ಪದ್ಯ ೨೦: ಭಾರತ ಕಥೆಯನ್ನು ಆಲಿಸುವುದರಿಂದ ಯಾವ ಫಲವು ದೊರೆಯುತ್ತದೆ?

ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ (ಗದಾ ಪರ್ವ, ೧೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಈ ಮಹಾಭಾರತದ ಒಂದು ಅಕ್ಷರವನ್ನು ಪ್ರೀತಿಯಿಂದ ಕೇಳಿದವರಿಗೆ ವೇದ ಪಾರಾಯಣದ ಫಲ, ಗಂಗಾದಿ ತೀರ್ಥಗಳಲ್ಲಿ ಸ್ನಾನ ಮಾಡಿದ ಫಲ, ಕೃಚ್ಛ್ರಾದಿ ತಪಸ್ಸುಗಲನ್ನು, ಜ್ಯೋತಿಷ್ಟೋಮ ಯಾಗವನ್ನು ಮಾಡಿದ ಫಲ, ಪ್ರೀತಿಯಿಂದ ಭೂದಾನ, ವಸ್ತ್ರದಾನ, ಕನ್ಯಾದಾನಗಳನ್ನು ಮಾಡಿದ ಫಲವೂ ದೊರೆಯುತ್ತದೆ.

ಅರ್ಥ:
ವೇದ: ಶೃತಿ; ಪಾರಾಯಣ: ಗ್ರಂಥಾದಿಗಳನ್ನು ಮೊದಲಿನಿಂದ ಕಡೆಯವರೆಗೆ ಓದುವುದು; ಫಲ: ಪ್ರಯೋಜನ; ಗಂಗೆ: ಜಾಹ್ನವಿ; ತೀರ್ಥ: ಪವಿತ್ರವಾದ ಜಲ, ನೀರು; ಸ್ನಾನ: ಜಳಕ; ತಪಸ್ಸು: ಧ್ಯಾನ ಮಾಡುವುದು; ಜ್ಯೋತಿ: ಬೆಳಕು; ಯಾಗ: ಯಜ್ಞ; ಮೇದಿನಿ: ಭೂಮಿ; ಒಲಿದು: ಪ್ರೀತಿಸು; ವಸ್ತ್ರ: ಬಟ್ಟೆ; ಕನ್ಯ: ಹೆಣ್ಣು; ದಾನ: ನೀಡು; ಆದರ: ಗೌರವ; ಅಕ್ಷರ: ಅಕ್ಕರ; ಕೇಳು: ಆಲಿಸು;

ಪದವಿಂಗಡಣೆ:
ವೇದಪಾರಾಯಣದ +ಫಲ +ಗಂ
ಗಾದಿ +ತೀರ್ಥ+ಸ್ನಾನ+ಫಲ+ ಕೃ
ಚ್ಛ್ರಾದಿ +ತಪಸಿನ +ಫಲವು +ಜ್ಯೋತಿಷ್ಟೋಮ+ಯಾಗ+ಫಲ
ಮೇದಿನಿಯನ್+ಒಲಿದಿತ್ತ+ ಫಲ+ ವ
ಸ್ತ್ರಾದಿ +ಕನ್ಯಾದಾನ+ಫಲವಹುದ್
ಆದರಿಸಿ +ಭಾರತದೊಳ್+ಒಂದಕ್ಷರವ+ ಕೇಳ್ದರಿಗೆ

ಅಚ್ಚರಿ:
(೧) ಫಲ ಪದದ ಪ್ರಯೋಗ – ೬ ಬಾರಿ ಪ್ರಯೋಗ

ಪದ್ಯ ೫೩: ಮೋಸದ ಜೂಜಿನ ಫಲವೇನಾಯಿತು?

ಬಿದ್ದನೈ ನಿನ್ನಾತನಿನ್ನೇ
ನೆದ್ದರೈ ದಾಯಿಗರು ಜೂಜನು
ಗೆದ್ದುದಕೆ ಫಲ ಬಂದುದೇ ಸಂಧಾನದಲಿ ಛಲವ
ಹೊದ್ದಿತಕೆ ಹುಲಿಸಾಯ್ತೆ ಬಲುವಗೆ
ಬಿದ್ದಿನೆಂದುಳುಹಿದನೆ ಪವನಜ
ನುದ್ದುರುಟುತನಕೇನನೆಂಬೆನು ಭೂಪ ಕೇಳೆಂದ (ಗದಾ ಪರ್ವ, ೭ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಲೈ ರಾಜ, ನಿನ್ನ ಮಗನು ಬಿದ್ದನು, ದಾಯಾದಿಗಳು ಜಯಶಾಲಿಗಳಾದರು. ಮೋಸದ ಜೂಜನ್ನು ಗೆದ್ದುದಕ್ಕೆ ಫಲ ದೊರೆಯಿತೇ! ಸಂಧಾನವನ್ನು ಮುರಿದುದಕ್ಕೆ ಹುಲಿಸಾಯಿತೇ? ಶತ್ರುವು ತೊಡೆ ಮುರಿದು ಬಿದ್ದನೆಂದು ಭೀಮನು ಅಷ್ಟಕ್ಕೆ ಸುಮ್ಮನೆ ಬಿಟ್ಟನೇ? ಅವನ ಒರಟುತನವನ್ನು ವರ್ಣಿಸಲು ಶಬ್ದಗಳೆಲ್ಲಿವೆ? ಎಂದು ಧೃತರಾಷ್ಟ್ರನನ್ನು ಕೇಳಿದನು.

