ಕಥೆಗೆ ನಿನ್ನೊಡ ಹುಟ್ಟಿದನ ಸಾ
ರಥಿತನವ ಕೈಕೊಂಡನಿನ್ನೀ
ಪೃಧಿವಿ ನಿನ್ನಯ ರಾಣಿವಾಸವು ಚಿಂತೆ ಬೇಡಿದಕೆ
ವ್ಯಥಿತವಾಯಿತು ವೈರಿ ಬಲ ಸಂ
ಪ್ರಥಿತ ಸಾಹಸನಾದೆ ನೀನೆನೆ
ಶಿಥಿಲ ಸಂಶಯನಂಗಚಿತ್ತವನಿತ್ತನಾತಂಗೆ (ಉದ್ಯೋಗ ಪರ್ವ, ೨ ಸಂಧಿ, ೩ ಪದ್ಯ)
ತಾತ್ಪರ್ಯ:
ಧರ್ಮರಾಯನು ದೂತನಿಗೆ ಏನಾಯಿತು ಎಂದು ಕೇಳಲು, ದೂತನು ಪರಮಾತ್ಮನಾದ ಶ್ರೀಕೃಷ್ಣನು ನಿನ್ನೊಡನೆ ಹುಟ್ಟಿದ ನಿನ್ನ ತಮ್ಮನಾದ ಪಾರ್ಥನಿಗೆ ಸಾರಥಿಯಾಗಲು ಒಪ್ಪಿದನೆಂಬುವುದು ಈಗ ಕಥೆಯಾಗಿದೆ. ಭೂಮಿಯು ನಿನ್ನ ರಾಣಿವಾಸಕ್ಕೆ ಸೇರಿದಳು, ಇನ್ನು ಚಿಂತೆ ಬಿಡು, ಶತ್ರುಗಳು ದುಃಖಿಸುವಂತಾಯಿತು, ನೀನು ಮಹಾ ಸಾಹಸಿಯಾಗಿ ಪ್ರಸಿದ್ಧಿ ಪಡೆದೆ ಎಂದು ಹೇಳಲು, ಪ್ರಸನ್ನನಾದ ಯುಧಿಷ್ಠಿರನು ದೂತನಿಗೆ ಉಡುಗೊರೆಯನ್ನು ನೀಡಿ ಕಳುಹಿಸಿದನು.
ಅರ್ಥ:
ಕಥೆ: ವಿವರವಾದ ಸಂಗತಿ; ಒಡ: ಒಟ್ಟಿಗೆ; ಹುಟ್ಟಿದ: ಜನಿಸಿದ; ಸಾರಥಿ: ಗಾಡಿ ಓಡಿಸುವವ; ಕೈಕೊಂಡನು: ನಿರ್ವಹಿಸು, ವಹಿಸಿಕೊಳ್ಳು; ಪೃಥಿವಿ: ಭೂಂಇ; ರಾಣಿವಾಸ: ಅಂತಃಪುರ; ಚಿಂತೆ: ಯೋಚನೆ; ಬೇಡು: ಕೇಳು; ವ್ಯಥಿತ: ದುಃಖಿತನಾದ;ವೈರಿ: ಶತ್ರು; ಬಲ: ಶಕ್ತಿ; ಸಂಪ್ರಥಿತ: ಅತಿ ಪ್ರಸಿದ್ಧವಾದ; ಸಾಹಸ: ಶೌರ್ಯ; ಶಿಥಿಲ: ಬಲಹೀನವಾದುದು; ಸಂಶಯ: ಅನುಮಾನ, ಸಂದೇಹ; ಅಂಗಚಿತ್ತ: ಉಡುಗೊರೆಯಾಗಿ ತನ್ನ ಮೈ ಮೇಲಿನಿಂದ ತೆಗೆದು ಕೊಡುವ ವಸ್ತ್ರ; ಆತಂಗೆ: ಅವನಿಗೆ;
ಪದವಿಂಗಡಣೆ:
ಕಥೆಗೆ +ನಿನ್ನೊಡ +ಹುಟ್ಟಿದನ+ ಸಾ
ರಥಿ+ತನವ +ಕೈಕೊಂಡನ್+ಇನ್+ ಈ
ಪೃಧಿವಿ +ನಿನ್ನಯ +ರಾಣಿವಾಸವು+ ಚಿಂತೆ+ ಬೇಡಿದಕೆ
ವ್ಯಥಿತವಾಯಿತು +ವೈರಿ +ಬಲ+ ಸಂ
ಪ್ರಥಿತ+ ಸಾಹಸನಾದೆ+ ನೀನ್+ಎನೆ
ಶಿಥಿಲ+ ಸಂಶಯನ್+ಅಂಗಚಿತ್ತವನ್+ಇತ್ತನ್+ಆತಂಗೆ
ಅಚ್ಚರಿ:
(೧) ಭೂಮಿಯು ನಿನ್ನ ವಶವಾಯಿತು ಎಂದು ಹೇಳಲು – ಪೃತಿವಿ ನಿನ್ನಯ ರಾಣಿವಾಸವು
(೨) ವ್ಯಥಿತ, ಪ್ರಥಿತ – ಪ್ರಾಸ ಪದಗಳು
(೩) ನಿನ್ನ – ೧, ೩ ಸಾಲಿನ ೨ನೇ ಪದ ಮತ್ತು ೫ ಸಾಲಿನ ಕೊನೆ ಪದ