ಪದ್ಯ ೨೩: ಯೋಧರ ಅಪರಕರ್ಮವನ್ನು ಹೇಗೆ ಮಾಡಲಾಯಿತು?

ಕಳನ ಚೌಕದ ಸುತ್ತಲೊಟ್ಟಿಸಿ
ತಳಿಗಳನು ಬಹಳಾಗ್ನಿಯನು ಕೈ
ಕೊಳಿಸಿದರು ದಹಿಸಿದರು ಬಹಳಾಕ್ಷೋಹಿಣೀಭಟರ
ಬಳಿಕ ಹಸ್ತಿನಪುರದ ಸೀಮಾ
ಸ್ಥಳಕೆ ಬಂದರು ನಿಖಿಳ ಕಾಂತಾ
ವಳಿಸಹಿತ ಗಂಗಾವಗಹನವ ಮಾಡಿದನು ನೃಪತಿ (ಗದಾ ಪರ್ವ, ೧೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ರಣರಂಗದ ಸುತ್ತಲೂ ಕೊರಡುಗಲನ್ನೊಟ್ಟಿಸಿ, ಹದಿನೆಂಟು ಅಕ್ಷೋಹಿಣೀ ಸೈನ್ಯದ ಯೋಧರನ್ನು ದಹಿಸಿದರು. ನಂತರ ಧರ್ಮಜನು ಹಸ್ತಿನಾವತಿಯ ಪ್ರದೇಶಕ್ಕೆ ಬಂದು ಸ್ತ್ರೀಯರೊಡನೆ ಗಂಗಾ ಸ್ನಾನವನ್ನು ಮಾಡಿದರು.

ಅರ್ಥ:
ಕಳ: ರಣರಂಗ; ಚೌಕ: ಚತುಷ್ಕಾಕಾರವಾದುದು; ಸುತ್ತ: ಎಲ್ಲಾ ಕಡೆ; ಒಟ್ಟಿಸು: ಕೂಡಿಸು; ತಳಿ: ಹರಡು, ಕೆದರು; ಬಹಳ: ತುಂಬ; ಅಗ್ನಿ: ಬೆಂಕಿ; ಕೈಕೊಳಿಸು: ಸ್ವೀಕರಿಸು; ದಹಿಸು: ಸುಡು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಭಟ: ಸೈನಿಕ; ಬಳಿಕ: ನಂತರ; ಸೀಮೆ: ಎಲ್ಲೆ, ಗಡಿ; ಸ್ಥಳ: ಪ್ರದೇಶ; ಬಂದು: ಆಗಮಿಸು; ನಿಖಿಳ: ಎಲ್ಲಾ; ಕಾಂತಾವಳಿ: ಸ್ತ್ರೀಯರ ಗುಂಪು; ಅವಗಾಹ: ಸ್ನಾನ; ನೃಪತಿ: ರಾಜ;

ಪದವಿಂಗಡಣೆ:
ಕಳನ +ಚೌಕದ +ಸುತ್ತಲೊಟ್ಟಿಸಿ
ತಳಿಗಳನು +ಬಹಳಾಗ್ನಿಯನು+ ಕೈ
ಕೊಳಿಸಿದರು +ದಹಿಸಿದರು +ಬಹಳ+ಅಕ್ಷೋಹಿಣೀ+ಭಟರ
ಬಳಿಕ +ಹಸ್ತಿನಪುರದ ಸೀಮಾ
ಸ್ಥಳಕೆ+ ಬಂದರು +ನಿಖಿಳ +ಕಾಂತಾ
ವಳಿ+ಸಹಿತ +ಗಂಗಾವಗಹನವ+ ಮಾಡಿದನು +ನೃಪತಿ