ಅರ್ಥ:
ಬಿದ್ದು: ಬೀಳು, ಎರಗು; ನಿನ್ನಾತ: ನಿನ್ನ ಮಗ; ಎದ್ದು: ಮೇಲೇಳು; ದಾಯಿಗ: ದಾಯಾದಿ; ಜೂಜು: ಸಟ್ಟ, ಪಗಡೆ; ಗೆದ್ದು: ಜಯಿಸು; ಫಲ: ಪ್ರಯೋಜನ; ಸಂಧಾನ: ಸೇರಿಸುವುದು, ಹೊಂದಿಸುವುದು; ಛಲ: ದೃಢ ನಿಶ್ಚಯ; ಹೊದ್ದು: ಹೊಡೆ; ಬಲು: ಶಕ್ತಿ; ಬಿದ್ದ: ಬೀಳು; ಉಳುಹು: ಬಿಡು; ಪವನಜ: ಭೀಮ; ಉದ್ದುರುತು: ನಯವಿಲ್ಲದ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಬಿದ್ದನೈ +ನಿನ್ನಾತನ್+ಇನ್ನೇನ್
ಎದ್ದರೈ+ ದಾಯಿಗರು +ಜೂಜನು
ಗೆದ್ದುದಕೆ +ಫಲ +ಬಂದುದೇ +ಸಂಧಾನದಲಿ +ಛಲವ
ಹೊದ್ದಿತಕೆ +ಹುಲಿಸಾಯ್ತೆ +ಬಲುವಗೆ
ಬಿದ್ದಿನೆಂದ್+ಉಳುಹಿದನೆ +ಪವನಜನ್
ಉದ್ದುರುಟುತನಕ್+ಏನನೆಂಬೆನು +ಭೂಪ +ಕೇಳೆಂದ

ಅಚ್ಚರಿ:
(೧) ಮೋಸದ ಪ್ರತಿಫಲ – ಜೂಜನು ಗೆದ್ದುದಕೆ ಫಲ ಬಂದುದೇ

ಪದ್ಯ ೩೪: ಸಂಜಯನು ದುರ್ಯೋಧನನಿಗೆ ಏನು ಹೇಳಿದ?

ಜೀಯ ನಿಮ್ಮಡಿಗಳಿಗೆ ಗುರು ಗಾಂ
ಗೇಯ ವಿದುರಾದಿಗಳು ಹೇಳಿದ
ಜೋಯಿಸವ ಕೈಕೊಂಡಿರೇ ನಮ್ಮೀ ಪ್ರಳಾಪದಲಿ
ರಾಯ ಫಲವೇನೈ ಯುಧಿಷ್ಠಿರ
ರಾಯನೊಲಿದಂತಿರಲಿ ನಿಮ್ಮಯ
ತಾಯಿತಂದೆಗೆ ಹೇಳ್ವೆನೇನನು ಬುದ್ಧಿಗಲಿಸೆಂದ (ಗದಾ ಪರ್ವ, ೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸಂಜಯನು, ನನ್ನ ಪ್ರಲಾಪಕ್ಕೆ ನಿಮಗೆ ದ್ರೋಣ, ಭೀಷ್ಮ, ವಿದುರರು ಹೇಳಿದ ಭವಿಷ್ಯಕ್ಕಾದ ಗತಿಯೇ ಬಂತೇ? ಹೇಳಿ ಏನು ಫಲ, ಯುಧಿಷ್ಠಿರನು ತನಗಿಷ್ಟಬಂದಂತೆ ಇಅಲಿ. ನಿಮ್ಮ ತಂದೆತಾಯಿಗಳಿಗೆ ಏನು ಹೇಳಲಿ? ತಿಳಿಸಿರಿ ಎಂದು ಕೇಳಿದನು.

ಅರ್ಥ:
ಜೀಯ: ಒಡೆಯ; ಅಡಿ: ಪಾದ; ಗುರು: ಆಚಾರ್ಯ; ಗಾಂಗೇಯ: ಭೀಷ್ಮ; ಆದಿ: ಮುಂತಾದರು; ಜೋಯಿಸ: ಜೋತಿಷಿ; ಪ್ರಳಾಪ: ಅಸಂಬದ್ಧವಾದ ಮಾತು, ಪ್ರಲಾಪ; ರಾಯ: ಒಡೆಯ; ಫಲ: ಪ್ರಯೋಜನ; ರಾಯ: ರಾಜ; ಒಲಿ: ಒಪ್ಪು, ಸಮ್ಮತಿಸು; ತಾಯಿ: ಮಾತೆ; ತಂದೆ: ಪಿತ; ಬುದ್ಧಿ: ತಿಳಿವು, ಅರಿವು;

