ಪದ್ಯ ೪೫: ಯುದ್ಧಕ್ಕೆ ಉತ್ತರನ ಸಿದ್ಧತೆ ಹೇಗಾಯಿತು?

ಮಂಗಳಾರತಿಯೆತ್ತಿದರು ನಿಖಿ
ಳಾಂಗನೆಯರುತ್ತರಗೆ ನಿಜ ಸ
ರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ
ಹೊಂಗೆಲಸಮಯ ಕವಚವನು ಪಾ
ರ್ಥಂಗೆ ಕೊಟ್ಟನು ಜೋಡಿಸೀಸಕ
ದಂಗಿಗಳನಳವಡಿಸಿ ರಾಜಕುಮಾರನನುವಾದ (ವಿರಾಟ ಪರ್ವ, ೬ ಸಂಧಿ, ೪೫ ಪದ್ಯ)

ತಾತ್ಪರ್ಯ:
ಆಸ್ಥಾನದಲ್ಲಿದ್ದ ಹೆಣ್ಣುಮಕ್ಕಳು ಉತ್ತರನಿಗೆ ಜಯದ ಆರತಿಯನ್ನು ಎತ್ತಿದರು, ಸರ್ವಾಂಗದಲ್ಲೂ ಶೃಂಗಾರಮಾಡಿಕೊಂಡು ಉತ್ತರನು ಸಿದ್ಧನಾಗಿ ರಥವನ್ನು ಏರಿದನು. ಬಂಗಾರದ ಕುಸುರಿ ಕೆಲಸದ ಕವಚವನ್ನು ಅರ್ಜುನನಿಗೆ ಕೊಟ್ಟು ತಾನು ಅಂಗರಕ್ಷೆ, ಶಿರಸ್ತ್ರಾಣಗಳನ್ನು ಧರಿಸಿ ಉತ್ತರನು ಸಿದ್ಧನಾದನು.

ಅರ್ಥ:
ಮಂಗಳ: ಶುಭ; ಆರತಿ: ನೀರಾಂಜನ; ಎತ್ತು: ತೋರಿಸು, ಬೆಳಗು; ನಿಖಿಳ: ಸರ್ವ; ಅಂಗನೆ:ಸ್ತ್ರೀ; ನಿಖಿಳಾಂಗನೆ: ಎಲ್ಲಾ ಹೆಣ್ಣುಮಕ್ಕಳು; ನಿಜ: ನೈಜ; ಸರ್ವಾಂಗ: ಎಲ್ಲಾ ದೇಹದ ಅಂಗ; ಶೃಂಗಾರ: ಅಲಂಕಾರ; ಹೊಳೆ: ಕಾಂತಿಯುಕ್ತ; ಬಂದು: ಆಗಮಿಸಿ; ರಥ: ತೇರು, ಬಂಡಿ; ಏರು: ಹತ್ತು; ಹೊಂಗೆಲಸಮಯ: ಬಂಗಾರದಿಂದು ಕೂಡಿದ; ಹೊನ್ನು; ಚಿನ್ನ; ಕೆಲಸ:ಕಾರ್ಯ; ಕವಚ: ಹೊದಿಕೆ; ಕೊಟ್ಟು: ನೀಡು; ಜೋಡಿ: ಜೊತೆ; ಸೀಸಕ: ಶಿರಸ್ತ್ರಾಣ; ಅಂಗಿ: ಬಟ್ಟೆ, ಕವಚ; ಅಳವಡಿಸು: ಜೋಡಿಸು; ಅನುವು: ರೀತಿ; ಅನುವಾಗು: ಸಿದ್ಧವಾಗು;

ಪದವಿಂಗಡಣೆ:
ಮಂಗಳಾರತಿ+ಯೆತ್ತಿದರು +ನಿಖಿ
ಳಾಂಗನೆಯರ್+ಉತ್ತರಗೆ +ನಿಜ +ಸ
ರ್ವಾಂಗ +ಶೃಂಗಾರದಲಿ +ಹೊಳೆವುತ+ ಬಂದು +ರಥವೇರಿ
ಹೊಂಗೆಲಸಮಯ +ಕವಚವನು +ಪಾ
ರ್ಥಂಗೆ +ಕೊಟ್ಟನು +ಜೋಡಿ+ಸೀಸಕದ್
ಅಂಗಿಗಳನ್+ಅಳವಡಿಸಿ +ರಾಜಕುಮಾರನ್+ಅನುವಾದ

ಅಚ್ಚರಿ:
(೧) ಉತ್ತರನು ಯುದ್ಧಕ್ಕೆ ಹೋಗುವಾಗ – ಸರ್ವಾಂಗ ಶೃಂಗಾರದಲಿ ಹೊಳೆವುತ ಬಂದನು – ಯುದ್ದಕ್ಕೆ ಶೃಂಗಾರಮಯವಾಗಿ ಹೋಗುತ್ತರೆಯೆ ಎಂದು ಇಲ್ಲಿ ಕವಿ ಮಾರ್ಮಿಕವಾಗಿ ಕೇಳುವಂತಿದೆ