ್ಯ ೨೦: ಕೃಷ್ಣನು ಧರ್ಮಜನನ್ನು ಹೇಗೆ ಸಮಾಧಾನ ಪಡಿಸಿದನು?

ಹೋಗಲಿನ್ನಾ ಕ್ಷತ್ರಧರ್ಮ
ತ್ಯಾಗ ದುರ್ವ್ಯಸನ ಪ್ರಪಂಚವ
ನೀಗಿ ಕಳೆಯೆಂದಸುರರಿಪುವೈ ತಂದು ಮನ್ನಿಸಿದ
ಮೇಗಿವರ ಸಂಸ್ಕಾರಕಾರ್ಯ ನಿ
ಯೋಗವಿದೆ ಭಾರಂಕ ನಿನಗೆ ಸ
ರಾಗದಲಿ ಸಂತೈಸಿಯೆಂದನು ಭೂಪತಿಗೆ ಶೌರಿ (ಗದಾ ಪರ್ವ, ೧೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಧರ್ಮಜನನ್ನು ಉದ್ದೇಶಿಸಿ, ಆದದ್ದು ಆಯಿತು, ಅದು ಹೋಗಲಿ, ಕ್ಷತ್ರಿಯ ಧರ್ಮವನ್ನು ಪಾಲಿಸಲು ನೀನೀ ಕೆಲಸವನ್ನು ಮಾಡಬೇಕಾಯಿತು. ಅದನ್ನಿನ್ನು ಬಿಡು, ಇನ್ನು ಇವರೆಲ್ಲರ ಸಂಸ್ಕಾರ ಕಾರ್ಯದ ದೊಡ್ಡಹೊರೆಯಿದೆ. ಅದನ್ನು ಪೂರೈಸು. ಸಮಾಧಾನ ಮಾಡಿಕೋ ಎಂದು ಧರ್ಮಜನನ್ನು ಸಂತೈಸಿದನು.

ಅರ್ಥ:
ಹೋಗು: ತೆರಳು; ಕ್ಷತ್ರ: ಕ್ಷತ್ರಿಯರಿಗೆ ಸಂಬಂಧಿಸಿದುದು; ಧರ್ಮ: ಧಾರಣೆ ಮಾಡಿದುದು; ತ್ಯಾಗ: ದಾನ, ಕೊಡುಗೆ; ದುರ್ವ್ಯಸನ: ಕೆಟ್ಟ ಗೀಳು/ಚಟ; ಪ್ರಪಂಚ: ಜಗತ್ತು; ನೀಗು: ಪರಿಹರಿಸಿಕೊಳ್ಳು ; ಕಳೆ: ತೊರೆ; ಅಸುರರಿಪು: ಕೃಷ್ಣ; ಮನ್ನಿಸು: ಶಮನಗೊಳಿಸು, ಸಮಾಧಾನ ಮಾಡು; ಮೇಗೆ: ಮೇಲಕ್ಕೆ, ಆಮೇಲೆ; ಸಂಸ್ಕಾರ: ಧಾರ್ಮಿಕ ವಿಧಿ, ಅಪರಕರ್ಮ; ಕಾರ್ಯ: ಕೆಲಸ; ನಿಯೋಗ: ಗುಂಪು; ಭಾರಂಕ: ಮಹಾಯುದ್ಧ; ಸರಾಗ: ಪ್ರೀತಿ; ಸಂತೈಸು: ಸಮಾಧಾನ ಪಡಿಸು; ಭೂಪತಿ: ರಾಜ; ಶೌರಿ: ಕೃಷ್ಣ;

ಪದವಿಂಗಡಣೆ:
ಹೋಗಲಿನ್ನ್+ಆ+ ಕ್ಷತ್ರಧರ್ಮ
ತ್ಯಾಗ+ ದುರ್ವ್ಯಸನ +ಪ್ರಪಂಚವ
ನೀಗಿ+ ಕಳೆ+ಎಂದ್+ಅಸುರರಿಪುವ್+ಐತಂದು +ಮನ್ನಿಸಿದ
ಮೇಗ್+ಇವರ +ಸಂಸ್ಕಾರ+ಕಾರ್ಯ +ನಿ
ಯೋಗವಿದೆ +ಭಾರಂಕ +ನಿನಗೆ +ಸ
ರಾಗದಲಿ +ಸಂತೈಸಿ+ಎಂದನು +ಭೂಪತಿಗೆ +ಶೌರಿ

ಅಚ್ಚರಿ:
(೧) ಕರ್ತವ್ಯದ ಬಗ್ಗೆ ಹೇಳುವ ಪರಿ – ಮೇಗಿವರ ಸಂಸ್ಕಾರಕಾರ್ಯ ನಿಯೋಗವಿದೆ ಭಾರಂಕ ನಿನಗೆ
(೨) ತ್ಯಾಗ, ನಿಯೋಗ, ಸರಾಗ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