ಪದವಿಂಗಡಣೆ:
ಜೀಯ +ನಿಮ್ಮಡಿಗಳಿಗೆ +ಗುರು +ಗಾಂ
ಗೇಯ +ವಿದುರಾದಿಗಳು +ಹೇಳಿದ
ಜೋಯಿಸವ +ಕೈಕೊಂಡಿರೇ +ನಮ್ಮೀ +ಪ್ರಳಾಪದಲಿ
ರಾಯ +ಫಲವೇನೈ +ಯುಧಿಷ್ಠಿರ
ರಾಯನ್+ಒಲಿದಂತಿರಲಿ +ನಿಮ್ಮಯ
ತಾಯಿ+ತಂದೆಗೆ +ಹೇಳ್ವೆನ್+ಏನನು +ಬುದ್ಧಿ+ಕಲಿಸೆಂದ

ಅಚ್ಚರಿ:
(೧) ಜೀಯ, ರಾಯ – ಸಾಮ್ಯಾರ್ಥ ಪದ
(೨) ತಿಳಿಸಿ ಎಂದು ಹೇಳುವ ಪರಿ – ಬುದ್ಧಿಗಲಿಸೆಂದ

ಪದ್ಯ ೨೯: ದುರ್ಯೋಧನನು ಭೀಮನ ಹೊಟ್ಟೆಯಿಂದ ಯಾರನ್ನು ತೆಗೆಯುತ್ತೇನೆಂದನು?

ಕದಡಿತಂತಃಕರಣ ವಿಕ್ರಮ
ದುದಧಿ ನೆಲೆಯಾಯಿತು ನಿರರ್ಥಕೆ
ಒದರಿದೆಡೆ ಫಲವೇನು ಸಂಜಯ ಹಿಂದನೆಣಿಸದಿರು
ಕದನದಲಿ ದುಶ್ಯಾಸನನ ತೇ
ಗಿದನಲಾ ಬಕವೈರಿ ತಮ್ಮನ
ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ (ಗದಾ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ನನ್ನ ಮನಸ್ಸು ಕದಡಿದೆ, ಆದರೆ ಪರಾಕ್ರಮದ ಕಡಲು ಬತ್ತಿಲ್ಲ, ನೆಲೆನಿಂತಿದೆ. ಅರ್ಥವಿಲ್ಲದೆ ಮಾತಾಡಿ ಏನು ಪ್ರಯೋಜನ? ಸಂಜಯ ಹಿಂದಾದುದನ್ನು ಲೆಕ್ಕಿಸಬೇಡ. ಯುದ್ಧದಲ್ಲಿ ಭೀಮನು ದುಶ್ಯಾಸನನನ್ನು ತಿಂದು ತೇಗಿದನಲ್ಲವೇ? ನನ್ನ ತಮ್ಮನನ್ನು ಭೀಮನ ಹೊಟ್ಟೆಯಿಂದ ತೆಗೆಯುತ್ತೇನೆ, ಆ ವಿಚಿತ್ರವನು ನೋಡು ಎಂದು ಹೇಳಿದನು.

ಅರ್ಥ:
ಕದಡು: ಬಗ್ಗಡ, ರಾಡಿ; ಅಂತಃಕರಣ: ಒಳ ಮನಸ್ಸು; ವಿಕ್ರಮ: ಪರಾಕ್ರಮಿ; ಉದಧಿ: ಸಾಗರ; ನೆಲೆ: ಸ್ಥಾನ; ನಿರರ್ಥಕ: ಪ್ರಯೋಜನವಿಲ್ಲದ; ಒದರು: ಹೇಳು, ಹೊರಹಾಕು; ಫಲ: ಪ್ರಯೋಜನ; ಹಿಂದನ: ಪೂರ್ವ, ನಡೆದ; ಎಣಿಸು: ಲೆಕ್ಕಿಸು; ಕದನ: ಯುದ್ಧ; ತೇಗು: ಢರಕೆ, ತಿಂದು ಮುಗಿಸು; ಬಕ: ಭೀಮಸೇನನಿಂದ ಹತನಾದ ಒಬ್ಬ ರಾಕ್ಷಸ; ಬಕವೈರಿ: ಭೀಮ; ತಮ್ಮ: ಸಹೋಅರ; ಉದರ: ಹೊಟ್ಟೆ; ತೆಗೆ: ಈಚೆಗೆ ತರು, ಹೊರತರು; ವಿಚಿತ್ರ: ಬೆರಗುಗೊಳಿಸುವಂತಹುದು; ನೋಡು: ವೀಕ್ಷಿಸು;

ಪದವಿಂಗಡಣೆ:
ಕದಡಿತ್+ಅಂತಃಕರಣ+ ವಿಕ್ರಮದ್
ಉದಧಿ +ನೆಲೆಯಾಯಿತು +ನಿರರ್ಥಕೆ
ಒದರಿದೆಡೆ +ಫಲವೇನು +ಸಂಜಯ +ಹಿಂದನ್+ಎಣಿಸದಿರು
ಕದನದಲಿ +ದುಶ್ಯಾಸನನ +ತೇ
ಗಿದನಲಾ +ಬಕವೈರಿ +ತಮ್ಮನನ್
ಉದರದಲಿ +ತೆಗೆವೆನು +ವಿಚಿತ್ರವ +ನೋಡು +ನೀನೆಂದ

ಅಚ್ಚರಿ:
(೧) ದುರ್ಯೋಧನನ ಶಕ್ತಿಯನ್ನು ವಿವರಿಸುವ ಪರಿ – ವಿಕ್ರಮದುದಧಿ ನೆಲೆಯಾಯಿತು
(೨) ಭೀಮನನ್ನು ಬಕವೈರಿ ಎಂದು ಕರೆದಿರುವುದು

ಪದ್ಯ ೩೫: ಶಲ್ಯನು ಯುದ್ಧಕ್ಕೆ ಯಾರನ್ನು ಕಳಿಸಲು ಹೇಳಿದನು?

