ಕರಿತುರಗ ನಿಕರವನು ಕಲಭೃ
ತ್ಯರ ವಿಲಾಸಿನಿಯರನು ರತ್ನಾ
ಭರಣ ವಸನ ಹಿರಣ್ಯ ಗೋಮಹಿಷಾದಿ ವಸ್ತುಗಳ
ತರಿಸಿದನು ಕಶ್ಯಪನು ಯದು ರಾ
ಯರ ಪುರೋಹಿತನಲ್ಲಿಗಾತನ
ಪರುಠವಿಸಿ ಕಳುಹಿದನು ಪಾಂಡುನೃಪಗೆ ವಸುದೇವ (ಆದಿ ಪರ್ವ, ೪ ಸಂಧಿ, ೬೭ ಪದ್ಯ)
ತಾತ್ಪರ್ಯ:
ವಸುದೇವನು ತನ್ನ ತಂಗಿಗೆ ಮಕ್ಕಳಾದುದನ್ನು ಕೇಳಿ, ಆನೆಗಳು, ಕುದುರೆಗಳು, ಭೃತ್ಯರು, ದಾಸಿಯರು, ಉತ್ತಮವಾದ ವಸ್ತ್ರ, ರತ್ನಾಭರಣ, ಚಿನ್ನ, ಗೋವು, ಎಮ್ಮೆ ಮುಂತಾದವುಗಳನ್ನು ತರಿಸಿದನು. ಯದುರಾಯರ ಪುರೋಹಿತರಾದ ಕಶ್ಯಪನುನ್ನು ಬರೆಮಾಡಿ, ಅವರೊಡನೆ ಪಾಂಡುಮಹಾರಾಜನಿಗೆ ಇವೆಲ್ಲವನ್ನು ಉಡುಗೊರೆಯಾಗಿ ಕಳಿಸಿದನು.
ಅರ್ಥ:
ಕರಿ: ಆನೆ; ತುರಗ: ಅಶ್ವ, ಕುದುರೆ; ನಿಕರ: ಗುಂಪು; ಭೃತ್ಯ: ಆಳು, ಸೇವಕ; ವಿಲಾಸಿನಿ: ದಾಸಿ; ರತ್ನ: ಬೆಲೆಬಾಳುವ ಮಣಿ; ಆಭರಣ: ಒಡವೆ; ವಸನ: ಬಟ್ಟೆ; ಹಿರಣ್ಯ: ಚಿನ್ನ; ಗೋ: ಗೋವು; ಮಹಿಷ: ಎಮ್ಮೆ; ಆದಿ: ಮುಂತಾದ; ವಸ್ತು: ಸಾಮಗ್ರಿ; ತರಿಸು: ಬರೆಮಾಡು; ರಾಯ: ರಾಜ; ಪುರೋಹಿತ: ವೇದೋಕ್ತ ವಿಧಿ, ಧಾರ್ಮಿಕ ವ್ರತ, ಶುಭಕಾರ್ಯಗಳನ್ನು ಮಾಡಿಸುವವನು; ಪರುಠವಿಸು: ಸಿದ್ಧಗೊಳಿಸು; ಕಳುಹು: ಬೀಳ್ಕೊಡು; ನೃಪ: ರಾಜ;
ಪದವಿಂಗಡಣೆ:
ಕರಿ+ತುರಗ+ ನಿಕರವನು +ಕಲ+ಭೃ
ತ್ಯರ+ ವಿಲಾಸಿನಿಯರನು +ರತ್ನಾ
ಭರಣ+ ವಸನ+ ಹಿರಣ್ಯ +ಗೋ+ಮಹಿಷಾದಿ +ವಸ್ತುಗಳ
ತರಿಸಿದನು +ಕಶ್ಯಪನು +ಯದು +ರಾ
ಯರ +ಪುರೋಹಿತನ್+ಅಲ್ಲಿಗ್ +ಆತನ
ಪರುಠವಿಸಿ +ಕಳುಹಿದನು +ಪಾಂಡು+ನೃಪಗೆ +ವಸುದೇವ