ದ್ರೋಣಕಲಶದೊಳಾದ ದೆಸೆಯಿಂ
ದ್ರೋಣನಾದನು ಬಳಿಕ ಮುನಿಯಾ
ದ್ರೋಣಗುಪನಯನಾದಿ ವಿಪ್ರಕ್ರಿಯೆಗಳನು ರಚಿಸಿ
ದ್ರೋಣನೊಡನೋದಿಸಿ ನೃಪಾಲ
ಶ್ರೇಣಿಯನು ಶಸ್ತ್ರಾಸ್ತ್ರ ಕಳೆಯಲಿ
ಜಾಣರನು ಮಾಡಿದನು ಭಾರದ್ವಾಜ ಮುನಿಯಂದು (ಆದಿ ಪರ್ವ, ೬ ಸಂಧಿ, ೨೨ ಪದ್ಯ)
ತಾತ್ಪರ್ಯ:
ನೀರನ್ನು ತುಂಬುವ ಮರದ ಪಾತ್ರೆ (ದ್ರೋಣ)ಯ ಕಲಶದಲ್ಲಿ ಹುಟ್ತಿದುದರಿಂದ ಅವನಿಗೆ ದ್ರೋಣನೆಮ್ಬ ಹೆಸರಾಯಿತು. ದ್ರೋಣನಿಗೆ ಉಪನಯನಾದಿ ಸಂಸ್ಕಾರಗಲನ್ನು ಮಾಡಿಸಿದನು. ಅನೇಕ ರಾಜರಿಗೆ ದ್ರೋಣನೊಡನೆ ಶಸ್ತ್ರಾಸ್ತ್ರವಿದ್ಯಾಭ್ಯಾಸವನ್ನು ಭಾರದ್ವಾಜನು ಮಾಡಿಸಿದನು.
ಅರ್ಥ:
ಕಲಶ: ಕುಂಭ; ದೆಸೆ: ಕಾರಣ; ಬಳಿಕ: ನಂತರ; ಮುನಿ: ಋಷಿ; ಉಪನಯನ: ಮುಂಜಿ; ವಿಪ್ರ: ಬ್ರಾಹ್ಮಣ; ಕ್ರಿಯೆ: ಕಾರ್ಯ; ರಚಿಸು: ನಿರ್ಮಿಸು; ಓದು: ವಿದ್ಯಾಭ್ಯಾಸ; ನೃಪಾಲ: ರಾಜ; ಶ್ರೇಣಿ: ಪಂಕ್ತಿ, ಸಾಲು; ಶಸ್ತ್ರಾಸ್ತ್ರ: ಆಯುಧ; ಕಳೆ: ಕುಶಲವಿದ್ಯೆ; ಜಾಣ: ಬುದ್ಧಿವಂತ;
ಪದವಿಂಗಡಣೆ:
ದ್ರೋಣ+ಕಲಶದೊಳ್+ಆದ +ದೆಸೆಯಿಂ
ದ್ರೋಣನಾದನು +ಬಳಿಕ+ ಮುನಿಯಾ
ದ್ರೋಣಗ್+ಉಪನಯನಾದಿ +ವಿಪ್ರ+ಕ್ರಿಯೆಗಳನು+ ರಚಿಸಿ
ದ್ರೋಣನೊಡನ್+ಓದಿಸಿ +ನೃಪಾಲ
ಶ್ರೇಣಿಯನು+ ಶಸ್ತ್ರಾಸ್ತ್ರ +ಕಳೆಯಲಿ
ಜಾಣರನು +ಮಾಡಿದನು +ಭಾರದ್ವಾಜ+ ಮುನಿಯಂದು
ಅಚ್ಚರಿ:
(೧) ದ್ರೋಣ ಪದದ ಬಳಕೆ – ೧-೪ ಸಾಲಿನ ಮೊದಲ ಪದ
(೨) ದ್ರೋಣ ಪದದ ಬಳಕೆ – ದ್ರೋಣಕಲಶದೊಳಾದ ದೆಸೆಯಿಂದ್ರೋಣನಾದನು