ದಿಟ್ಟನೈ ಭೂಪತಿಗಳಲಿ ಜಗ
ಜಟ್ಟಿಯೈ ನಿನಗಸ್ತ್ರವಿದ್ಯವ
ಕೊಟ್ಟವನ ನಾ ಬಲ್ಲೆನದನಿನ್ನಾಡಿ ಫಲವೇನು
ತೊಟ್ಟ ಜೋಹದ ವಾಸಿಯೆಂಬುದ
ಬಿಟ್ಟು ನಮಗೊಡ್ಡುವುದು ನಿನ್ನೊಡ
ವುಟ್ಟಿದರನಿಬ್ಬರನೆನುತ ತೆಗೆದೆಚ್ಚನಾ ಶಲ್ಯ (ಶಲ್ಯ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧರ್ಮಜ, ನೀನು ಕ್ಷತ್ರಿಯರಲ್ಲಿ ಜಗಜಟ್ಟಿ, ದಿಟ್ಟ, ನಿನಗೆ ಬಿಲ್ವಿದ್ಯೆಯನ್ನುಕಲಿಸಿದವರು ಯಾರೆಂದು ನನಗೆ ಗೊತ್ತು, ನೀನು ತೊಟ್ಟಿರುವ ಈ ವೀರ ವೇಷವನ್ನು ಬಿಡು, ಛಲ ಹಠಗಳನ್ನು ಬಿಟ್ಟು ಭೀಮಾರ್ಜುನರನ್ನು ನಮ್ಮ ಮೇಲೆ ಯುದ್ಧ ಮಾಡಲು ಕಳಿಸು ಎಂದು ಶಲ್ಯನು ಬಾಣ ಪ್ರಯೋಗ ಮಾಡಿದನು.

ಅರ್ಥ:
ದಿಟ್ಟ: ಪರಾಕ್ರಮಿ, ಧೀರ; ಭೂಪತಿ: ರಾಜ; ಜಗಜಟ್ಟಿ: ಪರಾಕ್ರಮಿ; ಅಸ್ತ್ರ: ಶಸ್ತ್ರ, ಆಯುಧ; ವಿದ್ಯ: ಜ್ಞಾನ; ಕೊಟ್ಟವ: ನೀಡಿದ; ಬಲ್ಲೆ: ತಿಳಿದಿರುವೆ; ಫಲ: ಪ್ರಯೋಜನ; ಆಡು: ಮಾತಾಡು; ತೊಟ್ಟ: ಧರಿಸು; ಜೋಹ: ಮೋಸದ ವೇಷ, ಸೋಗು; ವಾಸಿ: ಒಳಿತು; ಬಿಟ್ಟು: ತೊರೆ; ಒಡ್ಡು: ನೀಡು; ಒಡವುಟ್ಟಿ: ಜೊತೆಯಲ್ಲಿ ಹುಟ್ಟಿದ; ತೆಗೆ: ಹೊರತರು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ದಿಟ್ಟನೈ +ಭೂಪತಿಗಳಲಿ +ಜಗ
ಜಟ್ಟಿಯೈ +ನಿನಗ್+ಅಸ್ತ್ರ+ವಿದ್ಯವ
ಕೊಟ್ಟವನ+ ನಾ+ ಬಲ್ಲೆನ್+ಅದನ್+ಇನ್ನಾಡಿ +ಫಲವೇನು
ತೊಟ್ಟ +ಜೋಹದ +ವಾಸಿಯೆಂಬುದ
ಬಿಟ್ಟು +ನಮಗ್+ಒಡ್ಡುವುದು +ನಿನ್ನೊಡ
ವುಟ್ಟಿದರನ್+ಇಬ್ಬರನೆನುತ +ತೆಗೆದ್+ಎಚ್ಚನಾ +ಶಲ್ಯ

ಅಚ್ಚರಿ:
(೧) ಕೊಟ್ಟ, ತೊಟ್ಟ – ಪ್ರಾಸ ಪದಗಳು

ಪದ್ಯ ೫೪: ಕರ್ಣನು ಹೇಗೆ ಭೀಮನ ರಥವನ್ನು ಕಡಿದನು?

ಆದಡೆಲವೊ ದುರಾತ್ಮ ಮಾರುತಿ
ವಾದದಲಿ ಫಲವೇನು ಬಲ್ಲರೆ
ಕಾದುಕೊಳ್ಳಾ ಸಾಕು ಕಡುಸಾಹಸಿಕ ಗಡ ನೀನು
ಹೋದೆ ಹೋಗಿನ್ನೆನುತ ಕಣಿಹದಿ
ನೈದರಲಿ ಕೆಡಹಿದನು ತುರಗವ
ನೈದುಬಾಣದಲೆಚ್ಚು ಕಡಿದೀಡಾಡಿದನು ರಥವ (ದ್ರೋಣ ಪರ್ವ, ೧೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಕರ್ಣನು ಉತ್ತರಿಸುತ್ತಾ, ಹಾಗಾದರೆ ಎಲವೋ, ದುರಾತ್ಮ ನಿನ್ನೊಡನೆ ವಾದ ಮಾಡಿ ಫಲವೇನು ನಿನಗೆ ಅದು ಗೊತ್ತಿದ್ದರೆ ನಿನ್ನನ್ನು ಕಾಪಾಡಿಕೋ, ನೀನು ಅತಿ ಸಾಹಸಿಯಲ್ಲವೇ? ನೀನೂ ಹೋದೆ ಎಂದು ತಿಳಿದುಕೋ, ಇದೋ ಹೋಗು, ಎಂದು ಹದಿನೈದು ಬಾಣಗಳಿಂದ ಭೀಮನ ರಥವನ್ನು ಕುದುರೆಗಳನ್ನು ಕಡಿದು ಹಾಕಿದನು.

