ಪದ್ಯ ೨೦: ಭಾರತ ಕಥೆಯನ್ನು ಆಲಿಸುವುದರಿಂದ ಯಾವ ಫಲವು ದೊರೆಯುತ್ತದೆ?

ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ (ಗದಾ ಪರ್ವ, ೧೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಈ ಮಹಾಭಾರತದ ಒಂದು ಅಕ್ಷರವನ್ನು ಪ್ರೀತಿಯಿಂದ ಕೇಳಿದವರಿಗೆ ವೇದ ಪಾರಾಯಣದ ಫಲ, ಗಂಗಾದಿ ತೀರ್ಥಗಳಲ್ಲಿ ಸ್ನಾನ ಮಾಡಿದ ಫಲ, ಕೃಚ್ಛ್ರಾದಿ ತಪಸ್ಸುಗಲನ್ನು, ಜ್ಯೋತಿಷ್ಟೋಮ ಯಾಗವನ್ನು ಮಾಡಿದ ಫಲ, ಪ್ರೀತಿಯಿಂದ ಭೂದಾನ, ವಸ್ತ್ರದಾನ, ಕನ್ಯಾದಾನಗಳನ್ನು ಮಾಡಿದ ಫಲವೂ ದೊರೆಯುತ್ತದೆ.

ಅರ್ಥ:
ವೇದ: ಶೃತಿ; ಪಾರಾಯಣ: ಗ್ರಂಥಾದಿಗಳನ್ನು ಮೊದಲಿನಿಂದ ಕಡೆಯವರೆಗೆ ಓದುವುದು; ಫಲ: ಪ್ರಯೋಜನ; ಗಂಗೆ: ಜಾಹ್ನವಿ; ತೀರ್ಥ: ಪವಿತ್ರವಾದ ಜಲ, ನೀರು; ಸ್ನಾನ: ಜಳಕ; ತಪಸ್ಸು: ಧ್ಯಾನ ಮಾಡುವುದು; ಜ್ಯೋತಿ: ಬೆಳಕು; ಯಾಗ: ಯಜ್ಞ; ಮೇದಿನಿ: ಭೂಮಿ; ಒಲಿದು: ಪ್ರೀತಿಸು; ವಸ್ತ್ರ: ಬಟ್ಟೆ; ಕನ್ಯ: ಹೆಣ್ಣು; ದಾನ: ನೀಡು; ಆದರ: ಗೌರವ; ಅಕ್ಷರ: ಅಕ್ಕರ; ಕೇಳು: ಆಲಿಸು;

ಪದವಿಂಗಡಣೆ:
ವೇದಪಾರಾಯಣದ +ಫಲ +ಗಂ
ಗಾದಿ +ತೀರ್ಥ+ಸ್ನಾನ+ಫಲ+ ಕೃ
ಚ್ಛ್ರಾದಿ +ತಪಸಿನ +ಫಲವು +ಜ್ಯೋತಿಷ್ಟೋಮ+ಯಾಗ+ಫಲ
ಮೇದಿನಿಯನ್+ಒಲಿದಿತ್ತ+ ಫಲ+ ವ
ಸ್ತ್ರಾದಿ +ಕನ್ಯಾದಾನ+ಫಲವಹುದ್
ಆದರಿಸಿ +ಭಾರತದೊಳ್+ಒಂದಕ್ಷರವ+ ಕೇಳ್ದರಿಗೆ

ಅಚ್ಚರಿ:
(೧) ಫಲ ಪದದ ಪ್ರಯೋಗ – ೬ ಬಾರಿ ಪ್ರಯೋಗ