ಅಣೆದನಶ್ವತ್ಥಾಮನನು ತ
ಕ್ಷಣದೊಳರಸನ ತಾಗಿ ದ್ರೋಣನ
ಕೆಣಕಿ ದುಶ್ಯಾಸನನ ಮಸೆಗಾಣಿಸಿ ಕೃಪಾದಿಗಳ
ರಣದೊಳೋಡಿಸಿ ಮುರಿದು ಕರ್ಣನ
ಸೆಣಸಿ ನಿಂದನು ಮತ್ತೆ ಸಮರಾಂ
ಗಣದ ಚೌಪಟಮಲ್ಲನಿತ್ತನು ಪಡೆಗೆ ತಲ್ಲಣವ (ದ್ರೋಣ ಪರ್ವ, ೧೬ ಸಂಧಿ, ೪೮ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನನ್ನು ತಿವಿದು, ಅದೇ ಕ್ಷಣದಲ್ಲಿ ಕೌರವನನ್ನು ಹೊಡೆದು, ದ್ರೋಣನನ್ನು ಕೆಣಕಿ, ದುಶ್ಯಾಸನನಿಗೆ ಗಾಯಮಾಡಿ, ಕೃಪಾದಿಗಳನ್ನು ಓಡಿಸಿ ಹಿಂದಿರುಗಿ ಬಂದು ಕರ್ಣನೊಡನೆ ಸಮರಕ್ಕೆ ನಿಂತು ರಣರಂಗವು ತಲ್ಲಣಿಸುವಂತೆ ಮಾಡಿದನು.
ಅರ್ಥ:
ಅಣೆ: ತಿವಿ, ಹೊಡೆ; ತಕ್ಷಣ: ಕೂಡಲೆ; ಅರಸ: ರಾಜ; ತಾಗು: ಹೊಡೆತ, ಪೆಟ್ಟು; ಕೆಣಕು: ರೇಗಿಸು; ಮಸೆ: ಹರಿತವಾದುದು; ರಣ: ಯುದ್ಧ; ಓಡು: ಧಾವಿಸು; ಮುರಿ: ಸೀಳು; ಸೆಣಸು: ಯುದ್ಧಮಾಡು; ನಿಂದು: ನಿಲ್ಲು; ಸಮರಾಂಗಣ: ಯುದ್ಧಭೂಮಿ; ಚೌಪಟಮಲ್ಲ: ಪರಾಕ್ರಮಿ; ಪಡೆ: ಸೈನ್ಯ; ತಲ್ಲಣ: ಅಂಜಿಕೆ, ಭಯ;
ಪದವಿಂಗಡಣೆ:
ಅಣೆದನ್+ಅಶ್ವತ್ಥಾಮನನು +ತ
ಕ್ಷಣದೊಳ್+ಅರಸನ +ತಾಗಿ +ದ್ರೋಣನ
ಕೆಣಕಿ +ದುಶ್ಯಾಸನನ +ಮಸೆಗಾಣಿಸಿ +ಕೃಪಾದಿಗಳ
ರಣದೊಳ್+ಓಡಿಸಿ +ಮುರಿದು +ಕರ್ಣನ
ಸೆಣಸಿ +ನಿಂದನು +ಮತ್ತೆ +ಸಮರಾಂ
ಗಣದ +ಚೌಪಟಮಲ್ಲನ್+ಇತ್ತನು +ಪಡೆಗೆ +ತಲ್ಲಣವ
ಅಚ್ಚರಿ:
(೧) ಘಟೋತ್ಕಚನ ಪರಾಕ್ರಮವನ್ನು ವರ್ಣಿಸುವ ಪರಿ – ಸಮರಾಂಗಣದ ಚೌಪಟಮಲ್ಲ