ಅರ್ಥ:
ದುರಾತ್ಮ: ದುಷ್ಟ; ಮಾರುತಿ: ವಾಯುಪುತ್ರ; ವಾದ: ಮಾತು, ಸಂಭಾಷಣೆ; ಫಲ: ಪ್ರಯೋಜನ; ಬಲ್ಲ: ತಿಳಿ; ಕಾದು: ಹೋರಾಟ, ಯುದ್ಧ; ಸಾಕು: ನಿಲ್ಲು; ಕಡು: ಬಹಳ; ಸಾಹಸಿ: ಪರಾಕ್ರಮಿ; ಗಡ: ಅಲ್ಲವೆ; ಹೋಗು: ತೆರಳು; ಕಣಿ: ನೋಟ; ಕೆಡಹು: ತಳ್ಳು; ತುರಗ: ಅಶ್ವ; ಬಾಣ: ಸರಳು; ಎಚ್ಚು: ಬಾಣ ಪ್ರಯೋಗ ಮಾಡು; ಕಡಿ: ಸೀಳು; ಈಡಾಡು: ಒಗೆ, ಚೆಲ್ಲು; ರಥ: ಬಂಡಿ;

ಪದವಿಂಗಡಣೆ:
ಆದಡ್+ಎಲವೊ +ದುರಾತ್ಮ +ಮಾರುತಿ
ವಾದದಲಿ +ಫಲವೇನು +ಬಲ್ಲರೆ
ಕಾದುಕೊಳ್ಳಾ +ಸಾಕು +ಕಡು+ಸಾಹಸಿಕ +ಗಡ +ನೀನು
ಹೋದೆ +ಹೋಗಿನ್ನೆನುತ +ಕಣಿಹದಿನ್
ಐದರಲಿ +ಕೆಡಹಿದನು +ತುರಗವನ್
ಐದು+ಬಾಣದಲ್+ಎಚ್ಚು +ಕಡಿದ್+ಈಡಾಡಿದನು +ರಥವ

ಅಚ್ಚರಿ:
(೧) ಭೀಮನನ್ನು ಬಯ್ಯುವ ಪರಿ – ಎಲವೊ ದುರಾತ್ಮ ಮಾರುತಿ ವಾದದಲಿ ಫಲವೇನು

ಪದ್ಯ ೩೪: ದುರ್ಯೊಧನನ ನೇರ ನುಡಿಯೇನು?

ಒಂದು ಮತವೆನಗೊಂದು ನುಡಿ ಮನ
ವೊಂದು ಮತ್ತೊಂದಿಲ್ಲ ಸಾಕಿದ
ನೆಂದು ಫಲವೇನಿನ್ನು ಸಂಧಿಯೆ ಪಾಂಡುತನಯರಲಿ
ಇಂದು ನಮಗೀ ಹದನ ನಾನೇ
ತಂದು ಬಳಿಕೆನ್ನೊಡಲ ಸಲಹುವ
ಚೆಂದವೊಳ್ಳಿತು ತಪ್ಪನಾಡಿದಿರೆಂದನವನೀಶ (ಭೀಷ್ಮ ಪರ್ವ ೧೦ ಸಂಧಿ, ೩೪ ಪದ್ಯ)

ತಾತ್ಪರ್ಯ:
ಒಂದು ಅಭಿಪ್ರಾಯ, ಒಂದು ಮಾತು, ಮನಸ್ಸಲ್ಲೂ ಅದೇ ಹೊರತು ಮತ್ತೊಂದಿಲ್ಲ. ನೀವು ಸಾಕಿದವರು, ಆಡಿ ಏನು ಫಲ. ಪಾಂಡವರಿಂದ ನಿಮಗೆ ನಾನೇ ಈ ದುರ್ಗತಿಯನ್ನು ತಂದು, ನಾನು ಉಳಿದು ನನ್ನ ದೇಹವನ್ನು ಹೊರೆಯುವುದು ಏತರದ ಮಾತು, ನೀವು ತಪ್ಪನ್ನಾಡಿದಿರಿ, ಎಂದು ದುರ್ಯೋಧನನು ಭೀಷ್ಮಗೆ ಹೇಳಿದನು.

