ಕುಲದವನ ಹೃದಯಾಂಧಕಾರವ
ಕಳಚಲೆಂದು ಹಿಮಾಂಶು ಹರಹಿದ
ನೆಳೆಯಬೆಳುದಿಂಗಳನೆನಲು ಸುರರಿಪುಕುಲಾಂತಕನು
ತೊಳಪ ದಶನಮಯೂಖ ತತಿ ಹೊಳೆ
ಹೊಳೆಯೆ ನುಡಿದನು ತತ್ಸಭಾ ಮಂ
ಡಲ ಮಹಾಂಬುಧಿ ನುಡಿದೆರೆಯ ತನಿಗಡಣವಡಗಿರಲು (ಉದ್ಯೋಗ ಪರ್ವ, ೮ ಸಂಧಿ, ೭೨ ಪದ್ಯ)
ತಾತ್ಪರ್ಯ:
ದುರ್ಯೋಧನನ ಹೃದಯದಲ್ಲಿದ್ದ ಅಂಧಕಾರವನ್ನು ಹೊರದೂಡಲು, ಹೇಗೆ ಚಂದ್ರನು ತನ್ನ ಬೆಳದಿಂಗಳ ಕಾಂತಿಯಿಂದ ರಾತ್ರಿಯ ಅಂಧಕಾರವನ್ನು ದೂಡುವ ಹಾಗೆ, ಕೃಷ್ಣನು ಅಂಧಕಾರವನ್ನು ಹೋಗಲಾಡಿಸಲು ತನ್ನ ದಂತದ ಕಾಂತಿಯಿಂದ ಹೊರಬಂದ ಮಾತುಗಳನ್ನಾಡಿದನು ಆ ಸಭೆಯಲ್ಲಿ ಕೂಡಿದ್ದ ಎಲ್ಲಾ ಮಹಾರಾರಜು ಅವನ ನುಡಿಯನ್ನು ಕೇಳುತ್ತ ಆ ಪ್ರತ್ಯೇಕ ಗುಂಪುಗಳು ಅಡಗಿದವು.
ಅರ್ಥ:
ಕುಲ: ವಂಶ; ಹೃದಯ: ವಕ್ಷ; ಅಂಧಕಾರ: ಕತ್ತಲು; ಕಳಚು: ಹೊರತೆಗೆ; ಹಿಮಾಂಶು:ಚಂದ್ರ; ಹರಹು: ಹಬ್ಬುವಿಕೆ, ಪ್ರಸರ; ಎಳೆಯ: ಚಿಕ್ಕದಾದ; ಬೆಳದಿಂಗಳು: ಚಂದ್ರನ ಬೆಳಕು; ಸುರ: ದೇವತೆ; ರಿಪು: ವೈರಿ; ಕುಲಾಂತಕ: ಕುಲವನ್ನು ನಾಶಮಾಡಿದವ; ಸುರರಿಪುಕುಲಾಂತಕ: ಕೃಷ್ಣ; ತೊಳಸು: ಮನಸ್ಸಿನ ಅಲ್ಲೋಲ ಕಲ್ಲೋಲ; ಮಯೂಖ: ಕಾಂತಿ, ಹೊಳಪು; ದಶನ: ಹಲ್ಲು, ದಂತ; ತತಿ: ಸಮೂಹ, ಗುಂಪು; ಹೊಳೆ: ಕಾಂತಿ, ಪ್ರಕಾಶಿಸು; ನುಡಿ: ಮಾತಾಡು; ಸಭಾ: ದರ್ಬಾರು; ಮಂಡಲ: ವರ್ತುಲಾಕಾರ; ಮಹಾ: ದೊಡ್ಡ; ಅಂಬುಧಿ: ಸಾಗರ; ನುಡಿ: ಮಾತು; ತನಿಗಡಣ: ಪ್ರತ್ಯೇಕವಾದ ಗುಂಪು; ಅಡಗು: ಮುಚ್ಚು; ಎರೆ: ಬೇಡು, ಪ್ರಾರ್ಥಿಸು;
ಪದವಿಂಗಡಣೆ:
ಕುಲದವನ+ ಹೃದಯ+ಅಂಧಕಾರವ
ಕಳಚಲೆಂದು+ ಹಿಮಾಂಶು +ಹರಹಿದನ್
ಎಳೆಯ+ಬೆಳುದಿಂಗಳನ್+ಎನಲು +ಸುರರಿಪುಕುಲಾಂತಕನು
ತೊಳಪ +ದಶನ+ಮಯೂಖ +ತತಿ +ಹೊಳೆ
ಹೊಳೆಯೆ +ನುಡಿದನು +ತತ್+ಸಭಾ +ಮಂ
ಡಲ +ಮಹಾಂಬುಧಿ +ನುಡಿದೆರೆಯ ತನಿಗಡಣವಡಗಿರಲು
ಅಚ್ಚರಿ:
(೧) ಉಪಮಾನದ ಪ್ರಯೋಗ – ಹಿಮಾಂಶು ಹರಹಿದ ನೆಳೆಯಬೆಳುದಿಂಗಳ
(೨) ಕೃಷ್ಣನು ಮಾತು ಹೇಗೆ ಹೊಳೆಯಿತು – ಸುರರಿಪುಕುಲಾಂತಕನು ತೊಳಪ ದಶನಮಯೂಖ ತತಿ ಹೊಳೆ ಹೊಳೆಯೆ ನುಡಿದನು