ಪದ್ಯ ೩೧: ಯಾರಿದ್ದಿದ್ದರೆ ಯುಧಿಷ್ಠಿರನಿಗೆ ಈ ವಿಪತ್ತು ಬರದಂತಾಗುತ್ತಿತ್ತು?

ಏನನೆಂಬೆನು ನಮ್ಮ ಪುಣ್ಯದ
ಹಾನಿ ತಲೆದೋರಿದರೆ ಭೀಮನ
ಸೂನುವಿರಲಭಿಮನ್ಯು ವಿರಲೆವಗೀ ವಿಪತ್ತಹುದೆ
ಆ ನದೀಜ ದ್ರೋಣರಲಿ ತಾ
ಹಾನಿಯನು ಮಿಗೆ ಕಂಡೆನೇ ನೆರೆ
ಹೀನನು ಕಂಡಾದಡೆಯು ಬದುಕುವುದು ಲೇಸೆಂದ (ಕರ್ಣ ಪರ್ವ, ೧೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನ ನೋವನ್ನು ತೋಡಿಕೊಳ್ಳುತ್ತಾ, ನಮ್ಮ ಪುಣ್ಯಕ್ಕೆ ಹಾನಿಯಾದರೆ ಏನೆಂದು ಹೇಳಬೇಕು! ಘಟೋತ್ಕಚ, ಅಭಿಮನ್ಯುಗಳಿದ್ದರೆ ನಮಗೆ ಈ ವಿಪತ್ತು ಬರುತ್ತಿತ್ತೆ? ಭೀಷ್ಮ ದ್ರೋಣರಿದ್ದಾಗಲೂ ನನಗಿಂತಹ ಕಷ್ಟ ಬರಲಿಲ್ಲ, ಇಂತಹ ಹೀನನನ್ನು ಕಂಡಾದರೂ ಬದುಕಬೇಕಾದುದು ಒಳೆತೆ ಎಂದು ತನ್ನ ನೋವನ್ನು ಅರ್ಜುನನ ಮೇಲಿನ ಕೋಪವನ್ನು ಹೊರಹಾಕಿದ.

ಅರ್ಥ:
ಎಂಬೆನು: ಹೇಳಲಿ; ಪುಣ್ಯ: ಸದಾಚಾರ; ಹಾನಿ: ನಾಶ; ತಲೆದೋರು: ಕಾಣಿಸು, ಬಂದು; ಸೂನು: ಮಗ; ವಿಪತ್ತು: ಆಪತ್ತು, ತೊಂದರೆ; ನದೀಜ: ಭೀಷ್ಮ; ಮಿಗೆ: ಅಧಿಕವಾಗಿ, ಮತ್ತು; ಕಂಡು: ನೋಡು; ನೆರೆ: ಸಮೀಪ, ಹತ್ತಿರ; ಹೀನ: ಕೆಟ್ಟ, ದುಷ್ಟ, ತೊರೆದ; ಕಂಡು: ನೋಡು; ಬದುಕು: ಜೀವಿಸು; ಲೇಸು: ಒಳಿತು;

ಪದವಿಂಗಡಣೆ:
ಏನನೆಂಬೆನು+ ನಮ್ಮ +ಪುಣ್ಯದ
ಹಾನಿ +ತಲೆದೋರಿದರೆ+ ಭೀಮನ
ಸೂನುವಿರಲ್+ಅಭಿಮನ್ಯು +ವಿರಲ್+ಎವಗೀ+ ವಿಪತ್ತಹುದೆ
ಆ +ನದೀಜ +ದ್ರೋಣರಲಿ +ತಾ
ಹಾನಿಯನು +ಮಿಗೆ +ಕಂಡೆನೇ+ ನೆರೆ
ಹೀನನು +ಕಂಡಾದಡೆಯು +ಬದುಕುವುದು +ಲೇಸೆಂದ

ಅಚ್ಚರಿ:
(೧) ಧರ್ಮಜನು ತನ್ನ ಕೋಪವನ್ನು ಅರ್ಜುನನ ಮೇಲೆ ಮಾತಿನ ಮೂಲಕ ತೋರಿಸುತ್ತಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