ಎಲೆ ಬೃಹನ್ನಳೆ ತೆತ್ತುದೆನಗ
ಗ್ಗಳೆಯರೊಳು ವಿಗ್ರಹವು ಸಾರಥಿ
ಯಳಿದನೆನ್ನವ ನೀನು ಸಾರಥಿಯಾಗಿ ಸಮರದಲಿ
ಉಳುಹಬೇಹುದು ನೀ ಸಮರ್ಥನು
ಫಲುಗುಣನ ಸಾರಥಿಯಲೈ ನೀ
ನೊಲಿದು ಮೆಚ್ಚಲು ಕಾದಿ ತೋರುವೆನಹಿತ ಸೇನೆಯಲಿ (ವಿರಾಟ ಪರ್ವ, ೬ ಸಂಧಿ, ೪೧ ಪದ್ಯ)
ತಾತ್ಪರ್ಯ:
ಉತ್ತರನು ಬೃಹನ್ನಳೆಯನ್ನು ಕಂಡು, ಎಲೆ ಬೃಹನ್ನಳೆ, ನನಗೆ ಮಹಾಬಲಶಾಲಿಯರೊಡನೆ ಯುದ್ಧಮಾಡುವೆ ಪ್ರಸಂಗ ಒದಗಿದೆ, ನನ್ನ ಸಾರಥಿಯು ಯುದ್ಧದಲ್ಲಿ ಸಾವನ್ನಪ್ಪಿದ್ದಾನೆ, ನೀನು ನನಗೆ ಯುದ್ಧದಲ್ಲಿ ಸಾರಥಿಯಾಗಿ ನನ್ನನ್ನು ಉಳಿಸಬೇಕು, ನೀನು ಅರ್ಜುನನ ಸಾರಥಿಯಲ್ಲವೇ? ನೀನು ಸಮರ್ಥನು, ನೀನು ಮೆಚ್ಚುವಂತೆ ಯುದ್ಧಮಾಡಿ ಶತ್ರುಗಳನ್ನು ಸೋಲಿಸುತ್ತೇನೆ.
ಅರ್ಥ:
ತೆತ್ತು: ಹೊಂದಿಕೊಂಡಿರು; ಅಗ್ಗ: ಶ್ರೇಷ್ಠ; ವಿಗ್ರಹ: ಯುದ್ಧ; ಸಾರಥಿ: ಗಾಡಿ ಓಡಿಸುವವ; ಅಳಿ: ಸಾವು; ಸಮರ: ಯುದ್ಧ; ಉಳುಹು: ಉಳಿಸು; ಸಮರ್ಥ: ಬಲಶಾಲಿ; ಫಲುಗುಣ: ಅರ್ಜುನ; ಒಲಿ: ಒಪ್ಪು; ಮೆಚ್ಚು:ಇಷ್ಟ; ಕಾದಿ: ಯುದ್ಧಮಾಡಿ; ತೋರುವೆ: ತೋರಿಸುವೆ, ಪ್ರದರ್ಶಿಸುವೆ; ಅಹಿತ: ಹಿತವಲ್ಲದ, ಶತ್ರು; ಸೇನೆ: ಸೈನ್ಯ;
ಪದವಿಂಗಡಣೆ:
ಎಲೆ +ಬೃಹನ್ನಳೆ +ತೆತ್ತುದ್+ಎನಗ
ಅಗ್ಗಳೆಯರೊಳು +ವಿಗ್ರಹವು+ ಸಾರಥಿ
ಯಳಿದನ್+ಎನ್ನವ +ನೀನು +ಸಾರಥಿಯಾಗಿ +ಸಮರದಲಿ
ಉಳುಹಬೇಹುದು +ನೀ +ಸಮರ್ಥನು
ಫಲುಗುಣನ +ಸಾರಥಿಯಲೈ +ನೀ
ನೊಲಿದು+ ಮೆಚ್ಚಲು +ಕಾದಿ +ತೋರುವೆನ್+ಅಹಿತ+ ಸೇನೆಯಲಿ
ಅಚ್ಚರಿ:
(೧) ನೀನು, ನೀ – ಪದಗಳ ಬಳಕೆ, ೩,೪, ೫ ಸಾಲು
(೨) ಶತ್ರಸೈನ್ಯವನ್ನು ಅಹಿತ ಸೇನೆ ಎಂದು ಹೇಳಿರುವುದು
(೩) ಸಾರಥಿ – ೨, ೩ ಸಾಲಿನಲ್ಲಿ ಬರುವ ಪದ