ಪದ್ಯ ೧೬: ದುರ್ಯೊಧನನ ಬಗ್ಗೆ ಗಾಂಧಾರಿಯು ಹೇಗೆ ದುಃಖಿಸಿದಳು?

ಇತ್ತ ನೋಡೈ ಕೃಷ್ಣ ತನ್ನಯ
ಮತ್ತದಂತಿಯನಿಂದುಕುಲ ರಾ
ಜೋತ್ತಮನನೇಕಾದಶಾಕ್ಷೋಹಿಣಿಯ ವಲ್ಲಭನ
ಹತ್ತೆ ಹಿಡಿದೋಲಗಿಸುವರು ವರ
ಮತ್ತ ಕಾಶಿನಿಯರುಗಳೀಗಳು
ಸುತ್ತ ಮುತ್ತಿತು ಘೂಕ ವಾಯಸ ಜಂಬುಕವ್ರಾತ (ಗದಾ ಪರ್ವ, ೧೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಗಾಂಧಾರಿಯು ಶ್ರೀಕೃಷ್ಣನಿಗೆ ತನ್ನ ಮಗನ ದೇಹವನ್ನು ನೋಡಿ ದುಃಖದಿಂದ ಹೇಳುತ್ತಾ, ಕೃಷ್ಣಾ, ನನ್ನ ಮದದಾನೆಯನ್ನು ಇಲ್ಲಿ ನೋಡು ನನ್ನ ಮಗನು ಚಂದ್ರವಂಶದ ಸಾರ್ವಭೌಮ. ಹನ್ನೊಂದು ಅಕ್ಷೋಹಿಣಿಯ ಒಡೆಯನಾಗಿದ್ದ. ಅವನ ಸಮ್ಗವನ್ನು ಬಯಸಿ ಸುಮ್ದರಿಯರು ಓಲೈಸುತ್ತಿದ್ದರು. ಈಗಲಾದರೋ ಗೂಗೆ, ಕಾಗೆ, ನರಿಗಳು ಸುತ್ತಲೂ ಮುತ್ತಿವೆ ನೋಡು ಎಂದು ದುಃಖಿಸಿದಳು.

ಅರ್ಥ:
ನೋಡು: ವೀಕ್ಷಿಸು; ಮತ್ತ: ಮದ; ದಂತಿ: ಆನೆ; ಇಂದುಕುಲ: ಚಂದ್ರವಂಶ; ರಾಜ: ನೃಪ; ಉತ್ತಮ: ಶ್ರೇಷ್ಠ; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ವಲ್ಲಭ: ಒಡೆಯ; ಹತ್ತೆ: ಹತ್ತಿರ, ಸಮೀಪ; ಹಿಡಿ: ಗ್ರಹಿಸು; ಓಲಗ: ದರ್ಬಾರು; ವರ: ಶ್ರೇಷ್ಠ; ಮತ್ತ:ಅಮಲು; ಕಾಶಿನಿ: ಸ್ತ್ರೀ, ಸುಂದರಿ; ಈಗಳು: ಈಗ; ಸುತ್ತ: ಎಲ್ಲಾ ಕಡೆ, ಅಕ್ಕ ಪಕ್ಕ; ಮುತ್ತು: ಆವರಿಸು; ಘೂಕ: ಗೂಬೆ, ವಾಯಸ: ಕಾಗೆ; ಜಂಬುಕ: ನರಿ; ವ್ರಾತ: ಗುಂಪು;

ಪದವಿಂಗಡಣೆ:
ಇತ್ತ+ ನೋಡೈ +ಕೃಷ್ಣ +ತನ್ನಯ
ಮತ್ತದಂತಿಯನ್ +ಇಂದುಕುಲ +ರಾ
ಜೋತ್ತಮನನ್+ಏಕಾದಶ+ಅಕ್ಷೋಹಿಣಿಯ +ವಲ್ಲಭನ
ಹತ್ತೆ+ ಹಿಡಿದ್+ಓಲಗಿಸುವರು +ವರ
ಮತ್ತ+ ಕಾಶಿನಿಯರುಗಳ್+ಈಗಳು
ಸುತ್ತ+ ಮುತ್ತಿತು +ಘೂಕ +ವಾಯಸ +ಜಂಬುಕ+ವ್ರಾತ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳುವ ಪರಿ – ಮತ್ತದಂತಿಯನಿಂದುಕುಲ ರಾಜೋತ್ತಮನನೇಕಾದಶಾಕ್ಷೋಹಿಣಿಯ ವಲ್ಲಭನ