ಸೂತನಿಳಿದನು ಮುನ್ನ ರಥವನು
ಭೂತಳಾಧಿಪನಿಳಿದನಶ್ವ
ವ್ರಾತವನು ಕಡಿಯಣದ ನೇಣಲಿ ತೆಗೆದು ಬಂಧಿಸಿದ
ವಾತಜನ ಸಾತ್ಯಕಿಯ ಯಮಳರ
ಸೂತರಿಳಿದರು ಮುನ್ನ ತುರಗವ
ನಾತಗಳು ಸಂತೈಸಿದರು ಸಂಗರಪರಿಶ್ರಮವ (ಗದಾ ಪರ್ವ, ೮ ಸಂಧಿ, ೪೭ ಪದ್ಯ)
ತಾತ್ಪರ್ಯ:
ಯುಧಿಷ್ಠಿರನ ಸೂತನು ರಥವನ್ನಿಳಿದು ಕುದುರೆಗಳನ್ನು ಬಿಚ್ಚಿ ಲಾಯದಲ್ಲಿ ಕಟ್ಟಿದನು. ಸೂತನ ಬಳಿಕ ಧರ್ಮಜನೂ ಇಳಿದನು. ಇದರಂತೆ ಭೀಮ, ನಕುಲ ಸಹದೇವರು ಸಾತ್ಯಕಿ ಇವರ ಸೂತರಿಳಿದ ಮೇಲೆ ಅವರೂ ಇಳಿದರು. ಕುದುರೆಗಳಿಗಾದ ಸಂಗ್ರಾಮ ಆಯಾಸಕ್ಕೆ ಉಪಶಮನ ಮಾಡಿ ಸಂತೈಸಿದರು.
ಅರ್ಥ:
ಸೂತ: ಸಾರಥಿ; ಇಳಿ: ಕೆಳಕ್ಕೆ ಬಂದು; ಮುನ್ನ: ಮೊದಲು; ರಥ: ಬಂಡಿ; ಭೂತಳ: ಭೂಮಿ; ಅಧಿಪ: ರಾಜ; ಅಶ್ವ: ಕುದುರೆ; ವ್ರಾತ: ಗುಂಪು; ಕಡಿ: ಹತ್ತಿ ನೂಲಿನ ನೀಳವಾದ ಸುರುಳಿ, ಲಡಿ; ನೇಣು: ಹಗ್ಗ, ಹುರಿ; ತೆಗೆ: ಈಚೆಗೆ ತರು, ಹೊರತರು; ಬಂಧಿಸು: ಜೋಡಿಸು; ವಾತಜ: ವಾಯುಪುತ್ರ (ಭೀಮ); ಯಮಳ: ಅವಳಿ ಮಕ್ಕಳು; ಸಂತೈಸು: ಸಮಾಧಾನ ಪಡಿಸು; ಸಂಗರ: ಯುದ್ಧ; ಪರಿಶ್ರಮ: ಆಯಾಸ;
ಪದವಿಂಗಡಣೆ:
ಸೂತನ್+ಇಳಿದನು +ಮುನ್ನ+ ರಥವನು
ಭೂತಳಾಧಿಪನ್+ಇಳಿದನ್+ಅಶ್ವ
ವ್ರಾತವನು +ಕಡಿಯಣದ +ನೇಣಲಿ +ತೆಗೆದು +ಬಂಧಿಸಿದ
ವಾತಜನ +ಸಾತ್ಯಕಿಯ +ಯಮಳರ
ಸೂತರ್+ಇಳಿದರು +ಮುನ್ನ +ತುರಗವ
ನಾತಗಳು+ ಸಂತೈಸಿದರು +ಸಂಗರ+ಪರಿಶ್ರಮವ
ಅಚ್ಚರಿ:
(೧) ಅಶ್ವ, ತುರಗ – ಸಮಾನಾರ್ಥಕ ಪದ
(೨) ಭೀಮನನ್ನು ವಾತಜ ಎಂದು ಕರೆದಿರುವುದು
(೩) ವಾತ, ವ್ರಾತ – ಪದಗಳ ಬಳಕೆ