ಕಳನ ಚೌಕದ ಸುತ್ತಲೊಟ್ಟಿಸಿ
ತಳಿಗಳನು ಬಹಳಾಗ್ನಿಯನು ಕೈ
ಕೊಳಿಸಿದರು ದಹಿಸಿದರು ಬಹಳಾಕ್ಷೋಹಿಣೀಭಟರ
ಬಳಿಕ ಹಸ್ತಿನಪುರದ ಸೀಮಾ
ಸ್ಥಳಕೆ ಬಂದರು ನಿಖಿಳ ಕಾಂತಾ
ವಳಿಸಹಿತ ಗಂಗಾವಗಹನವ ಮಾಡಿದನು ನೃಪತಿ (ಗದಾ ಪರ್ವ, ೧೨ ಸಂಧಿ, ೨೩ ಪದ್ಯ)
ತಾತ್ಪರ್ಯ:
ರಣರಂಗದ ಸುತ್ತಲೂ ಕೊರಡುಗಲನ್ನೊಟ್ಟಿಸಿ, ಹದಿನೆಂಟು ಅಕ್ಷೋಹಿಣೀ ಸೈನ್ಯದ ಯೋಧರನ್ನು ದಹಿಸಿದರು. ನಂತರ ಧರ್ಮಜನು ಹಸ್ತಿನಾವತಿಯ ಪ್ರದೇಶಕ್ಕೆ ಬಂದು ಸ್ತ್ರೀಯರೊಡನೆ ಗಂಗಾ ಸ್ನಾನವನ್ನು ಮಾಡಿದರು.
ಅರ್ಥ:
ಕಳ: ರಣರಂಗ; ಚೌಕ: ಚತುಷ್ಕಾಕಾರವಾದುದು; ಸುತ್ತ: ಎಲ್ಲಾ ಕಡೆ; ಒಟ್ಟಿಸು: ಕೂಡಿಸು; ತಳಿ: ಹರಡು, ಕೆದರು; ಬಹಳ: ತುಂಬ; ಅಗ್ನಿ: ಬೆಂಕಿ; ಕೈಕೊಳಿಸು: ಸ್ವೀಕರಿಸು; ದಹಿಸು: ಸುಡು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಭಟ: ಸೈನಿಕ; ಬಳಿಕ: ನಂತರ; ಸೀಮೆ: ಎಲ್ಲೆ, ಗಡಿ; ಸ್ಥಳ: ಪ್ರದೇಶ; ಬಂದು: ಆಗಮಿಸು; ನಿಖಿಳ: ಎಲ್ಲಾ; ಕಾಂತಾವಳಿ: ಸ್ತ್ರೀಯರ ಗುಂಪು; ಅವಗಾಹ: ಸ್ನಾನ; ನೃಪತಿ: ರಾಜ;
ಪದವಿಂಗಡಣೆ:
ಕಳನ +ಚೌಕದ +ಸುತ್ತಲೊಟ್ಟಿಸಿ
ತಳಿಗಳನು +ಬಹಳಾಗ್ನಿಯನು+ ಕೈ
ಕೊಳಿಸಿದರು +ದಹಿಸಿದರು +ಬಹಳ+ಅಕ್ಷೋಹಿಣೀ+ಭಟರ
ಬಳಿಕ +ಹಸ್ತಿನಪುರದ ಸೀಮಾ
ಸ್ಥಳಕೆ+ ಬಂದರು +ನಿಖಿಳ +ಕಾಂತಾ
ವಳಿ+ಸಹಿತ +ಗಂಗಾವಗಹನವ+ ಮಾಡಿದನು +ನೃಪತಿ