ಅರ್ಥ:
ಮತ: ವಿಚಾರ, ಅಭಿಪ್ರಾಯ; ನುಡಿ: ಮಾತು; ಮನ: ಮನಸ್ಸು; ಸಾಕು: ನಿಲ್ಲಿಸು; ಫಲ: ಪ್ರಯೋಜನ; ಸಂಧಿ: ಕೂಡಿಸು; ತನಯ: ಮಗ; ಹದ: ರೀತಿ; ಒಡಲು: ದೇಹ; ಸಲಹು: ಕಾಪಾಡು, ರಕ್ಷಿಸು; ಚೆಂದ: ಸೊಗಸು; ಒಳ್ಳಿತು: ಸರಿಯಾದ; ತಪ್ಪು: ಸರಿಯಲ್ಲದು; ಅವನೀಶ: ರಾಜ;

ಪದವಿಂಗಡಣೆ:
ಒಂದು +ಮತವ್+ಎನಗ್+ಒಂದು +ನುಡಿ +ಮನವ್
ಒಂದು+ ಮತ್ತೊಂದಿಲ್ಲ +ಸಾಕಿದನ್
ನೆಂದು+ ಫಲವೇನ್+ಇನ್ನು +ಸಂಧಿಯೆ +ಪಾಂಡು+ತನಯರಲಿ
ಇಂದು +ನಮಗೀ +ಹದನ +ನಾನೇ
ತಂದು +ಬಳಿಕ್+ಎನ್ನೊಡಲ+ ಸಲಹುವ
ಚೆಂದವ್+ಒಳ್ಳಿತು +ತಪ್ಪನಾಡಿದಿರ್+ಎಂದನ್+ಅವನೀಶ

ಅಚ್ಚರಿ:
(೧) ದುರ್ಯೋಧನನ ಅಭಿಪ್ರಾಯ – ಒಂದು ಮತವೆನಗೊಂದು ನುಡಿ ಮನವೊಂದು ಮತ್ತೊಂದಿಲ್ಲ

ಪದ್ಯ ೬: ಭೀಷ್ಮರು ಕೌರವ ಸೇನಾನಾಯಕರಿಗೆ ಏನು ಹೇಳಿದರು?

ಒತ್ತುಗೊಡುವರೆ ಹಗೆಗೆ ಹಜ್ಜೆಯ
ನಿತ್ತು ತೆಗೆವರೆ ಪಾರ್ಥ ಪರಬಲ
ಮೃತ್ಯುವೇ ಸಾಕಿನ್ನು ಹೋಗಲಿಯೆಂದು ಫಲವೇನು
ಮತ್ತೆ ಕೆಣಕುವುದರ್ಜುನನ ನ
ಮ್ಮತ್ತ ಬಿಡದಿರೆ ವೈರಿಸೇನೆಯ
ಕಿತ್ತು ಬಿಸುಡವೆ ಯಮಪುರಕೆ ಮೋಹರಿಸಿ ನೀವೆಂದ (ಭೀಷ್ಮ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ಶತ್ರುವು ನಮ್ಮನ್ನು ಹಿಮ್ಮೆಟ್ಟುವಂತೆ ಮಾಡಲು ಬಿಡುವರೇ? ಶತ್ರುವಿನ ಮೇಲೆ ಆಕ್ರಮಣಮಾಡಿ ಹಿಂದಕ್ಕೆ ಬರುವುದೇ? ಅರ್ಜುನನು ಪರಬಲಕ್ಕೆ ಮೃತ್ಯುವೇ? ಇರಲಿ, ಏನೆಂದರೇನು ಪ್ರಯೋಜನ, ಅರ್ಜುನನನ್ನು ಮತ್ತೆ ಕೆಣಕಿ ನನ್ನ ಕಡೆಗೆ ಬರಲು ಬಿಡದಿದ್ದರೆ ಶತ್ರು ಸೈನ್ಯವನ್ನು ಕಿತ್ತು ಯಮಪುರಕ್ಕೆ ಕಳಿಸುತ್ತೇನೆ, ನೀವೆಲ್ಲರೂ ಸೈನ್ಯ ಸನ್ನದ್ಧರಾಗಿರಿ ಎಂದು ಭೀಷ್ಮರು ಕೌರವ ಸೇನಾನಾಯಕರಿಗೆ ತಿಳಿಸಿದರು.

ಅರ್ಥ:
ಒತ್ತು: ಆಕ್ರಮಿಸು, ಮುತ್ತು; ಹಗೆ: ವೈರ; ಹಜ್ಜೆ: ಪಾದ; ತೆಗೆ: ಹೊರತರು; ಪರಬಲ: ವೈರಿ ಸೈನ್ಯ; ಮೃತ್ಯು: ಸಾವು; ಸಾಕು: ನಿಲ್ಲಿಸು; ಹೋಗು: ತೆರಳು; ಫಲವೇನು: ಪ್ರಯೋಜನವೇನು; ಕೆಣಕು: ರೇಗಿಸು; ಬಿಡು: ತೊರೆ; ವೈರಿ: ಶತ್ರು; ಸೇನೆ: ಸೈನ್ಯ; ಕಿತ್ತು: ಕೀಳು; ಬಿಸುಡು: ಹೊರಹಾಕು; ಯಮ: ಜವ; ಪುರ: ಊರು; ಮೋಹರ: ಯುದ್ಧ;

