ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥ ತುರಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ (ಗದಾ ಪರ್ವ, ೨ ಸಂಧಿ, ೨೯ ಪದ್ಯ)
ತಾತ್ಪರ್ಯ:
ಶಕುನಿಯು ನಕುಲನ ಬಾಣಗಳನ್ನು ಕತ್ತರಿಸಿ ನಕುಲನನ್ನು ಬಾಣಗಳಿಂದ ಮುಚ್ಚಿದನು. ಶಕುನಿಯ ಬಾಣಗಳು ಸಹದೇವನ ರಥದ ಅಗ್ರಭಾಗದಲ್ಲಿ ತುಂಬಿದವು. ಪ್ರತಿಯಾಗಿ ಸಹದೇವನು ಶಕುನಿಯ ಬಾಣಗಳನ್ನು ಕತ್ತರಿಸಿ ಅವನ ರಥದ ಕುದುರೆಗಳನ್ನೂ ಅವನನ್ನೂ ಬಾಣಗಳಿಂದ ಪೀಡಿಸಿದನು.
ಅರ್ಥ:
ಎಸಲು: ಬಾಣ ಪ್ರಯೋಗ ಮಾಡು; ಅಸ್ತ್ರ: ಶಸ್ತ್ರ, ಆಯುಧ; ಖಂಡಿಸು: ಮುರಿ, ಸೀಳು; ಶರ: ಬಾಣ; ಔಘ: ಗುಂಪು; ಅಹಿತ: ವೈರಿ; ಮುಸುಕು: ಹೊದಿಕೆ; ಯೋನಿ; ಮೊನೆ: ತುದಿ, ಕೊನೆ; ಕಣೆ: ಬಾಣ; ಈಡಾಡು: ಚೆಲ್ಲು; ರಥ: ಬಂಡಿ; ಅಗ್ರ: ಮುಂಭಾಗ; ಕುಸುರಿ: ತುಂಡು; ಅತಿರಥ: ಪರಾಕ್ರಮಿ; ಬಾಣ: ಅಂಬು; ಪ್ರಸರ: ವಿಸ್ತಾರ, ಹರಹು; ರಥ: ಬಂಡಿ; ತುರಗ: ಅಶ್ವ; ಭಯ: ಅಂಜಿಕೆ; ಅದ್ದು: ತೋಯು; ಸೌಬಲ: ಶಕುನಿ; ಉದ್ದು: ಒರಸು, ಅಳಿಸು;
ಪದವಿಂಗಡಣೆ:
ಎಸಲು+ ಸಹದೇವ+ಅಸ್ತ್ರವನು +ಖಂ
ಡಿಸಿ +ಶರೌಘದಿನ್+ಅಹಿತ+ವೀರನ
ಮುಸುಕಿದನು +ಮೊನೆ+ಕಣೆಗಳ್+ಈಡಿರಿದವು +ರಥಾಗ್ರದಲಿ
ಕುಸುರಿದರಿದ್+ಅತಿರಥನ +ಬಾಣ
ಪ್ರಸರವನು +ರಥ +ತುರಗವನು +ಭಯ
ರಸದೊಳ್+ಅದ್ದಿದನ್+ಉದ್ದಿದನು +ಸಹದೇವ +ಸೌಬಲನ
ಅಚ್ಚರಿ:
(೧) ವೀರ, ಅತಿರಥ; ಬಾಣ, ಶರ – ಸಮಾನಾರ್ಥಕ ಪದ
(೨) ಅದ್ದಿದನ್, ಉದ್ದಿದನ್ – ಪ್ರಾಸ ಪದಗಳು