ಪದ್ಯ ೨೨: ಯಾರನ್ನು ಆಹಿತಾಗ್ನಿಯಿಂದ ದಹಿಸಿದರು?

ಕುರುಪತಿಯ ರವಿಸುತನ ಮಾದ್ರೇ
ಶ್ವರನ ದುಶ್ಯಾಸನ ವಿಕರ್ಣಾ
ದ್ಯರ ಜಯದ್ರಥ ಬಾಹ್ಲಿಕರ ಭಗದತ್ತ ಲಕ್ಷಣರ
ಗುರುವರನ ಪಾಂಚಾಲ ಮತ್ಸ್ಯೇ
ಶ್ವರರ ಕುಂತೀಭೋಜನೃಪಮು
ಖ್ಯರನು ವಿಧಿಪೂರ್ವಕದಿ ದಹಿಸಿದರಾಹಿತಾಗ್ನಿಯಲಿ (ಗದಾ ಪರ್ವ, ೧೨ ಸಂಧಿ, ೨೨
ಪದ್ಯ)

ತಾತ್ಪರ್ಯ:
ಕೌರವ, ಕರ್ಣ, ಶಲ್ಯ, ದುಶ್ಯಾಸನ, ವಿಕರ್ನನೇ ಮೊದಲಾದವರು, ಜಯದ್ರಥ, ಬಾಹ್ಲಿಕ, ಭಗದತ್ತ, ಲಕ್ಷಣ, ದ್ರೋಣ, ದ್ರುಪದ, ವಿರಾಟ, ಕುಂತೀಭೋಜ ಮೊದಲಾದವರನ್ನು ಆಹಿತಾಗ್ನಿಯಿಂದ ವಿಧಿಪೂರ್ವಕವಾಗಿ ದಹಿಸಿದರು.

ಅರ್ಥ:
ನೃಪ: ರಾಜ; ಮುಖ್ಯ: ಶ್ರೇಷ್ಠ; ವಿಧಿ: ನಿಯಮ; ಪೂರಕ: ಪೂರ್ಣಗೊಳಿಸು; ದಹಿಸು: ಸುಡು; ಅಗ್ನಿ: ಬೆಂಕಿ; ಸುತ: ಮಗ; ರವಿ: ಸೂರ್ಯ; ಆದಿ: ಮುಂತಾದ;

ಪದವಿಂಗಡಣೆ:
ಕುರುಪತಿಯ+ ರವಿಸುತನ+ ಮಾದ್ರೇ
ಶ್ವರನ +ದುಶ್ಯಾಸನ +ವಿಕರ್ಣಾ
ದ್ಯರ +ಜಯದ್ರಥ+ ಬಾಹ್ಲಿಕರ +ಭಗದತ್ತ +ಲಕ್ಷಣರ
ಗುರುವರನ +ಪಾಂಚಾಲ+ ಮತ್ಸ್ಯೇ
ಶ್ವರರ+ ಕುಂತೀಭೋಜ+ನೃಪ+ಮು
ಖ್ಯರನು+ ವಿಧಿಪೂರ್ವಕದಿ+ ದಹಿಸಿದರ್+ಆಹಿತಾಗ್ನಿಯಲಿ

ಅಚ್ಚರಿ:
(೧) ವರ, ಮುಖ್ಯ – ಸಾಮ್ಯಾರ್ಥ ಪದ

ನಿಮ್ಮ ಟಿಪ್ಪಣಿ ಬರೆಯಿರಿ