ಪದವಿಂಗಡಣೆ:
ಒತ್ತುಗೊಡುವರೆ +ಹಗೆಗೆ+ ಹಜ್ಜೆಯನ್
ಇತ್ತು +ತೆಗೆವರೆ+ ಪಾರ್ಥ +ಪರಬಲ
ಮೃತ್ಯುವೇ +ಸಾಕಿನ್ನು +ಹೋಗಲಿಯೆಂದು +ಫಲವೇನು
ಮತ್ತೆ +ಕೆಣಕುವುದ್+ಅರ್ಜುನನ +ನ
ಮ್ಮತ್ತ +ಬಿಡದಿರೆ+ ವೈರಿಸೇನೆಯ
ಕಿತ್ತು +ಬಿಸುಡವೆ+ ಯಮಪುರಕೆ+ ಮೋಹರಿಸಿ+ ನೀವೆಂದ

ಅಚ್ಚರಿ:
(೧) ಒತ್ತು, ಇತ್ತು, ಕಿತ್ತು – ಪ್ರಾಸ ಪದಗಳು
(೨) ಹಗೆ, ವೈರಿ, ಪರಬಲ – ಸಮಾನಾರ್ಥಕ ಪದ
(೩) ಸಾಯಿಸುವೆ ಎಂದು ಹೇಳುವ ಪರಿ – ವೈರಿಸೇನೆಯ ಕಿತ್ತು ಬಿಸುಡವೆ ಯಮಪುರಕೆ

ಪದ್ಯ ೩೭: ಯಾವ ಮರಗಳು ಸೈನ್ಯರ ಕಾಲ್ತುಳಿತಕ್ಕೆ ಬಿದ್ದವು?

ಬಲದ ಪದಘಟ್ಟಣೆಗೆ ಹೆಮ್ಮರ
ನುಲಿದು ಬಿದ್ದವು ಸಾಲ ಪೂಗಾ
ವಳಿ ಕಪಿತ್ಥ ಲವಂಗ ತುಂಬುರ ನಿಂಬ ದಾಳಿಂಬ
ಫಲ ಪಲಾಶ ರಸಾಲ ಶಮಿಗು
ಗ್ಗುಳ ಮಧೂಕಾಶೋಕ ಬಿಲ್ವಾ
ಮಲಕ ಜಂಬೀರಾದಿಗಳು ನುಗ್ಗಾಯ್ತು ನಿಮಿಷದಲಿ (ಅರಣ್ಯ ಪರ್ವ, ೧೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸೈನ್ಯದ ಕಾಲ್ತುಳಿತಕ್ಕೆ, ಹೆಮ್ಮರಗಳು ಸದ್ದು ಮಾಡುತ್ತಾ ಮುರಿದು ಬಿದ್ದವು. ನಿಮಿಷ ಮಾತ್ರದಲ್ಲಿ ಸಾಲ, ಅಡಕೆ, ಬೇಲ, ಲವಂಗ, ತುಂಬುರ, ನಿಮ್ಬೆ, ದಾಳಿಂಬೆ, ಮುತ್ತುಗ, ಮಾವು, ಬನ್ನಿ, ಗುಗ್ಗಳ, ಹಿಪ್ಪೆ, ಅಶೋಕ, ಬಿಲ್ವ, ನೆಲ್ಲಿ, ಕಂಚಿ ಮೊದಲಾದ ಮರಗಳು ಹಣ್ಣುಗಳೊಡನೆ ಬಿದ್ದವು.

ಅರ್ಥ:
ಬಲ: ಸೈನ್ಯ; ಪದ: ಕಾಲು; ಘಟ್ಟಣೆ: ಅಪ್ಪಳಿಸುವಿಕೆ, ಹೊಡೆತ; ಹೆಮ್ಮರ: ದೊಡ್ಡ ಮರ; ಉಲಿ: ಧ್ವನಿ; ಬಿದ್ದು: ಕೆಳಕ್ಕೆ ಉರುಳು; ಸಾಲ: ಮತ್ತಿಮರ, ಸರ್ಜ ವೃಕ್ಷ; ಪೂಗ: ಅಡಿಕೆಮರ; ಆವಳಿ: ಸಾಲು, ಗುಂಪು; ಕಪಿತ್ಥ: ಬೇಲದ ಮರ; ತುಂಬುರ: ಒಂದು ಬಗೆಯ ಮರ; ನಿಂಬ: ಮಂದಾರವೃಕ್ಷ, ನಿಂಬೆ; ಫಲ: ಹಣ್ಣು; ಪಲಾಶ: ಮುತ್ತುಗದ ಮರ; ರಸಾಲ: ಮಾವು; ಶಮಿ: ಬನ್ನಿಯ ಮರ; ಗುಗ್ಗುಳ: ಸಾಂಭ್ರಾಣಿ, ಒಂದು ಬಗೆಯ ಮರ; ಮಧೂಕ: ಒಂದು ಜಾತಿಯ ಗಿಡ; ಅಶೋಕ: ಒಂದು ಜಾತಿಯ ಮರ; ಅಮಲ: ನೆಲ್ಲಿ; ಜಂಬೀರ: ನಿಂಬೆಯ ಗಿಡ; ನುಗ್ಗು: ನೂಕಾಟ, ಪುಡಿ; ನಿಮಿಷ: ಕ್ಷಣ;

