ಉರಲ ಹತಿಸಿ ಸೆಳೆಯೆ ಗೋಣಲಿ
ಗುರುಗುರಿಸಲಸು ಜಾರಿದುದು ಬೊ
ಬ್ಬಿರಿದು ಹೊಕ್ಕನು ಕದವನೊದೆದು ಶಿಖಂಡಿಯರಮನೆಯ
ತರಿದನಾತನನುತ್ತ ಮೌಂಜನ
ನರಸಿ ಹೊಯ್ದನು ಹೊಕ್ಕು ಬಾಗಿಲ
ಮುರಿದು ಮೈಯರಿಹಿಸಿ ಯುಧಾಮನ್ಯುವ ವಿದಾರಿಸಿದ (ಗದಾ ಪರ್ವ, ೯ ಸಂಧಿ, ೩೨ ಪದ್ಯ)
ತಾತ್ಪರ್ಯ:
ಉರುಲು ಹಾಕಿ ಎಳೆದೊಡನೆ ಕುತ್ತಿಗೆಯಲ್ಲಿ ಗುರುಗುರು ಸದ್ದು ಬಂದು ಧೃಷ್ಟದ್ಯುಮ್ನನ ಪ್ರಾಣವು ಹಾರಿಹೋಯಿತು. ಶಿಖಂಡಿಯ ಮನೆಯ ಕದವನ್ನು ಒದೆದು ಒಳಹೊಕ್ಕು ಅವನನ್ನು ಕೊಂದನು. ಉತ್ತಮೌಂಜಸನನ್ನು ಹುಡುಕಿ ಕೊಂದು, ಬಾಗಿಲು ಮುರಿದು ಎಚ್ಚರಿಸಿ ಯುಧಾಮನ್ಯುವನ್ನು ಸಾಯಿಸಿದನು.
ಅರ್ಥ:
ಉರಲು: ಪಾಶ, ಜೀರುಗುಣಿಕೆಯ ಹಗ್ಗ; ಹತ್ತಿಸು: ಮೇಲೇರು; ಸೆಳೆ:ಎಳೆತ, ಸೆಳೆತ; ಗೋಣು: ಕಂಠ, ಕುತ್ತಿಗೆ; ಗುರುಗುರಿಸು: ಶಬ್ದವನ್ನು ಸೂಚಿಸುವ ಪರಿ; ಅಸು: ಪ್ರಾಣ; ಜಾರು: ಬೀಳು; ಬೊಬ್ಬಿರಿ: ಗರ್ಜಿಸು; ಹೊಕ್ಕು: ಸೇರು; ಕದ: ಬಾಗಿಲು; ಒದೆ: ನೂಕು; ಶಿಖಂಡಿ: ನಪುಂಸಕ; ಅರಮನೆ: ರಾಜರ ಆಲಯ; ತರಿ: ಕಡಿ, ಕತ್ತರಿಸು; ಅರಸು: ಹುಡುಕು; ಹೊಯ್ದು: ಹೊಡೆ; ಹೊಕ್ಕು: ಸೇರು; ಬಾಗಿಲು: ಕದ; ಮುರಿ: ಸೀಳು; ಮೈಯರಿ: ಎಚ್ಚರಿಸು; ವಿದಾರಿಸು: ನಾಶಮಾಡು;
ಪದವಿಂಗಡಣೆ:
ಉರಲ +ಹತಿಸಿ +ಸೆಳೆಯೆ +ಗೋಣಲಿ
ಗುರುಗುರಿಸಲ್+ಅಸು +ಜಾರಿದುದು +ಬೊ
ಬ್ಬಿರಿದು +ಹೊಕ್ಕನು+ ಕದವನ್+ಒದೆದು +ಶಿಖಂಡಿ+ಅರಮನೆಯ
ತರಿದನ್+ಆತನನ್+ ಉತ್ತಮೌಂಜನನ್
ಅರಸಿ +ಹೊಯ್ದನು +ಹೊಕ್ಕು +ಬಾಗಿಲ
ಮುರಿದು +ಮೈ+ಅರಿಹಿಸಿ +ಯುಧಾಮನ್ಯುವ +ವಿದಾರಿಸಿದ
ಅಚ್ಚರಿ:
(೧) ಸಾಯಿಸಿದನು ಎಂದು ಹೇಳುವ ಪರಿ – ಅಸು ಜಾರಿದುದು, ತರಿ, ಹೊಯ್ದನು, ವಿದಾರಿಸು