ಪದ್ಯ ೭೪: ಅಭಿಮನ್ಯುವು ಕೌರವ ಮಕ್ಕಳನ್ನು ಹೇಗೆ ಎದುರಿಸಿದನು?

ದಿಟ್ಟರೋ ಲಕ್ಷಣನವರು ಜಗ
ಜಟ್ಟಿಗಳಲಾ ರಾಜಕುಲದಲಿ
ಹುಟ್ಟಿದರೆ ಕೆಲರೀಸು ಚಪಳತೆ ಯಾರಿಗುಂಟೆನುತ
ಕಟ್ಟಿದನು ಕಣೆಗಳಲಿ ಸುತ್ತಲು
ತಟ್ಟಿವಲೆಗಳ ಸೋಹಿನಲಿ ಬೆ
ನ್ನಟ್ಟಿ ಪಾರ್ಥಕುಮಾರ ಸದೆದನು ವೈರಿಮೃಗ ಕುಲವ (ದ್ರೋಣ ಪರ್ವ, ೫ ಸಂಧಿ, ೭೪ ಪದ್ಯ)

ತಾತ್ಪರ್ಯ:
ಲಕ್ಷಣನೂ ಅವನ ತಮ್ಮಂದಿರೂ ಜಗಜಟ್ಟಿಗಳಲ್ಲವೇ? ಇಂತಹ ರಾಜಪುತ್ರರು ಯಾರಾದರೂ ಹುಟ್ಟಿರುವರೇ, ಇಂತಹ ಕೈಚಳಕ ಯಾರಿಗಿದೆ, ಎನ್ನುತ್ತಾ ಅಭಿವನ್ಯುವು ಅವರ ಸುತ್ತಲೂ ಬಾಣಗಳ ಬೇಲಿಯನ್ನು ಕಟ್ಟಿ ಬೆನ್ನಟ್ಟಿ ವೈರಿ ಮೃಗಗಳನ್ನು ಸದೆದು ಹಾಕಿದನು.

ಅರ್ಥ:
ದಿಟ್ಟ: ಧೈರ್ಯವಂತ; ಜಗಜಟ್ಟಿ: ಪರಾಕ್ರಮಿ; ಕುಲ: ವಂಶ; ಹುಟ್ಟು: ಜನಿಸು; ಕೆಲರು: ಕೆಲವರು; ಈಸು: ಇಷ್ಟು; ಚಪಲ:ಚಂಚಲ; ಕಟ್ಟು: ಬಂಧಿಸು; ಕಣೆ: ಬಾಣ; ಸುತ್ತ: ಬಳಸಿಕೊಂಡು; ತಟ್ಟಿ: ಬಿದಿರಿನ ತಡಿಕೆ, ಬಿದಿರಿನ ಗೋಡೆ; ಸೋಹು:ಅಟ್ಟು, ಓಡಿಸು; ಬೆನ್ನಟ್ಟು: ಹಿಂದೆಬೀಳು; ಕುಮಾರ: ಮಗ; ಸದೆ: ಕುಟ್ಟು, ಪುಡಿಮಾಡು; ವೈರಿ: ಶತ್ರು; ಮೃಗ: ಪ್ರಾಣಿ; ಕುಲ: ವಂಶ;

ಪದವಿಂಗಡಣೆ:
ದಿಟ್ಟರೋ +ಲಕ್ಷಣನವರು +ಜಗ
ಜಟ್ಟಿಗಳಲಾ +ರಾಜಕುಲದಲಿ
ಹುಟ್ಟಿದರೆ +ಕೆಲರ್+ಈಸು +ಚಪಳತೆ +ಯಾರಿಗುಂಟೆನುತ
ಕಟ್ಟಿದನು +ಕಣೆಗಳಲಿ +ಸುತ್ತಲು
ತಟ್ಟಿವಲೆಗಳ +ಸೋಹಿನಲಿ +ಬೆ
ನ್ನಟ್ಟಿ +ಪಾರ್ಥಕುಮಾರ +ಸದೆದನು +ವೈರಿ+ಮೃಗ +ಕುಲವ

ಅಚ್ಚರಿ:
(೧) ಕಟ್ಟಿ, ಹುಟ್ಟಿ, ಜಟ್ಟಿ, ಬೆನ್ನಟ್ಟಿ, ತಟ್ಟಿ – ಪ್ರಾಸ ಪದಗಳು