ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀ ತನಯರುನ್ನತ
ದೇಳಿಗೆಯನೇನೆಂಬೆನೈ ಕಾರುಣ್ಯಸಿಂಧುವಲಾ
ಶ್ರೀಲತಾಂಗಿಯರಮಣನಿನಿಬರೊ
ಳಾಳೊಡೆಯರಾರೆಂಬ ಭೇದವ
ಬೀಳುಕೊಟ್ಟೇ ನಡೆಸುತಿದ್ದನು ತನ್ನ ಮೈದುನರ (ಉದ್ಯೋಗ ಪರ್ವ, ೧ ಸಂಧಿ, ೧ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವರ ಉನ್ನತ ಏಳಿಗೆಯನ್ನು ಹೇಗೆ ತಾನೆ ಹೇಳಲಿ? ಕರುಣಾಸಾಗರನಾದ ಶ್ರೀಕೃಷ್ಣನು ಸೇವಕರು ಯಾರು ಒಡೆಯರು ಯಾರು ಎಂಬ ಭೇದವನ್ನೇ ಬಿಟ್ಟು ಮೈದುನರಾದ ಪಾಂಡವರೊಡನೆ ವ್ಯವಹರಿಸುತ್ತಿದ್ದನು.
ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಪಾಲ: ಪೋಷಿಸುವ; ತನಯ: ಮಕ್ಕಳು, ಮಗ; ಉನ್ನತ: ಹಿರಿಯ, ಉತ್ತಮ; ಏಳಿಗೆ: ಬೆಳವಣಿಗೆ; ಕಾರುಣ್ಯ: ಕರುಣೆ, ದಯೆ; ಸಿಂಧು: ಸಾಗರ; ಶ್ರೀ: ಲಕ್ಷ್ಮಿ; ಶ್ರೀಲತಾಂಗಿ: ಲಕ್ಷ್ಮಿ; ಲತಾಂಗಿ: ಬಳ್ಳಿಯಂತಹ ದೇಹವಿರುವ, ಸುಂದರಿ; ರಮಣ: ನಲ್ಲ, ಪ್ರಿಯಕರ; ಇನಿಬರ್: ಇಷ್ಟು ಜನ; ಆಳು: ಸೇವಕ; ಒಡೆಯ: ರಾಜ; ಭೇದ: ವ್ಯತ್ಯಾಸ; ಬೀಳುಕೊಡು: ಕಳುಹಿಸಿಕೊಡು; ನಡೆಸು: ನಿರ್ವಹಿಸು;
ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುಂತೀ +ತನಯರ್+ಉನ್ನತದ್
ಏಳಿಗೆಯನ್+ಏನೆಂಬೆನೈ +ಕಾರುಣ್ಯ+ಸಿಂಧುವಲಾ
ಶ್ರೀಲತಾಂಗಿಯ+ರಮಣನ್+ಇನಿಬರೊಳ್
ಆಳ್+ಒಡೆಯರ್+ಆರೆಂಬ +ಭೇದವ
ಬೀಳುಕೊಟ್ಟೇ +ನಡೆಸುತಿದ್ದನು +ತನ್ನ +ಮೈದುನರ
ಅಚ್ಚರಿ:
(೧) ಕೃಷ್ಣನನ್ನು (ವಿಷ್ಣು) ಶ್ರೀಲತಾಂಗಿಯ ರಮಣ, ಕಾರುಣ್ಯಸಿಂಧು ಎಂದು ಕರೆದಿರುವುದು
(೨) ಮೈದುನ – ಪಾಂಡವರಿಗೂ ಕೃಷ್ಣನಿಗು ಇರುವ ಸಂಬಂಧವನ್ನು ತಿಳಿಸಿರುವುದು