ಪದ್ಯ ೪೭: ಉತ್ತರೆಯು ಅರ್ಜುನನಿಗೆ ಏನನ್ನು ತೆಗೆದುಕೊಂಡು ಬಾ ಎಂದು ಹೇಳಿದಳು?

ಕವಚವನು ತೊಡಲರಿಯದವನಾ
ಹವಕೆ ಸಾರಥಿತನವ ಮಾಡುವ
ಹವಣು ತಾನೆಂತೆನುತಲಿದ್ದರು ನಿಖಿಳ ನಾರಿಯರು
ಬವರವನು ನಮ್ಮಣ್ಣಗೆಲಿದಪ
ನವರ ಮಣಿ ಪರಿಧಾನವಾಭರ
ಣವನು ಸಾರಥಿ ಕೊಂಡುಬಾಯೆಂದಳು ಸರೋಜಮುಖಿ (ವಿರಾಟ ಪರ್ವ, ೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಸಾರಥಿಯ ಕವಚವನ್ನೇ ಹಾಕಿಕೊಳ್ಳಲು ಬಾರದವನು ಇನ್ನು ಯುದ್ಧದಲ್ಲಿ ಸಾರಥಿಯಾಗಿ ರಥವನ್ನು ಓಡಿಸಬಲ್ಲನೆ ಎಂದು ಸಭೆಯಲ್ಲಿದ್ದ ನಾರಿಯರು ಮಾತಾಡಿಕೊಂಡರು. ಉತ್ತರೆಯು, ನಮ್ಮಣ್ಣನು ಯುದ್ಧದಲ್ಲಿ ಗೆಲ್ಲುತ್ತಾನೆ, ಶತ್ರುಗಳ ಒಳ್ಳೆಯ ವಸ್ತ್ರಗಳನ್ನು ಆಭರಣಗಳನ್ನು ತೆಗೆದುಕೊಂಡು ಬಾ ಎಂದು ಅರ್ಜುನನಿಗೆ ಹೇಳಿದಳು.

ಅರ್ಥ:
ಕವಚ: ಹೊದಿಕೆ; ತೊಡಲು: ಹಾಕಿಕೊಳ್ಳಲು, ಧರಿಸಲು; ಅರಿ: ತಿಳಿ; ಆಹವ: ಯುದ್ಧ; ಸಾರಥಿ: ರಥವನ್ನು ಓಡಿಸುವ; ಹವಣು: ಪ್ರಮಾಣ; ಶಕ್ತಿ; ನಿಖಿಳ: ಎಲ್ಲಾ; ನಾರಿ: ಸ್ತ್ರೀ; ಬವರ:ಯುದ್ಧ; ಅಣ್ಣ: ಸಹೋದರ; ಗೆಲಿ: ಜಯ; ಮಣಿ:ಬಾಗು, ಬಗ್ಗು; ಪರಿಧಾನ:ಕಾಣಿಕೆ; ಆಭರಣ: ಒಡವೆ; ಕೊಂಡುಬಾ: ತೆಗೆದುಕೊಂಡು ಬಾ; ಸರೋಜಮುಖಿ: ಸುಂದರಿ, ಯುವತಿ; ಸರೋಜ: ಕಮಲ;

ಪದವಿಂಗಡಣೆ:
ಕವಚವನು +ತೊಡಲ್+ಅರಿಯದವನ್+
ಆಹವಕೆ +ಸಾರಥಿತನವ+ ಮಾಡುವ
ಹವಣು +ತಾನೆಂತ್+ಎನುತಲಿದ್ದರು +ನಿಖಿಳ +ನಾರಿಯರು
ಬವರವನು +ನಮ್ಮಣ್ಣ+ಗೆಲಿದಪ
ನವರ+ ಮಣಿ +ಪರಿಧಾನವ್+ಆಭರ
ಣವನು +ಸಾರಥಿ +ಕೊಂಡುಬಾಯೆಂದಳು+ ಸರೋಜಮುಖಿ

ಅಚ್ಚರಿ:
(೧) ಆಹವ, ಬವರ – ಸಮನಾರ್ಥಕ ಪದ
(೨) ಸಾರಥಿ – ೨, ೬ ಸಾಲಿನ ೨ನೇ ಪದ

ನಿಮ್ಮ ಟಿಪ್ಪಣಿ ಬರೆಯಿರಿ