ಧರಣಿಪತಿ ಕೇಳ್ ಧರ್ಮಜನ ಮೋ
ಹರದೊಳುಳಿದುದು ತೇರು ಸಾವಿರ
ವೆರಡು ಗಜವೇಳ್ನೊರು ಮಿಕ್ಕುದು ಲಕ್ಕ ಪಾಯದಳ
ತುರಗ ಸಾವಿರವೈದು ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರುರು ಶಿಖಂಡಿ ದ್ರುಪದಸೂನು ದ್ರೌಪದೀಸುತರು (ಗದಾ ಪರ್ವ, ೩ ಸಂಧಿ, ೪ ಪದ್ಯ)
ತಾತ್ಪರ್ಯ:
ಎಲೈ ರಾಜ ಜನಮೇಜಯ ಕೇಳು, ಪಾಂಡವಸೇನೆಯಲ್ಲಿ ಎರಡು ಸಾವಿರ ರಥಗಳು, ಏಳುನೂರು ಆನೆಗಳು, ಐದುಸಾವಿರ ಕುದುರೆಗಳು, ಒಂದು ಲಕ್ಷ ಕಾಲಾಳುಗಳು. ಸಾತ್ಯಕಿ ಯುಧಾಮನ್ಯು ಉತ್ತಮೌಜಸ, ಶಿಖಂಡಿ, ಧೃಷ್ಟದ್ಯುಮ್ನ, ಉಪಪಾಂಡವರು, ಉಳಿದರು.
ಅರ್ಥ:
ಧರಣಿಪತಿ: ರಾಜ; ಮೋಹರ: ಯುದ್ಧ; ಉಳಿದು: ಮಿಕ್ಕ; ತೇರು: ಬಂಡಿ; ಸಾವಿರ: ಸಹಸ್ರ; ಗಜ: ಆನೆ; ಪಾಯದಳ: ಸೈನಿಕ; ತುರಗ: ಅಶ್ವ; ಉರು: ಶ್ರೇಷ್ಠ; ಸೂನು: ಮಗ; ಸುತ: ಮಗ;
ಪದವಿಂಗಡಣೆ:
ಧರಣಿಪತಿ +ಕೇಳ್ +ಧರ್ಮಜನ +ಮೋ
ಹರದೊಳ್+ಉಳಿದುದು +ತೇರು +ಸಾವಿರವ್
ಎರಡು+ ಗಜವ್+ಏಳ್ನೊರು +ಮಿಕ್ಕುದು +ಲಕ್ಕ +ಪಾಯದಳ
ತುರಗ +ಸಾವಿರವ್+ಐದು +ಸಾತ್ಯಕಿ
ವರ +ಯುಧಾಮನ್ಯು+ಉತ್ತಮೌಂಜಸರ್
ಉರು +ಶಿಖಂಡಿ +ದ್ರುಪದ+ಸೂನು+ ದ್ರೌಪದೀ+ಸುತರು
ಅಚ್ಚರಿ:
(೧) ಸೂನು, ಸುತ – ಸಮಾನಾರ್ಥಕ ಪದ