ಕದನವಿಜಯದ ಭಂಗಿ ತಲೆಗೇ
ರಿದುದೊ ಮೇಲಂಕಣದಲೊಡವು
ಟ್ಟಿದನ ನೆತ್ತರುಗುಡಿಹಿ ನಿನ್ನೊಡನೆನಗೆ ಮಾತೇನು
ಇದಿರಲಿರದಿರು ಸಾರು ಕರೆ ಧ
ರ್ಮದ ವಿಡಂಬದ ಧರ್ಮಪುತ್ರನ
ಹದನ ಕೇಳುವೆನೆನುತ ಕಳವಳಿಸಿದಳು ಗಾಂಧಾರಿ (ಗದಾ ಪರ್ವ, ೧೧ ಸಂಧಿ, ೬೩ ಪದ್ಯ)
ತಾತ್ಪರ್ಯ:
ಯುದ್ಧದ ವಿಜಯವೆಂಬ ಭಂಗಿ ತಲೆಗೇರಿದ್ದಲ್ಲದೆ ರಣರಂಗದಲ್ಲಿ ಸಹೋದರನ ರಕ್ತ ಕುಡಿದವನೇ, ನಿನ್ನೊಡನೆ ನನಗೇನು ಮಾತು. ನನ್ನಿದಿರು ನಿಲ್ಲದೆ ದೂರ ಹೋಗು. ಧರ್ಮದ ಅಪಹಾಸ್ಯಮಾಡಿದ ಧರ್ಮಜನು ಏನೆನ್ನುತ್ತಾನೆಂದು ಕೇಳುತ್ತೇನೆ ಎಂದು ಗಾಂಧಾರಿಯು ಕಳವಳಗೊಂಡು ಹೇಳಿದಳು.
ಅರ್ಥ:
ಕದನ: ಯುದ್ಧ; ವಿಜಯ: ಗೆಲುವು; ಭಂಗಿ: ರೀತಿ; ತಲೆ: ಶಿರ; ಏರು: ಹತ್ತು; ಅಂಕಣ: ಸ್ಥಳ; ಒಡವುಟ್ಟಿದ: ಸಹೋದರ, ಜೊತೆಯಲ್ಲಿ ಜನಿಸಿದ; ನೆತ್ತರು: ರಕ್ತ; ಕುಡಿ: ಪಾನಮಾಡು; ಇದಿರು: ಎದುರು; ಸಾರು: ಜರುಗು; ಮಾತು: ವಾಣಿ; ಕರೆ: ಬರೆಮಾಡು; ಧರ್ಮ: ಧಾರಣೆ ಮಾಡಿದುದು; ವಿಡಂಬ: ಅನುಸರಣೆ, ಸೋಗು; ಪುತ್ರ: ಸುತ; ಹದ: ಸ್ಥಿತಿ; ಕೇಳು: ಆಲಿಸು; ಕಳವಳ: ಗೊಂದಲ, ಚಡಪಡಿಸು;
ಪದವಿಂಗಡಣೆ:
ಕದನ+ವಿಜಯದ +ಭಂಗಿ +ತಲೆಗೇ
ರಿದುದೊ +ಮೇಲ್+ಅಂಕಣದಲ್+ಒಡವು
ಟ್ಟಿದನ +ನೆತ್ತರು+ಕುಡಿಹಿ+ ನಿನ್ನೊಡನ್+ಎನಗೆ +ಮಾತೇನು
ಇದಿರಲ್+ಇರದಿರು +ಸಾರು +ಕರೆ +ಧ
ರ್ಮದ +ವಿಡಂಬದ +ಧರ್ಮಪುತ್ರನ
ಹದನ +ಕೇಳುವೆನ್+ಎನುತ +ಕಳವಳಿಸಿದಳು +ಗಾಂಧಾರಿ
ಅಚ್ಚರಿ:
(೧) ಭೀಮನನ್ನು ಬಯ್ಯುವ ಪರಿ – ಒಡವುಟ್ಟಿದನ ನೆತ್ತರುಗುಡಿಹಿ ನಿನ್ನೊಡನೆನಗೆ ಮಾತೇನು
ಇದಿರಲಿರದಿರು ಸಾರು
(೨) ಧರ್ಮ ಪದದ ಬಳಕೆ – ಧರ್ಮದ ವಿಡಂಬದ ಧರ್ಮಪುತ್ರನ ಹದನ ಕೇಳುವೆ