ಮುಂದೆ ರಥವೆಸಗಿದನು ಪಾರ್ಥನು
ಬಂದನುತ್ತರ ಸಹಿತ ವಹಿಲದೊ
ಳಂದು ಬಡಗಣದೆಸಗೆ ಮೇಲಣ ಸುರರು ನೋಡುತಿರೆ
ಇಂದಿನಾಹವದೊಳಗೆ ನರ ರಿಪು
ವೃಂದವನು ಜಯಿಸುವನೆನುತಲಾ
ನಂದದಿಂದವೆ ಹರುಷಿಯಾದನು ವೀರನಾರಯಣ (ವಿರಾಟ ಪರ್ವ, ೬ ಸಂಧಿ, ೫೦ ಪದ್ಯ)
ತಾತ್ಪರ್ಯ:
ಅರ್ಜುನನು ರಥವನ್ನು ನಡೆಸುತ್ತಾ ಉತ್ತರದಿಕ್ಕಿಗೆ ಬಂದನು. ದೇವತೆಗಳು ಆಕಾಶದಲ್ಲಿ ಇದನ್ನು ನೋಡುತ್ತಿದ್ದರು. ಇಂದಿನ ಯುದ್ಧದಲ್ಲಿ ಅರ್ಜುನನು ಶತ್ರು ಸಮೂಹವನ್ನು ಗೆಲ್ಲುವನೆಂದು ತಿಳಿದು ವೀರನಾರಾಯಣನು ಹರ್ಷಿಸಿದನು.
ಅರ್ಥ:
ಮುಂದೆ: ಆಮೇಲೆ; ರಥ: ಬಂಡಿ; ಉತ್ತರ:ಉತ್ತರದಿಕ್ಕು; ಸಹಿತ: ಜೊತೆ; ವಹಿಲ: ವೇಗ, ಪ್ರವಾಹ; ಬಡಗ: ಉತ್ತರ; ಸುರ: ದೇವತೆ; ನೋಡು: ವೀಕ್ಷಿಸು; ಆಹವ: ಯುದ್ಧ; ನರ: ಮನುಷ್ಯ (ಇಲ್ಲಿ ಅರ್ಜುನ); ರಿಪು: ವೈರಿ; ವೃಂದ: ಗುಂಪು; ಜಯಿಸು: ಗೆಲುವು; ಆನಂದ: ಸಂತೋಷ; ಹರುಷ: ಸಂತೋಷ; ಎಸಗು: ಮಾಡು; ದೆಸೆ: ದಿಕ್ಕು;
ಪದವಿಂಗಡಣೆ:
ಮುಂದೆ +ರಥವ್+ಎಸಗಿದನು +ಪಾರ್ಥನು
ಬಂದನ್+ಉತ್ತರ +ಸಹಿತ+ ವಹಿಲದೊಳ್
ಅಂದು +ಬಡಗಣ+ದೆಸಗೆ +ಮೇಲಣ +ಸುರರು +ನೋಡುತಿರೆ
ಇಂದಿನ+ಆಹವದೊಳಗೆ+ ನರ+ ರಿಪು
ವೃಂದವನು +ಜಯಿಸುವನ್+ಎನುತಲ್
ಆನಂದದಿಂದವೆ+ ಹರುಷಿಯಾದನು+ ವೀರನಾರಯಣ
ಅಚ್ಚರಿ:
(೧) ಆನಂದ, ಹರುಷ – ಸಮನಾರ್ಥಕ ಪದ
(೨) ಅರ್ಜುನನ ಸಾರಥ್ಯವನ್ನು ಕಂಡು ವೀರನಾರಯಣ (ಕೃಷ್ಣ) ಸಂತೋಷನಾದನು ಎಂದು ವರ್ಣಿಸಿರುವುದು
(೩) ಉತ್ತರ, ಬಡಗ – ೨, ೩ ಸಾಲಿನಲ್ಲಿ ಬರುವ ಪದ, ಉತ್ತರ ಕುಮಾರ ಮತ್ತು ಉತ್ತರ ದಿಕ್ಕು ಎಂದು ಅರ್ಥೈಸಬೇಕು
(೩) ಸಂತೋಷದಿಂದ ಸಂತಸಪಡೆಯುವುದು – ಪದ ಪ್ರಯೋಗ – ಆನಂದದಿಂದವೆ ಹರುಷಿಯಾದನು.