ಪದವಿಂಗಡಣೆ:
ಬಲದ +ಪದಘಟ್ಟಣೆಗೆ +ಹೆಮ್ಮರ
ನುಲಿದು +ಬಿದ್ದವು +ಸಾಲ+ ಪೂಗಾ
ವಳಿ +ಕಪಿತ್ಥ +ಲವಂಗ +ತುಂಬುರ +ನಿಂಬ+ ದಾಳಿಂಬ
ಫಲ+ ಪಲಾಶ+ ರಸಾಲ +ಶಮಿ+ಗು
ಗ್ಗುಳ +ಮಧೂಕ+ಅಶೋಕ +ಬಿಲ್ವಾ
ಮಲಕ+ ಜಂಬೀರಾದಿಗಳು+ ನುಗ್ಗಾಯ್ತು +ನಿಮಿಷದಲಿ

ಅಚ್ಚರಿ:
(೧) ಮರಗಳ ಹೆಸರು – ಸಾಲ, ಪೂಗ, ಕಪಿತ್ಥ, ಲವಂಗ, ತುಂಬುರ, ನಿಂಬ, ದಾಳಿಂಬ,
ಫಲ, ಪಲಾಶ, ರಸಾಲ, ಶಮಿ, ಗುಗ್ಗುಳ, ಮಧೂಕ,ಅಶೋಕ, ಬಿಲ್ವ, ಅಮಲ, ಜಂಬೀರ

ಪದ್ಯ ೫೪: ರಾಜನಾದವನು ಯಾವುದನ್ನು ಗಮನಿಸಬೇಕು?

ಕುಸುಮ ಫಲ ತಾಂಬೂಲ ಗಂಧ
ಪ್ರಸರ ಭೋಜನಗಮನ ನೆನಹಿಂ
ದೆಸೆವ ಕಾರ್ಯದೊಳಿನಿಬರೊರಗಿದೊಡೊಬ್ಬನೆಚ್ಚರಿಕೆ
ಎಸೆಯಲನಿತುವನೊಬ್ಬನೇ ಭೋ
ಗಿಸುವಡವನೀಪಾಲರಿಗೆ ತಾ
ಸಸಿನವೆನಿಸದು ರಾಯ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ರಾಜನಾದವು ಎಷ್ಟು ಎಚ್ಚರದಿಂದಿರಬೇಕೆಂದು ಈ ಪದ್ಯದಲ್ಲಿ ತಿಳಿಸಲಾಗಿದೆ. ರಾಜನು ಹೂವು, ಹಣ್ಣು, ತಾಂಬೂಲ, ಗಂಧ, ಊಟ, ಗಮನ ಇವೆಲ್ಲವನ್ನು ಎಚ್ಚರಿಕೆಯಿಂದ ಅನುಭವಿಸಬೇಕು. ಜೊತೆಯವರು ಮಲಗಿದ್ದಾಗ ಎಚ್ಚರದಿಂದಿರಬೇಕು. ಒಬ್ಬನೇ ಈ ಕಾರ್ಯಗಳಲ್ಲಿ ತೊಡಗುವುದು ಯೋಗ್ಯವಲ್ಲ.

ಅರ್ಥ:
ಕುಸುಮ: ಹೂವು; ಫಲ: ಹಣ್ಣು; ತಾಂಬೂಲ: ಎಲೆ, ಅಡಿಕೆ; ಗಂಧ: ಚಂದನ; ಪ್ರಸರ: ಹರಡುವುದು, ವಿಸ್ತಾರ; ಭೋಜನ: ಊಟ; ಗಮನ: ಎಚ್ಚರ; ನೆನ: ನೆನಪು; ಎಸೆವ: ತೋರುವ, ಪ್ರಕಾಶಿಸು; ಕಾರ್ಯ: ಕೆಲಸ; ಇನಿಬರು: ಇಷ್ಟು ಜನ; ಒರಗು: ಕೆಳಕ್ಕೆ ಬಾಗು; ಎಚ್ಚರ: ಗಮನ ವಹಿಸು; ಅನಿತು: ಅಷ್ಟು; ಭೋಗಿಸು: ಅನುಭವಿಸು; ಅವನಿ: ಭೂಮಿ; ಅವನೀಪಾಲ: ರಾಜ; ಸಸಿನ: ಸರಳವಾದ್ದು, ಕ್ಷೇಮ; ರಾಯ: ರಾಜ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಕುಸುಮ +ಫಲ +ತಾಂಬೂಲ +ಗಂಧ
ಪ್ರಸರ +ಭೋಜನ+ಗಮನ +ನೆನಹಿಂದ್
ಎಸೆವ +ಕಾರ್ಯದೊಳ್+ಇನಿಬರ್+ಒರಗಿದೊಡ್+ಒಬ್ಬನ್+ಎಚ್ಚರಿಕೆ
ಎಸೆಯಲ್+ಅನಿತುವನ್+ಒಬ್ಬನೇ +ಭೋ
ಗಿಸುವಡ್+ಅವನೀಪಾಲರಿಗೆ+ ತಾ
ಸಸಿನವ್+ಎನಿಸದು +ರಾಯ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಕುಸುಮ, ಫಲ, ತಾಂಬೂಲ, ಗಂಧ, ಭೋಜನ, ಗಮನ – ಈ ೬ ವಿಷಯಗಳ ಬಗ್ಗೆ ರಾಜನಾದವನು ಎಚ್ಚರವಹಿಸಬೇಕು.
(೨) ರಾಯ, ಅವನೀಪಾಲ – ಸಮನಾರ್ಥಕ ಪದ