ಅರಸ ಕರ್ಣಚ್ಛೇದವೇ ಜಯ
ಸಿರಿಯ ನಾಸಾಚ್ಛೇದವಿನ್ನರ
ವರಿಸದಿರು ಹೊಯ್ದಾಡಿ ಹೊಗಳಿಸು ಬಾಹುವಿಕ್ರಮವ
ಗುರುನದೀಸುತರಳಿದ ಬಳಿಕೀ
ಧರೆಗೆ ನಿನಗಸ್ವಾಮ್ಯ ಕರ್ಣನ
ಮರಣದಲಿ ನೀನರ್ಧದೇಹನು ಭೂಪ ಕೇಳೆಂದ (ಶಲ್ಯ ಪರ್ವ, ೧ ಸಂಧಿ, ೧೬ ಪದ್ಯ)
ತಾತ್ಪರ್ಯ:
ಕೃಪನು, ರಾಜಾ, ಕರ್ಣನ ಮರಣದಿಂದ ನಿನ್ನ ವಿಜಯಲಕ್ಷ್ಮಿಯ ಮೂಗು ಕೊಯ್ದು ಹೋಯಿತು. ಇನ್ನು ಚಿಂತಿಸುವುದೇಕೆ. ನಿಮ್ಮ ಭುಜಬಲ ಪರಾಕ್ರಮವನ್ನು ಡಂಗುರ ಹೊಯಿಸು. ಭೀಷ್ಮ ದ್ರೋನರು ಅಳಿದಾಗ ನಿನ್ನ ರಾಜ್ಯದ ಮೇಲಿನ ಸ್ವಾಮಿತ್ವ ಹೋಗಿ ಬಿಟ್ಟಿತು, ಇನ್ನು ಕರ್ಣನು ಹೋದಮೇಲೆ ನೀನು ಕೇವಲ ಅರ್ಧಶರೀರವುಳ್ಳವನಾಗಿ ತೋರುತ್ತೀಯ ಎಂದು ಕೃಪಾಚಾರ್ಯರು ಹೇಳಿದರು.
ಅರ್ಥ:
ಅರಸ: ರಾಜ; ಚ್ಛೇದ: ಮರಣ; ಜಯ: ಗೆಲುವು; ಸಿರಿ: ಐಶ್ವರ್ಯ; ನಾಸಾ: ಮೂಗು; ಚ್ಛೇದ: ಮುರಿ; ವರಿಸು: ಕೈಹಿಡಿ; ಹೊಯ್ದಾಡು: ಹೋರಾಡು; ಹೊಗಳಿಸು: ಪ್ರಶಂಶಿಸು; ಬಾಹುವಿಕ್ರಮ: ಭುಜಬಲ; ಸುತ: ಮಗ; ಅಳಿ: ಸಾವು; ಬಳಿಕ: ನಂತರ; ಧರೆ: ಭೂಮಿ; ಸ್ವಾಮ್ಯ: ಒಡೆತನ; ಮರಣ: ಸಾವು; ದೇಹ: ಶರೀರ; ಭೂಪ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಅರಸ +ಕರ್ಣಚ್ಛೇದವೇ +ಜಯ
ಸಿರಿಯ +ನಾಸಾಚ್ಛೇದವಿನ್ನರ
ವರಿಸದಿರು +ಹೊಯ್ದಾಡಿ +ಹೊಗಳಿಸು +ಬಾಹುವಿಕ್ರಮವ
ಗುರು+ನದೀಸುತರ್+ಅಳಿದ+ ಬಳಿಕೀ
ಧರೆಗೆ +ನಿನಗಸ್ವಾಮ್ಯ +ಕರ್ಣನ
ಮರಣದಲಿ+ ನೀನ್+ಅರ್ಧದೇಹನು +ಭೂಪ +ಕೇಳೆಂದ
ಅಚ್ಚರಿ:
(೧) ಕರ್ಣಚ್ಛೇದ, ಕರ್ಣನ ಮರಣ – ಪದಗಳ ಬಳಕೆ
(೨) ಅರಸ, ಭೂಪ – ಸಮಾನಾರ್ಥಕ ಪದ